ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದುಡ್ಡೇ ಇಲ್ಲ: ₹5700 ಕೋಟಿ ಯೋಜನೆಗೆ ಕಾರ್ಯಾದೇಶ !

ಹಿಂದಿನ ಸರ್ಕಾರದ ಅವಧಿಯ ಅವಾಂತರ: ಸಚಿವ ಕಾರಜೋಳ ಅಳಲು
Last Updated 4 ಜನವರಿ 2020, 19:30 IST
ಅಕ್ಷರ ಗಾತ್ರ

ಬೆಂಗಳೂರು: ದುಡ್ಡೇ ಇಲ್ಲದಿದ್ದರೂ ₹5,700 ಕೋಟಿ ಮೊತ್ತದಲ್ಲಿ 7,682 ಕಿ.ಮೀ ಉದ್ದದ ರಸ್ತೆ ಅಭಿವೃದ್ಧಿ ಪಡಿಸುವ ಕಾರ್ಯಾದೇಶಗಳನ್ನು ಗುತ್ತಿಗೆದಾರರಿಗೆ ನೀಡಿದ ಪ್ರಕರಣ ಹಿಂದಿನ ಕಾಂಗ್ರೆಸ್, ಜೆಡಿಎಸ್‌ ಸರ್ಕಾರದ ಅವಧಿಯಲ್ಲಿ ನಡೆದಿದೆ.

ಕೇಂದ್ರ ರಸ್ತೆ ನಿಧಿ (ಸಿಆರ್‌ಎಫ್‌) ಯೋಜನೆಯಡಿ ಸಿಗುವ ಅನುದಾನ ನೆಚ್ಚಿಕೊಂಡು ರಾಜ್ಯದ 849 ರಸ್ತೆಗಳ ಅಭಿವೃದ್ಧಿಗೆ ಕ್ರಿಯಾಯೋಜನೆ ರೂಪಿಸಿದ್ದಲ್ಲದೇ, ಕಾರ್ಯಾದೇಶವನ್ನೂ ನೀಡಲಾಗಿದೆ. ‘ಈ ಯೋಜನೆಗಾಗಿ ಹೆಚ್ಚಿನ ಅನುದಾನ ಕೇಳುವುದಿಲ್ಲ. ರಾಜ್ಯವೇ ಇದನ್ನು ನಿಭಾಯಿಸುತ್ತದೆ’ ಎಂದು ಮುಚ್ಚಳಿಕೆ ಬರೆದುಕೊಟ್ಟು ಕೇಂದ್ರದಿಂದ ಒಪ್ಪಿಗೆಯನ್ನೂ ಪಡೆಯಲಾಗಿದೆ. ಗುತ್ತಿಗೆದಾರರು ಅನುದಾನ ಬಿಡುಗಡೆ ಮಾಡುವಂತೆ ಕೋರಿಕೆ ಮಂಡಿಸಿದಾಗ, ಹಿಂದಿನ ಸರ್ಕಾರ ಮಾಡಿರುವ ಯಡವಟ್ಟು ಬೆಳಕಿಗೆ ಬಂದಿದೆ.

ಸುದ್ದಿಗೋಷ್ಠಿಯಲ್ಲಿ ಶನಿವಾರ ಮಾತನಾಡಿದ ಉಪಮುಖ್ಯಮಂತ್ರಿ ಹಾಗೂ ಲೋಕೋಪಯೋಗಿ ಸಚಿವ ಗೋವಿಂದ ಕಾರಜೋಳ, ‘ಸಿಆರ್‌ಎಫ್‌ನಡಿ ಕೇಂದ್ರ ವಿಶೇಷ ಅನುದಾನ ನೀಡುವುದಿಲ್ಲ. ರಾಜ್ಯದಲ್ಲಿ ಮಾರಾಟವಾಗುವ ಪೆಟ್ರೋಲ್, ಡೀಸೆಲ್‌ ಮೇಲೆ ವಿಧಿಸಲಾಗುವ ಸೆಸ್‌ನಲ್ಲಿ ಪಾಲನ್ನಷ್ಟೇ ನೀಡುತ್ತದೆ. ಈ ಮೊತ್ತ ವಾರ್ಷಿಕ ಸರಾಸರಿ ₹480 ಕೋಟಿ ಸಿಗಲಿದೆ. ಇಷ್ಟು ಮೊತ್ತ ಸಿಕ್ಕಿದರೆ ಈ ರಸ್ತೆ ಅಭಿವೃದ್ಧಿಯಾಗುವುದು ಯಾವಾಗ ಎಂಬುದು ನಮ್ಮ ಮುಂದಿರುವ ಪ್ರಶ್ನೆ’ ಎಂದು ಹೇಳಿದರು.

‘ಕೇಂದ್ರದಿಂದ ಹೆಚ್ಚಿನ ಅನುದಾನ ಕೇಳುವುದಿಲ್ಲ ಎಂದು ಮುಚ್ಚಳಿಕೆ ಬರೆದುಕೊಟ್ಟಿರುವುದರಿಂದ ಸಮಸ್ಯೆಯಾಗಿದೆ. ಸಿದ್ದರಾಮಯ್ಯ ಹಾಗೂ ಕುಮಾರಸ್ವಾಮಿ ನೇತೃತ್ವದ ಸರ್ಕಾರದ ಅವಧಿಯಲ್ಲಿ ಈ ಕಾರ್ಯಾದೇಶಗಳನ್ನು ನೀಡಲಾಗಿದೆ. ಈಗ ನೂರಾರು ಕೋಟಿ ಬಿಲ್ ಪಾವತಿ ಬಾಕಿದೆ. ನೆರವು ನೀಡುವಂತೆ ಕೇಂದ್ರ ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರಿಗೆ ಮನವಿ ಮಾಡಿದಾಗಲೇ ಮುಚ್ಚಳಿಕೆ ಬರೆದುಕೊಟ್ಟಿರುವ ಸಂಗತಿ ಗೊತ್ತಾಗಿದೆ. ಈಗ ಏನು ಮಾಡುವುದು ಎಂಬುದು ನಮಗೆ ತೋಚುತ್ತಿಲ್ಲ’ ಎಂದು ಅಳಲು ತೋಡಿಕೊಂಡರು.

2019–20ರ ಸಾಲಿನಲ್ಲಿ ಇಲಾಖೆಗೆ ₹9549 ಕೋಟಿ ಅನುದಾನ ನಿಗದಿಯಾಗಿದೆ. ಡಿಸೆಂಬರ್ ಅಂತ್ಯಕ್ಕೆ ₹3649 ಕೋಟಿ ಮೊತ್ತದ ಕಾಮಗಾರಿ ಮುಗಿದಿದ್ದು, ಬಿಲ್ ಪಾವತಿ ಮಾಡಲಾಗಿದೆ. ಪರಿಶಿಷ್ಟ ಜಾತಿ ವಿಶೇಷ ಯೋಜನೆ ಹಾಗೂ ಗಿರಿಜನ ಉಪ ಯೋಜನೆಯಡಿ ₹1225 ಕೋಟಿ ಅನುದಾನ ಇದ್ದು, ₹320 ಕೋಟಿ ವೆಚ್ಚ ಮಾಡಲಾಗಿದೆ. 7122 ಕಾಮಗಾರಿಗಳ ಪೈಕಿ 2810 ಕಾಮಗಾರಿಗಳು ಮುಗಿದಿದ್ದು, ಜನವರಿ ಅಂತ್ಯದೊಳಗೆ ಎಲ್ಲ ಕಾಮಗಾರಿಗಳನ್ನೂ ಪೂರ್ಣಗೊಳಿಸುವಂತೆ ಸೂಚಿಸಲಾಗಿದೆ ಎಂದರು.

ಗುಂಡಿ ಮುಚ್ಚದಿದ್ದರೆ ಶಿಸ್ತು ಕ್ರಮ

ರಾಜ್ಯ ಹೆದ್ದಾರಿಗಳು ಹಾಗೂ ಜಿಲ್ಲಾ ಮುಖ್ಯರಸ್ತೆಗಳಲ್ಲಿನ ಗುಂಡಿಗಳನ್ನು ಇದೇ ತಿಂಗಳ ಅಂತ್ಯದೊಳಗೆ ಮುಚ್ಚದಿದ್ದರೆ ಸಂಬಂಧ ಪಟ್ಟ ಅಧಿಕಾರಿಗಳ ವಿರುದ್ಧ ಶಿಸ್ತುಕ್ರಮ ಜರುಗಿಸಲಾಗುವುದು ಎಂದು ಕಾರಜೋಳ ಹೇಳಿದರು.

‘ಶುಕ್ರವಾರ ನಡೆಸಿದ ಇಲಾಖೆಯ ಪ್ರಗತಿ ಪರಿಶೀಲನಾ ಸಭೆಯಲ್ಲಿ ಎಲ್ಲ ಅಧಿಕಾರಿಗಳಿಗೂ ಎಚ್ಚರಿಕೆ ನೀಡಲಾಗಿದೆ. ಮುಂದಿನ ತಿಂಗಳು ದಿಢೀರ್ ಭೇಟಿ ನೀಡಿ ರಸ್ತೆಗಳನ್ನು ಪರಿಶೀಲಿಸುತ್ತೇನೆ. ಗುಂಡಿ ಮುಚ್ಚುವುದರಲ್ಲಿ ಲೋಪ ಕಂಡು ಬಂದರೆ ಕ್ರಮ ಜರುಗಿಸುವುದು ಖಚಿತ’ ಎಂದರು.

ಹೊಸ ಟೋಲ್ ರಸ್ತೆಗಳು

ಕೆ–ಶಿಪ್ ಯೋಜನೆ–3ರಡಿ ಹೆದ್ದಾರಿಗಳನ್ನು ಅಭಿವೃದ್ಧಿ‍ಪಡಿಸುವ ಯೋಜನೆ ಸಿದ್ಧಗೊಂಡಿದೆ. ಭೂಸ್ವಾಧೀನ ಪ್ರಕ್ರಿಯೆ ಪೂರ್ಣಗೊಂಡಿದ್ದು, ಕಾಮಗಾರಿ ಆರಂಭವಾಗಲಿದೆ. 2 ವರ್ಷದಲ್ಲಿ ಕಾಮಗಾರಿ ಪೂರ್ಣಗೊಳಿಸಬೇಕಾಗಿದ್ದು, ಎಂಟು ವರ್ಷ ನಿರ್ವಹಣೆ ಜವಾಬ್ದಾರಿ ಗುತ್ತಿಗೆದಾರರದ್ದಾಗಿದೆ.

***

* ₹5,334 ಕೋಟಿ ಯೋಜನಾ ವೆಚ್ಚ

* 418 ಕಿ.ಮೀ ಉದ್ದ

ಹೆದ್ದಾರಿಗಳ ವಿವರ

*ಬೆಂಗಳೂರು–ಮಾಗಡಿ–ಕುಣಿಗಲ್

*ಕುಣಿಗಲ್–ಕೊಳ್ಳೇಗಾಲ–ಹನೂರು

*ಹೊನ್ನಾಳಿ–ಗದಗ

*ಚಿಂತಾಮಣಿ–ಆಂಧ್ರಪ್ರದೇಶ ಗಡಿ

***

ಕಟ್ಟಡಗಳ ಕ್ರಿಯಾಯೋಜನೆ ಅನುಮೋದನೆಯಾಗಿ ಎರಡು ವರ್ಷ ಕಳೆದಿದ್ದರೂ ನಿವೇಶನ ಸಮಸ್ಯೆಯಿಂದಾಗಿ ಕಾಮಗಾರಿ ಆರಂಭವಾಗದೇ ಇರುವುದರಿಂದ ₹616 ಕೋಟಿ ಮೊತ್ತದ ಕಾಮಗಾರಿಗಳನ್ನು ರದ್ದುಪಡಿಸಲು ನಿರ್ಧರಿಸಲಾಗಿದೆ

–ಗೋವಿಂದ ಕಾರಜೋಳ, ಲೋಕೋಪಯೋಗಿ ಸಚಿವ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT