ಪುತ್ತೂರು: ಮೋದಿ ಮತ್ತೊಮ್ಮೆ ಪ್ರಧಾನಿಯಾಗಬೇಕೆಂದು ಹರಕೆ ಹೊತ್ತಿದ್ದ ಅಭಿಮಾನಿ ವೈದ್ಯರೊಬ್ಬರು ಕೋರಿಕೆಯನ್ನು ಈಡೇರಿಸಿದ ಕಟೀಲು ದುರ್ಗಾಪರಮೇಶ್ವರಿ ದೇವಿಗೆ ಹರಕೆಯ ಯಕ್ಷಗಾನ ಬಯಲಾಟ ಸೇವೆಯನ್ನು ಸಮರ್ಪಣೆ ಮಾಡಲಿದ್ದಾರೆ. ಇದೇ 19ರಂದು ಪುತ್ತೂರು ನಗರದ ಬೊಳುವಾರು ಬೈಲ್ನಲ್ಲಿ `ಶ್ರೀ ದೇವಿ ಮಹಾತ್ಮೆ' ಸೇವಾ ಯಕ್ಷಗಾನ ಬಯಲಾಟ ಕಾರ್ಯಕ್ರಮ ನಡೆಯುವುದು.
ಕಾಸರಗೋಡು ತಾಲ್ಲೂಕಿನ ಬಂದಡ್ಕದಲ್ಲಿ ನರ್ಸಿಂಗ್ ಹೋಮ್ ನಡೆಸುತ್ತಿರುವ ಬೊಳುವಾರು ಬೈಲು ನಿವಾಸಿ ಡಾ. ಉದಯಶಂಕರ್ ಭಟ್ ಮತ್ತು ಅವರ ಪತ್ನಿ ದೀಪಶ್ರೀ ಕಳೆದ ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಬಿಜೆಪಿಗೆ ಬಹುಮತ ದೊರೆತು ನರೇಂದ್ರ ಮೋದಿಯವರು ಮತ್ತೊಮ್ಮೆ ಪ್ರಧಾನಿಯಾಗಬೇಕೆಂದು ಕಟೀಲು ದೇವಿಗೆ ಸಂಕಲ್ಪ ಪ್ರಾರ್ಥನೆ ಮಾಡಿದ್ದರು. ಕೋರಿಕೆ ಈಡೇರಿಸಿದಲ್ಲಿ ಶ್ರೀ ದೇವಿ ಮಹಾತ್ಮೆ ಯಕ್ಷಗಾನ ಬಯಲಾಟವನ್ನು ಸೇವಾ ರೂಪದಲ್ಲಿ ಆಡಿಸುವುದಾಗಿ ಹರಕೆ ಹೊತ್ತಿದ್ದರು.