ಕೋಲಾರ: ಜಿಲ್ಲೆಯ ಬಂಗಾರಪೇಟೆ ತಾಲ್ಲೂಕಿನ ಬೂದಿಕೋಟೆ ಗ್ರಾಮದಲ್ಲಿ ಚೌಡೇಶ್ವರಿ ದೇವಿಯ ಭಕ್ತರು ಎದೆಗೆ ಚಾಕು ತಾಕಿಸಿ, ದೇವಿಗೆ ರಕ್ತಾರ್ಪಣೆ ಮಾಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಗ್ರಾಮದಲ್ಲಿ ಭಾನುವಾರ (ಡಿ.29) ತೊಗಟವೀರ ಜನಾಂಗದವರು ಆಯೋಜಿಸಿದ್ದ ಚೌಡೇಶ್ವರಿ ದೇವಿಯ ವಾರ್ಷಿಕೋತ್ಸವದ ಬಲಿಹಾರ ಪೂಜೆಯಲ್ಲಿ ಈ ವಿಶಿಷ್ಟ ಆಚರಣೆ ನಡೆದಿದೆ.
ಅಲ್ಲದೇ, ಮಹಿಳೆಯರು ಚೌಡೇಶ್ವರಿ ದೇವಿಯ ಉತ್ಸವ ಮೂರ್ತಿಯನ್ನು ಹೊತ್ತು ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಿರುವುದು ಹಾಗೂ ಮಕ್ಕಳು ದೀಪಗಳನ್ನು ತಲೆಯ ಮೇಲೆ ಹೊತ್ತು ಸಾಗಿರುವ ದೃಶ್ಯಗಳು ಗಮನ ಸೆಳೆದಿವೆ.
ಉತ್ಸವ ಮೂರ್ತಿಯ ಮೆರವಣಿಗೆ ನಂತರ ದೇವಿಗೆ ಕುರಿ ಬಲಿ ನೀಡಿ, ಬಾಡೂಟ ಸವಿಯುವ ಸಂಪ್ರದಾಯ ದಶಕಗಳಿಂದ ನಡೆದು ಬಂದಿದೆ ಎನ್ನುತ್ತಾರೆ ಸ್ಥಳೀಯರು.