ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಸ್‌ಡಿಪಿಐ ನಿಷೇಧ; ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಲು ರಾಜ್ಯ ಸರ್ಕಾರ ತೀರ್ಮಾನ

Last Updated 17 ಜನವರಿ 2020, 19:30 IST
ಅಕ್ಷರ ಗಾತ್ರ

ಬೆಂಗಳೂರು: ‘ರಾಜ್ಯದಲ್ಲಿ ಭಯೋತ್ಪಾದನಾ ಚಟುವಟಿಕೆ ನಡೆಸುತ್ತಿರುವ ‘ಪಾಪ್ಯುಲರ್‌ ಫ್ರಂಟ್‌ ಆಫ್‌ ಇಂಡಿಯಾ’(ಪಿಎಫ್‌ಐ) ಮತ್ತು ‘ಸೋಷಿಯಲ್‌ ಡೆಮಾಕ್ರಟಿಕ್‌ ಪಾರ್ಟಿ ಆಫ್‌ ಇಂಡಿಯಾ’ (ಎಸ್‌ಡಿಪಿಐ) ಸಂಘಟನೆಗಳನ್ನು ನಿಷೇಧಿಸಲು ನಿರ್ಧರಿಸಲಾಗಿದೆ’ ಗೃಹ ಸಚಿವ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.

‘ನಿಷೇಧಕ್ಕೆ ಈಗಾಗಲೇ ಕ್ರಮಗಳನ್ನು ಆರಂಭಿಸಿದ್ದು, ಇವೆರಡೂ ಸಂಘಟನೆಗಳ ಬಗ್ಗೆ ಪೊಲೀಸರಿಂದ ವಿವರವಾದ ವರದಿ ಕೇಳಿದ್ದೇವೆ. ವರದಿ ಸಲ್ಲಿಕೆಯಾದ ತಕ್ಷಣ ಕಾನೂನು ಇಲಾಖೆ ಜತೆ ಚರ್ಚಿಸಿ, ಕೇಂದ್ರಕ್ಕೆ ಸಲ್ಲಿಸಲಾಗುವುದು’ ಎಂದು ಅವರು ಸಚಿವ ಸಂಪುಟ ಸಭೆಯ ಬಳಿಕ ಮಾಧ್ಯಮಗೋಷ್ಠಿಯಲ್ಲಿ ತಿಳಿಸಿದರು.

‘ರಾಜ್ಯದ ಹಲವೆಡೆ ಹಿಂದೂ ಸಂಘಟನೆಗಳ ಕಾರ್ಯಕರ್ತರ ಹತ್ಯೆ, ಮೈಸೂರಿನಲ್ಲಿ ಕಾಂಗ್ರೆಸ್‌ ಶಾಸಕ ತನ್ವೀರ್ ಸೇಠ್‌ ಅವರ ಕೊಲೆ ಯತ್ನ, ಮಂಗಳೂರಿನಲ್ಲಿ ವ್ಯವಸ್ಥಿತ ಹಿಂಸಾಚಾರಕ್ಕೆ ಈ ಸಂಘಟನೆಗಳೇ ಕಾರಣ. ಇವುಗಳು ನಡೆಸುತ್ತಿರುವ ಭಯೋತ್ಪಾದಕ ಚಟುವಟಿಕೆಗಳ ಮಾಹಿತಿ ಇದೆ. ಹಿಂದಿನ ಕಾಂಗ್ರೆಸ್‌ ಸರ್ಕಾರ ಇವೆರಡೂ ಸಂಘಟನೆಗಳ ಮೇಲಿದ್ದ ಗಂಭೀರ ಪ್ರಕರಣಗಳನ್ನು ಕೈಬಿಟ್ಟ ಬಳಿಕ ಚಟುವಟಿಕೆ ಇನ್ನಷ್ಟು ಹೆಚ್ಚು ಮಾಡಿವೆ’ ಎಂದು ಹೇಳಿದರು.

‘ಉಗ್ರವಾದಿ ಗುಂಪು ಎಂದು ಗುರುತಿಸಲಾಗಿದ್ದ ‘ಸಿಮಿ’ ನಿಷೇಧವಾದ ಬಳಿಕ ಬೇರೆ ಬೇರೆ ಹೆಸರಿನಲ್ಲಿ ಸಂಘಟನೆ ಕಟ್ಟಿಕೊಂಡು ಭಯೋತ್ಪಾದನಾ ಚಟುವಟಿಕೆ ಆರಂಭಿಸಿವೆ.ಪಿಎಫ್‌ಐ, ಎಸ್‌ಡಿಪಿಐ ಸಂಘಟನೆಗಳು ವಿದೇಶಿ ಭಯೋತ್ಪಾದಕ ಸಂಘಟನೆಗಳ ಜತೆಗೂ ನಂಟು ಹೊಂದಿವೆ. ಇನ್ನೂ ಕೆಲವು ಸಣ್ಣ ಗುಂಪುಗಳಿದ್ದು ಅವುಗಳ ಮೇಲೂ ನಿಗಾ ಇಡಲಾಗಿದೆ’ ಎಂದರು.

‘ಹಿಂದೂ ಮುಖಂಡರ ಹತ್ಯೆ ಸಂಚು ಬಯಲು’

ಪೌರತ್ವ (ತಿದ್ದುಪಡಿ) ಕಾಯ್ದೆ (ಸಿಎಎ) ಜಾರಿ ಬೆಂಬಲಿಸಿ ಡಿ. 22ರಂದು ನಗರದಲ್ಲಿ ನಡೆದ ಜನಜಾಗೃತಿ ಸಮಾವೇಶದಲ್ಲಿ ಭಾಗವಹಿಸಿದ್ದ ಆರ್‌ಎಸ್‌ಎಸ್ ಕಾರ್ಯಕರ್ತ ವರುಣ್ ಹತ್ಯೆಗೆ ಯತ್ನಿಸಿದ ಆರು ಆರೋಪಿಗಳನ್ನು ಕಲಾಸಿಪಾಳ್ಯ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಆರ್.ಟಿ. ನಗರದ ಟೈಲರ್‌ ಇರ್ಫಾನ್ ಅಲಿಯಾಸ್ ಮೊಹಮ್ಮದ್ ಇರ್ಫಾನ್ (33), ಎಲೆಕ್ಟ್ರಿಕಲ್ ಇಂಟೀರಿಯರ್ ಕೆಲಸ ಮಾಡುತ್ತಿರುವ ಸನಾಅಲಿಯಾಸ್ ಸನಾವುಲ್ಲಾ ಷರೀಫ್ (28), ಭುವನೇಶ್ವರಿನಗರದ ಸೈಯ್ಯದ್ಅಕ್ಬರ್ ಅಲಿಯಾಸ್ ಮೆಕ್ಯಾನಿಕ್ ಅಕ್ಬರ್ (46), ಕೆ.ಜಿ. ಹಳ್ಳಿಯ ಗೋವಿಂದಪುರ ನಿವಾಸಿ, ಅಮೆಜಾನ್ ಕಂಪನಿಯಲ್ಲಿ ಡೆಲಿವರಿ ಬಾಯ್ ಅಕ್ಬರ್ ಬಾಷಾ ಅಲಿಯಾಸ್ ಅಕ್ಬರ್ (27), ಲಿಂಗರಾಜಪುರದ ಸಿವಿಲ್ ಗುತ್ತಿಗೆದಾರ ಸಯ್ಯದ್ ಸಿದ್ದಿಕಿ ಅಕ್ಬರ್ (27), ಶಿವಾಜಿನಗರ ಚಾಂದಿನಿ ಚೌಕ್‍ನ ಸ್ಟೌಂಡ್ ಸಿಸ್ಟಮ್ಸ್ ಅಂಗಡಿಯಲ್ಲಿ ಕೆಲಸ ಮಾಡುವ ಸಾದಿಕ್ ಉಲ್ ಅಮೀನ್ ಅಲಿಯಾಸ್ ಸೌಂಡ್ ಸಾದಿಕ್ (39) ಬಂಧಿತರು.

‘ಆರೋಪಿಗಳು ಎಸ್‍ಡಿಪಿಐ ಕಾರ್ಯಕರ್ತರಾಗಿದ್ದು, ಇಸ್ಲಾಂ ಧರ್ಮದ ಕಟ್ಟಾ ಅನುಯಾಯಿಗಳು. ಸಮಾವೇಶ ಮುಗಿಸಿ ಮಧ್ಯಾಹ್ನ 12 ಗಂಟೆಗೆ ಕಲಾಸಿಪಾಳ್ಯ ಹೊಸ ಬಡಾವಣೆಯ ಕುಂಬಾರ ಗುಂಡಿ ರಸ್ತೆಯಲ್ಲಿ ಬಾಡಿಗೆ ದ್ವಿಚಕ್ರವಾಹನದಲ್ಲಿ ಹೋಗುತ್ತಿದ್ದ ವೇಳೆ ಎರಡು ದ್ವಿಚಕ್ರ ವಾಹನಗಳಲ್ಲಿ ಹಿಂಬಾಲಿಸಿಕೊಂಡು ಬಂದ 4–5 ದುಷ್ಕರ್ಮಿಗಳು ವರುಣ್‍ ಮೇಲೆ ಹಲ್ಲೆ ನಡೆಸಿದ್ದರು’ ಎಂದು ಪೊಲೀಸ್‌ ಕಮಿಷನರ್‌ ಭಾಸ್ಕರ ರಾವ್‌ ತಿಳಿಸಿದರು. ‘ಡಿ. 22ರಂದು ನಡೆದ ಸಮಾವೇಶವನ್ನು ಸಂಸದ ತೇಜಸ್ವಿಸೂರ್ಯ ಮತ್ತು ಯುವ ಬ್ರಿಗೇಡ್ ಸಂಸ್ಥಾಪಕ ಚಕ್ರವರ್ತಿ ಸೂಲಿಬೆಲೆ ಆಯೋಜಿಸಿದ್ದರು. ಈ ಸಮಾವೇಶದಲ್ಲಿ ಭಾಗವಹಿಸಿದ್ದ ಹಿಂದೂ ಮುಖಂಡರನ್ನು ಕೊಲೆ ಮಾಡಲು ಆರೋಪಿಗಳು ಸಂಚು ರೂಪಿಸಿದ್ದರು. ಕಲ್ಲು ತೂರಾಟ ನಡೆಸಿ ಆತಂಕ ಮೂಡಿಸಿ, ಬಳಿಕ ಹತ್ಯೆಗೆ ಹುನ್ನಾರ ನಡೆಸಿದ್ದರು’ ಎಂದರು.

***

ಹಲ್ಲೆ ಘಟನೆಗೂ ಎಸ್‌ಡಿಪಿಐಗೂ ಯಾವುದೇ ಸಂಬಂಧ ಇಲ್ಲ. ಜನರ ಮನಸ್ಸಿನ ದಿಕ್ಕು ತಪ್ಪಿಸಲು ಈ ಘಟನೆಯ ಜೊತೆ ಸಂಬಂಧ ಕಲ್ಪಿಸಲಾಗುತ್ತಿದೆ
-ಅಬ್ರಾರ್‌ ಅಹ್ಮದ್‌, ಎಸ್‌ಡಿಪಿಐ, ರಾಜ್ಯ ಮಾಧ್ಯಮ ಉಸ್ತುವಾರಿ

ಮತ್ತಷ್ಟು ಗಾಬರಿ ಹುಟ್ಟಿಸುವ ಮಾಹಿತಿ ಇದು. ರಾಜ್ಯದಲ್ಲಿ ಎಸ್‌ಡಿಪಿಐ ಸಂಘಟನೆಯನ್ನು ನಿಷೇಧಿಸಲು ರಾಜ್ಯ ಸರ್ಕಾರ ಕೇಂದ್ರಕ್ಕೆ ಶಿಫಾರಸು ಮಾಡಬೇಕು
-ತೇಜಸ್ವಿಸೂರ್ಯ, ಬೆಂಗಳೂರು ದಕ್ಷಿಣ ಸಂಸದ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT