ಬೆಂಗಳೂರು: ವೈದ್ಯಕೀಯ ಕಾಲೇಜುಗಳಲ್ಲಿ ‘ಸೀಟ್ ಬ್ಲಾಕಿಂಗ್’ ದಂಧೆಗೆ ಮಟ್ಟ ಹಾಕಲು ರಾಜ್ಯ ಸರ್ಕಾರ ಮುಂದಾಗಿದ್ದು, ತಪ್ಪಿತಸ್ಥರಿಗೆ ₹50 ಲಕ್ಷದವರೆಗೆ ದಂಡ ವಿಧಿಸಿ, ಶಿಕ್ಷೆಗೆ ಗುರಿಪಡಿಸಲು ತೀರ್ಮಾನಿಸಿದೆ.
ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಅವರು ‘ಪ್ರಜಾವಾಣಿ' ಮತ್ತು ‘ಡೆಕ್ಕನ್ ಹೆರಾಲ್ಡ್’ ಏರ್ಪಡಿಸಿದ್ದ ಸಂವಾದದಲ್ಲಿ ಈ ವಿಷಯ ತಿಳಿಸಿದರು.
ವೈದ್ಯಕೀಯ ಕಾಲೇಜು ಪ್ರವೇಶ ಪ್ರಕ್ರಿಯೆಯಲ್ಲಿ ಬಯೋ ಮೆಟ್ರಿಕ್ ಮತ್ತು ಆಧಾರ್ ಕಡ್ಡಾಯ ಗೊಳಿಸಲಾಗುವುದು. ಸೀಟ್ ಬ್ಲಾಕಿಂಗ್ ತಪ್ಪಿಸಲು ರಾಷ್ಟ್ರ ಮಟ್ಟದ ಪೋರ್ಟಲ್ ಆರಂಭಿಸಲು ಉದ್ದೇಶಿಸಿರುವುದಾಗಿ ಎಂದರು.
ರಾಜ್ಯದ ಸರ್ಕಾರಿ ವೈದ್ಯಕೀಯ ಕಾಲೇಜುಗಳಲ್ಲಿ ಬೋಧನೆಗಾಗಿ ಅತ್ಯುತ್ತಮ ತಜ್ಞ ವೈದ್ಯರನ್ನು ಆಕರ್ಷಿಸಲು ಕೇಂದ್ರ ಸರ್ಕಾರದ ಏಳನೇ ವೇತನ ಆಯೋಗದ ಶಿಫಾರಸ್ಸಿನಂತೆ ವೇತನ ನೀಡಲು ಉದ್ದೇಶಿಸಲಾಗಿದೆ ಎಂದರು.
ಸಂವಾದದ ಮುಖ್ಯಾಂಶಗಳು:
-ರಾಜ್ಯದ ಎಲ್ಲ ಜಿಲ್ಲಾ ಕೇಂದ್ರಗಳಲ್ಲೂ ಸರ್ಕಾರಿ ವೈದ್ಯಕೀಯ ಕಾಲೇಜುಗಳನ್ನು ಆರಂಭಿಸಲಾಗುವುದು.
-ವೈದ್ಯ, ದಂತ ವೈದ್ಯ, ನರ್ಸಿಂಗ್ ಮತ್ತು ಪ್ಯಾರಾ ಮೆಡಿಕಲ್ ಕೋರ್ಸ್ಗಳ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ವಿದೇಶಗಳಿಗೆ ವಿನಿಮಯ ಯೋಜನೆಯಡಿ ಕಳಿಸಲಾಗುವುದು.
-ಎಲ್ಲ ಸರ್ಕಾರಿ ವೈದ್ಯಕೀಯ ಕಾಲೇಜುಗಳನ್ನು ಏಮ್ಸ್ ಗುಣಮಟ್ಟಕ್ಕೆ ಏರಿಸಲಾಗುವುದು. ಈ ಎಲ್ಲ ಕಾಲೇಜುಗಳಲ್ಲೂ ಆಸ್ಪತ್ರೆ ಆರಂಭ.
-ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದಲ್ಲಿ ಪ್ಲೇಸ್ಮೆಂಟ್ ಸೆಲ್ ಆರಂಭಿಸಲಾಗುವುದು.
-ಇದೇ ವರ್ಷದಿಂದ ವೈದ್ಯಕೀಯ ಕೋರ್ಸ್ಗಳ ಪಠ್ಯದಲ್ಲಿ ಯೋಗ ವಿಜ್ಞಾನವನ್ನು ಸೇರಿಸಲಾಗುವುದು.