ಬಳ್ಳಾರಿ: ರಿಮಾಂಡ್ ಹೋಂ(ವೀಕ್ಷಣಾಲಯ)ನಲ್ಲಿದ್ದ 16 ವರ್ಷದ ಯುವಕ ಅನುಮಾನಾಸ್ಪದವಾಗಿ ಮೃತಪಟ್ಟಿದ್ದು, ಅಲ್ಲಿನ ಇಬ್ಬರು ಗೃಹರಕ್ಷಕರು ಥಳಿಸಿದ್ದರಿಂದ ಮೃತಪಟ್ಟಿದ್ದಾನೆ ಎಂದು ಇಲ್ಲಿನ ದೇವಿನಗರದಲ್ಲಿರುವ ರಿಮಾಂಡ್ ಹೋಂನ ಗೃಹಪಾಲಕ ದೂರು ದಾಖಲಿಸಿದ್ದಾರೆ.
ಲೈಂಗಿಕ ದೌರ್ಜನ್ಯ ಆರೋಪದಡಿ ಯುವಕನನ್ನು ಕೊಪ್ಪಳ ಜಿಲ್ಲೆಯ ಕಾರಟಗಿಯಿಂದ ವೀಕ್ಷಣಾಲಯಕ್ಕೆ ಕರೆತರಲಾಗಿತ್ತು. ಭಾನುವಾರ ಮಧ್ಯಾಹ್ನ ಊಟದ ಬಳಿಕ, ಯುವಕ ಮತ್ತು ಗೃಹರಕ್ಷಕರಾದ ಓಬಳೇಶ ಮತ್ತು ಮಾರುತಿ ನಡುವೆ ವಾಗ್ವಾದ ನಡೆದಿತ್ತು. ಈ ವೇಳೆ ಗೃಹರಕ್ಷಕರು ಯುವಕನ ಮೇಲೆ ಹಲ್ಲೆ ನಡೆಸಿದ್ದರು.
ರಾತ್ರಿ ಯುವಕನಿಗೆ ಊಟ ನೀಡಲು ಗೃಹಪಾಲಕರು ತೆರಳಿದಾಗ ಆತ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ. ವಿಮ್ಸ್ ಆಸ್ಪತ್ರೆಗೆ ಕರೆದೊಯ್ದಾಗ ಆತ ಮೃತಪಟ್ಟಿದ್ದಾನೆಂದು ವೈದ್ಯರು ದೃಢಪಡಿಸಿದರು ಎಂದುಕೌಲ್ಬಜಾರ್ ಠಾಣೆಯಲ್ಲಿ ಸಲ್ಲಿಸಿರುವ ದೂರಿನಲ್ಲಿ ತಿಳಿಸಲಾಗಿದೆ. ಗೃಹರಕ್ಷಕರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.