ಬಸವ ಕಲ್ಯಾಣದ ಜನತೆಗೆ ಬಿಜೆಪಿ ಮಾಡಿದ್ದ ಜನಪ್ರಿಯ ಘೋಷಣೆಗಳು, ಅದರ ಅನುಷ್ಠಾನಕ್ಕೆ ತೋರಿದ್ದ ಆಸಕ್ತಿ ಹಾಗೂ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹಾಗೂ ಅವರ ಸಂಪುಟದ ಸಹೋದ್ಯೋಗಿಗಳ ಸಂಘಟಿತ ಯತ್ನದ ಫಲವಾಗಿ ಅಲ್ಲಿನ ಮತದಾರರು ಪಕ್ಷದ ಅಭ್ಯರ್ಥಿ ಶರಣು ಸಲಗರ ಅವರನ್ನು ‘ಇವನಮ್ಮವ, ಇವನಮ್ಮವ’ ಎಂದು ಅಪ್ಪಿಕೊಂಡಿದ್ದಾರೆ. ಶರಣು ಅವರನ್ನು 20,629 ಮತಗಳ ಅಂತರದಿಂದ ಭರ್ಜರಿ ಗೆಲ್ಲಿಸಿದ್ದಾರೆ. ಶಾಸಕರಾಗಿದ್ದ ದಿವಂಗತ ಬಿ. ನಾರಾಯಣರಾವ್ ಅವರ ಪತ್ನಿ ಮಾಲಾ ನಾರಾಯಣರಾವ್ ಅವರಿಗೆ ಟಿಕೆಟ್ ನೀಡಿ ಅನುಕಂಪದ ಅಲೆಯಲ್ಲಿ ಗೆಲುವು ಸಾಧಿಸುವ ಕಾಂಗ್ರೆಸ್ ಯತ್ನ ಕೈಗೂಡಿಲ್ಲ. ಜೆಡಿಎಸ್ನ ಸಯ್ಯದ್ ಯಶ್ರಬ್ ಅಲಿ ಹೆಚ್ಚಿನ ಪೈಪೋಟಿ ನೀಡಲಿಲ್ಲ. ಬಂಡಾಯದ ಬಾವುಟ ಹಾರಿಸಿ ಕೊನೆ ಕ್ಷಣದ ಪ್ರಯತ್ನಕ್ಕೂ ಜಗ್ಗದ ಮಾಜಿ ಶಾಸಕ ಮಲ್ಲಿಕಾರ್ಜುನ ಖೂಬಾ ಅವರೂ ಹೇಳಿಕೊಳ್ಳುವ ಸಾಧನೆ ಮಾಡಿಲ್ಲ.