ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಿಳಿ ಹೇಳಬೇಕಾದ ಸ್ವಾಮೀಜಿಗಳಿಗೆ ಬುದ್ಧಿ ಹೇಳುವವರಾರು: ಎನ್.ತಿಪ‍್ಪಣ್ಣ ಪ್ರಶ್ನೆ

ಅಖಿಲ ಭಾರತ ವೀರಶೈವ ಮಹಾಸಭಾ ರಾಜ್ಯಾಧ್ಯಕ್ಷ
Last Updated 14 ಡಿಸೆಂಬರ್ 2019, 11:03 IST
ಅಕ್ಷರ ಗಾತ್ರ

ಧಾರವಾಡ: ‘ಸಮಾಜವನ್ನು ಒಂದುಗೂಡಿಸಿ ಒಗ್ಗಟ್ಟಿನ ಮಂತ್ರ ಬೋಧಿಸಬೇಕಾದ ಸಮಾಜದ ಸ್ವಾಮೀಜಿಗಳು ಕ್ಷುಲ್ಲಕ ಕಾರಣಕ್ಕೆ ಬೇರೆ ಬೇರೆ ಆದರೆ ಇವರಿಗೆ ಬುದ್ಧಿ ಹೇಳುವವರು ಯಾರು’ ಎಂದು ಅಖಿಲ ಭಾರತ ವೀರಶೈವ ಮಹಾಸಭಾ ರಾಜ್ಯಾಧ್ಯಕ್ಷ ಎನ್.ತಿಪ‍್ಪಣ್ಣ ಪ್ರಶ್ನಿಸಿದರು.‌

ಮಹಾಸಭಾದ ರಾಜ್ಯ ಘಟಕ ಮತ್ತು ಧಾರವಾಡ ಜಿಲ್ಲಾ ಘಟಕ ಸಂಯುಕ್ತ ಆಶ್ರಯದಲ್ಲಿ ಶನಿವಾರದಿಂದ ಆರಂಭವಾದ ಎರಡು ದಿನಗಳ ರಾಜ್ಯ ಮಟ್ಟದ ವಿಶೇಷ ಕಾರ್ಯಾಗಾರದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.‌

‘ಕೂಡಲಸಂಗಮದಲ್ಲಿ ಪಂಚಪೀಠ ಹಾಗು ವಿರಕ್ತ ಮಠದ ಸುಮಾರು 500ಕ್ಕೂ ಹೆಚ್ಚು ಸ್ವಾಮೀಜಿಗಳು ಸೇರಿ ನಾವೆಲ್ಲರೂ ಒಂದು ಎಂದು ಪ್ರಮಾಣ ಮಾಡಿದ್ದಾರೆ. ಆದರೆ ನಂತರದಲ್ಲಿ ಮತ್ತದೇ ಭಿನ್ನಾಭಿಪ್ರಾಯ ಬೆಳೆಸಿಕೊಂಡು ದೂರವಾಗಿದ್ದಾರೆ. ‘ಇವನಾರವ, ಇವನಾರವ...’ ಎಂದು ವಚನಗಳನ್ನು ಉಲ್ಲೇಖಿಸಿ ಭಾಷಣಗಳಲ್ಲಿ ಹೇಳುವವರು, ಸಮಾಜವನ್ನು ಒಂದುಗೂಡಿಸಿ ಮುಂದೆ ಕರೆದೊಯ್ಯಲು ಏನು ಕ್ರಮ ಕೈಗೊಂಡಿದ್ದಾರೆ? ಸಮಾಜವನ್ನು ಉದ್ಧಾರ ಮಾಡಲು ಕಾರ್ಯಕ್ರಮಗಳನ್ನು ರೂಪಿಸಿ ಅವುಗಳನ್ನು ಕಾರ್ಯರೂಪಕ್ಕೆ ತರಬೇಕೇ ಹೊರತು, ಸುಮ್ಮನೆ ಭಾಷಣ ಮಾಡುತ್ತಾ ಹೋದರೆ ಸಾಲದು’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

‘ನಾವು ದಾರಿ ತಪ್ಪಿದರೆ ನಮ್ಮನ್ನು ಸರಿದಾರಿಗೆ ತರಬೇಕಾದವರು, ತಾವೇ ಪ್ರತ್ಯೇಕ ದಾರಿ ತುಳಿಯುತ್ತಿದ್ದಾರೆ. ಹೀಗಾದರೆ ಸಮಾಜ ಮತ್ತು ಜನರ ಗತಿ ಏನು? ಇದನ್ನೇ ಕೆಲ ರಾಜಕಾರಿಣಿಗಳು ತಮ್ಮ ಲಾಭಕ್ಕೆ ಬಳಸಿಕೊಳ್ಳುತ್ತಿದ್ದಾರೆ. ಒಂದು ಕಾಲದಲ್ಲಿ 90ರಿಂದ 95ರಷ್ಟು ವೀರಶೈವ ಲಿಂಗಾಯತ ಸಮಾಜದ ಶಾಸಕರು ಇರುತ್ತಿದ್ದರು. ಆದರೆ ಆ ಸಂಖ್ಯೆ ಈಗ 50ರ ಆಸುಪಾಸಿಗೆ ಕುಸಿದಿದೆ. ಒಗ್ಗಟ್ಟಿನ ಮೂಲಕ ಸಮಾಜ ಬಲಪಡಿಸಬೇಕು. ರಾಜಕೀಯ, ಶೈಕ್ಷಣಿಕ, ಸಾಮಾಜಿಕ ಮತ್ತು ಆರ್ಥಿಕವಾಗಿ ಸಬಲರಾಗಬೇಕು. ಅದಕ್ಕೆ ಸದಸ್ಯರ ಸಂಖ್ಯೆ ಮತ್ತು ದಾನಿಗಳು ಹೆಚ್ಚಾಗಬೇಕು’ ಎಂದರು.

‘ಬೆಂಗಳೂರಿನಲ್ಲಿ ಸುಮಾರು ಎರಡು ಎಕರೆ ಪ್ರದೇಶದಲ್ಲಿ ವಿದ್ಯಾರ್ಥಿ ನಿಲಯ ಕಟ್ಟಿಸಲಾಗುತ್ತಿದೆ. ಒಂದು ಕೊಠಡಿಗೆ ₹4ಲಕ್ಷ ಖರ್ಚಾಗಲಿದೆ ಎಂದು ಅಂದಾಜಿಸಲಾಗಿದೆ. ಅದನ್ನು ವೈಯಕ್ತಿಕ ಅಥವಾ ಗುಂಪಾಗಿ ನೀಡಿದರೆ ಅವರ ಹೆಸರನ್ನು ಕೊಠಡಿಗೆ ಇಡಲಾಗುವುದು’ ಎಂದು ತಿಪ್ಪಣ್ಣ ಹೇಳಿದರು.

ಇದಕ್ಕೂ ಮೊದಲು ಮಾತನಾಡಿದ ಮಹಾಸಭಾದ ರಾಷ್ಟ್ರೀಯ ಉಪಾಧ್ಯಕ್ಷ ಶಂಕರ ಬಿದರಿ ಮಾತನಾಡಿ, ‘ಲಿಂಗಾಯತ ವೀರಶೈವ ಪ್ರಭೇಧ ಬೇರೆ ಆದರೂ ತಾತ್ವಿಕವಾಗಿ ಒಂದೇ. ಸಮಾಜವನ್ನು ಇನ್ನಷ್ಟು ಬಲಿಷ್ಠಗೊಳಿಸಬೇಕೆಂದರೆ ಸಂಘಟನೆ ಮತ್ತು ಆರ್ಥಿಕ ಸಾಮರ್ಥ್ಯ ಹೆಚ್ಚಳವಾಗಬೇಕು. ಇದಕ್ಕೆ ಸಮಾಜದ ಪ್ರತಿಯೊಬ್ಬರೂ ತಮ್ಮ ಆದಾಯದ ಶೇ 2ರಷ್ಟಾದರೂ ಸಮಾಜಕ್ಕೆ ನೀಡಬೇಕು’ ಎಂದರು.

ಸಾನ್ನಿಧ್ಯ ವಹಿಸಿದ್ದ ಹುಬ್ಬಳ್ಳಿ ಮೂರು ಸಾವಿರ ಮಠದ ಗುರುಸಿದ್ಧರಾಜಯೋಗೀಂದ್ರ ಸ್ವಾಮೀಜಿ ಮಾತನಾಡಿ, ‘ವೀರಶೈವ ಮತ್ತು ಲಿಂಗಾಯತ ಸಮುದಾಯಗಳು ಒಂದೇ ಆಗಬೇಕಾದರೆ ಸಮಾಜದೊಳಗಿನ ಒಳಪಂಗಡಗಳ ನಡುವಿನ ಅಂತರವನ್ನು ಸಂಬಂಧಗಳ ಮೂಲಕ ಅಂತ್ಯಗೊಳಿಸಬೇಕು.

ಜಿಲ್ಲಾ ಘಟಕದ ಅಧ್ಯಕ್ಷ ಗುರುರಾಜ ಹುಣಸಿಮರದ, ಶಿವಶರಣ ಕಲಬಶೆಟ್ಟರ, ನಟರಾಜ ಸಾಗರನಹಳ್ಳಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT