ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

PV Web Exclusive: ‘ಉಬುಂಟು’ ಕೂಡಿ ನಡೆದರೆ ಹಿತವುಂಟು

ಮಹಿಳಾ ಉದ್ಯಮಿಗಳ ಒಕ್ಕೂಟ
Last Updated 19 ಫೆಬ್ರುವರಿ 2021, 8:01 IST
ಅಕ್ಷರ ಗಾತ್ರ

ಸಮಷ್ಟಿ ಪ್ರಜ್ಞೆ ಭಾರತೀಯ ಸಂಸ್ಕೃತಿಯಲ್ಲಿ ಹಾಸುಹೊಕ್ಕಾಗಿರುವ ಮೌಲ್ಯ; ಪ್ರತಿಯೊಬ್ಬರ ಉನ್ನತಿಯ ಚಿಂತನೆ ಇದರ ಸಾರ. ಇದೇ ಪರಿಕಲ್ಪನೆಯಲ್ಲಿ ಕೆಲಸ ಮಾಡುತ್ತಿರುವ ಮಹಿಳಾ ಉದ್ಯಮಿಗಳು, ಕೈಗಾರಿಕೋದ್ಯಮಿಗಳ ಒಕ್ಕೂಟವೇ ‘ಉಬುಂಟು‘. ಉದ್ಯಮ, ಸಣ್ಣ ಕೈಗಾರಿಕಾ ಕ್ಷೇತ್ರಕ್ಕೆ ಬರಲು ಇಚ್ಛಿಸುವ ಮಹಿಳೆಯರಿಗೆ ಪ್ರೇರಣೆ, ಮಾರ್ಗದರ್ಶನ ನೀಡುವುದು, ಅದಾಗಲೇ ಈ ಕ್ಷೇತ್ರದಲ್ಲಿರುವವರಿಗೆ ವ್ಯಾಪಾರ– ವಹಿವಾಟಿನ ಹೊಸ ಅವಕಾಶಗಳ ಬಗ್ಗೆ ಮಾಹಿತಿ ನೀಡುವುದು ಮುಖ್ಯ ಉದ್ದೇಶವಾಗಿದೆ. ಕೋವಿಡ್‌ ಸಂಕಷ್ಟದ ಕಾಲದಲ್ಲಿ ‘ಉಬುಂಟು’ ಮಹಿಳಾ ಉದ್ಯಮಿಗಳ ಬೆನ್ನೆಲುಬಾಗಿ ನಿಂತು ಕೆಲಸ ಮಾಡಿದೆ. ವ್ಯಾಪಾರ– ವಹಿವಾಟು ಸಂಪೂರ್ಣ ಸ್ತಬ್ಧವಾಗಿದ್ದ ಸಂದರ್ಭದಲ್ಲಿ ಆನ್‌ಲೈನ್ ಮಾರಾಟ ವ್ಯವಸ್ಥೆಯನ್ನು ರೂಪಿಸಿ ಯಶಸ್ಸು ಕಂಡಿದೆ.

’ಉಬುಂಟು‘ ಆಫ್ರಿಕಾ ದೇಶದ ಸಣ್ಣ ಕಥೆಯೊಂದರಲ್ಲಿ ಬರುವ ನೀತಿಪಾಠ. ‘ಅವರಿಂದಲೇ ನಾನು’, ‘ನಾವೆಲ್ಲರೂ ಇರುವುದರಿಂದಲೇ ನಾನು’ ಇದರ ತಿರುಳು. ಕರ್ನಾಟಕ, ಆಂಧ್ರಪ್ರದೇಶ, ಗೋವಾ, ತೆಲಂಗಾಣ, ಮಧ್ಯಪ್ರದೇಶದ ಮಹಿಳಾ ಉದ್ಯಮಿಗಳ ಸಂಘಟನೆಗಳನ್ನು ಒಂದುಗೂಡಿಸಿ ಒಕ್ಕೂಟ ರಚಿಸಲಾಗಿದೆ. ರಾಜ್ಯ ಸರ್ಕಾರದ ನಿವೃತ್ತ ಮುಖ್ಯ ಕಾರ್ಯದರ್ಶಿ ರತ್ನಪ್ರಭಾ ಸಂಘಟನೆಯ ಸಂಸ್ಥಾಪಕ ಅಧ್ಯಕ್ಷೆ.

ರತ್ನಪ್ರಭಾ ಅವರು ಕೈಗಾರಿಕಾ ಮತ್ತು ವಾಣಿಜ್ಯ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಯಾಗಿದ್ದ (2014–19) ಸಂದರ್ಭದಲ್ಲಿ ಇಂತಹ ಒಂದು ಚಿಂತನೆ ಮೊಳಕೆಯೊಡೆಯಿತು. ಮಹಿಳಾ ಉದ್ಯಮಿಗಳಿಗಾಗಿ ಪ್ರತ್ಯೇಕ ಕೈಗಾರಿಕಾ ನೀತಿ ಇರಲಿಲ್ಲ. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಅಂಗವಿಕಲರ ನೀತಿಯಲ್ಲಿಯೇ ಮಹಿಳೆಯರನ್ನೂ ಸೇರಿಸಲಾಗಿತ್ತು. ಇದನ್ನು ಮನಗಂಡ ಅವರು ಮಹಿಳೆಯರಿಗೆ 2014–19ರ ಕೈಗಾರಿಕಾ ನೀತಿಯಲ್ಲಿ ಮಹಿಳಾ ಕೈಗಾರಿಕಾ ನೀತಿಯನ್ನು ರೂಪಿಸಿದರು. 2015ರಲ್ಲಿ ಆರಂಭವಾಗಿದ್ದ ಉಬುಂಟು ಸಂಘಟನೆಯನ್ನು 2019ರಲ್ಲಿ ನೋಂದಣಿ ಮಾಡಲಾಯಿತು. ಅಂದಿನಿಂದ ಅಧಿಕೃತವಾಗಿ ಚಟುವಟಿಕೆಯನ್ನು ಆರಂಭಿಸಿತು. 24 ಸಂಘಟನೆಗಳ ಸುಮಾರು 13 ಸಾವಿರ ಸದಸ್ಯರಿದ್ದಾರೆ.

ಪವರ್ ಸಮ್ಮೇಳನ ಉದ್ಘಾಟಿಸಿದ ರತ್ನಪ್ರಭಾ
ಪವರ್ ಸಮ್ಮೇಳನ ಉದ್ಘಾಟಿಸಿದ ರತ್ನಪ್ರಭಾ

ಉದ್ದೇಶ: ಉದ್ಯಮ, ಕೈಗಾರಿಕೆಗೆ ಸಂಬಂಧಿಸಿದ ಮಹಿಳಾ ಸಂಘಟನೆಗಳನ್ನು ಬಲಪಡಿಸುವುದು, ಅವರ ವ್ಯಾಪಾರ– ವಹಿವಾಟು ಸಂಪರ್ಕಗಳನ್ನು ವೃದ್ಧಿಸುವುದು, ಹೊಸ ವ್ಯಾಪಾರ ಅವಕಾಶಗಳನ್ನು ತೆರೆದಿಡುವುದು. ಆರ್ಥಿಕ ಸಹಾಯ ನೀಡುವುದು ಹಾಗೂ ಸಂಘಟನೆಯ ಸದಸ್ಯರನ್ನು ಬಲಗೊಳಿಸುವುದು.

ಕೋವಿಡ್ ಸಂಕಷ್ಟದಲ್ಲಿ ನೆರವು: ವಿಶ್ವವನ್ನೇ ಆವರಿಸಿದ್ದ ಕೋವಿಡ್ ಸಂಕಷ್ಟದ ಕಾಲದಲ್ಲಿ ಒಕ್ಕೂಟದ ಸದಸ್ಯರಿಗೆ ನೆರವು ನೀಡಿದೆ. ಕರ್ನಾಟಕ ಸಣ್ಣ ಕೈಗಾರಿಕೆಗಳ ಸಂಘ (ಕಾಸಿಯಾ) ಹಾಗೂ ಯುನೈಟೆಡ್ ನೇಷನ್ಸ್‌ ಡೆವಲಪ್‌ಮೆಂಟಲ್ ಪ್ರೋಗ್ರಾಮ್ಸ್ (ಯುಎನ್‌ಡಿಪಿ) ಸಹಯೋಗದಲ್ಲಿ ಸಹಾಯ ಕೇಂದ್ರವನ್ನು ಆರಂಭಿಸಿತ್ತು. 100 ಮಂದಿಗೆ ಆನ್‌ಲೈನ್ ಮಾರುಕಟ್ಟೆ ತರಬೇತಿ ನೀಡಲಾಯಿತು. ಉತ್ಪನ್ನಗಳನ್ನು ಆನ್‌ಲೈನ್ ವೇದಿಕೆಯಲ್ಲಿ ಮಾರಾಟ ಮಾಡಲು ಅವಕಾಶ ಕಲ್ಪಿಸಿತು. ವ್ಯಾಪಾರದ ದೃಷ್ಟಿಯಿಂದ ಭಾರಿ ಹಿನ್ನಡೆ ಅನುಭವಿಸಿದ್ದ ಉದ್ಯಮಗಳು ಚೇತರಿಸಿಕೊಳ್ಳಲು ಇದರಿಂದ ಅವಕಾಶವಾಯಿತು.

ಉಬುಂಟು ಪ್ರಯತ್ನದ ಫಲವಾಗಿ ರಾಜ್ಯದ ಐದು ಜಿಲ್ಲೆಗಳಲ್ಲಿ ‘ಮಹಿಳಾ ಉದ್ಯಮಿಗಳ ಪಾರ್ಕ್‘ ಪಾರ್ಕ್‌ ಆರಂಭಿಸಲಾಗಿದೆ. ಮಹಿಳಾ ಉದ್ಯಮಿಗಳ ಜ್ಞಾನ ಹಾಗೂ ಕೌಶಲ ವೃದ್ಧಿಯನ್ನು ಆದ್ಯತೆಯನ್ನಾಗಿ ತೆಗೆದುಕೊಂಡು ಆ ನಿಟ್ಟಿನಲ್ಲಿ ಮುಂದಡಿ ಇಡಲಾಗುತ್ತಿದೆ. ಕಾರ್ಯಾಗಾರಗಳನ್ನು ಆಯೋಜಿಸುವ ಮೂಲಕ ನೂತನ ತಂತ್ರಜ್ಞಾನದ ಪರಿಚಯ ಮಾಡಿಕೊಡಲಾಗುತ್ತಿದೆ. ರಾಷ್ಟ್ರೀಯ, ಅಂತರರಾಷ್ಟ್ರೀಯ ಪ್ರದರ್ಶನ ಮೇಳಗಳಲ್ಲಿ ತಮ್ಮ ಉತ್ಪನ್ನಗಳನ್ನು ಪ್ರದರ್ಶಿಸಲು ಆ ಮೂಲಕ ಮಾರುಕಟ್ಟೆ ಕಂಡುಕೊಳ್ಳಲು ಅನುಕೂಲ ಕಲ್ಪಿಸಲಾಗುತ್ತಿದೆ.‌ ನೀತಿಗಳು, ನಿಯಂತ್ರಣ ವ್ಯವಸ್ಥೆ ಬಗ್ಗೆಯೂ ಅರಿವು ಮೂಡಿಸಲಾಗುತ್ತಿದೆ.

ಉದ್ಯಮ ಕ್ಷೇತ್ರ ಪ್ರವೇಶಿಸುವುದು ಮಹಿಳೆಗೆ ಸವಾಲಿನ ಕೆಲಸ. ಹಣಕಾಸಿನ ವ್ಯವಸ್ಥೆ, ಅನುಮತಿ ಸೇರಿದಂತೆ ಹಲವು ಸವಾಲುಗಳನ್ನು ಎದುರಿಸಬೇಕಾಗುತ್ತದೆ. ಇನ್ನು ಉದ್ಯಮ ಆರಂಭಿಸಿದರೂ ಸುಸ್ಥಿರ ಪ್ರಗತಿ ಸಾಧಿಸಲು ಹಲವು ಅಡೆತಡೆ ಎದುರಿಸಬೇಕಾಗುತ್ತದೆ. ಇಂತಹ ಅಡೆತಡೆಗಳನ್ನು ದಾಟಿ ಉದ್ಯಮ ಕ್ಷೇತ್ರದಲ್ಲಿ ಮಹಿಳೆಯರು ಮುನ್ನುಗ್ಗಲು, ಸಾಧಿಸಲು, ಛಾಪು ಮೂಡಿಸಲು ಉಬುಂಟು ಪ್ರಮಿಸುತ್ತಿದೆ. ಎಲ್ಲರಿಂದ ನಾವು ಎಂಬ ಸೂತ್ರ ಯಶಸ್ಸಿನ ದೊಡ್ಡ ಪಾತ್ರವಾಗಿದೆ.

ಉಡುಪಿಯ ಪವರ್ ಮಹಿಳಾ ಸಂಘಟನೆಯ ಸಂಸ್ಥಾಪಕ ಅಧ್ಯಕ್ಷೆ ರೇಣು ಜಯರಾಮ್ ಅವರೊಂದಿಗೆ ರತ್ನಪ್ರಭಾ
ಉಡುಪಿಯ ಪವರ್ ಮಹಿಳಾ ಸಂಘಟನೆಯ ಸಂಸ್ಥಾಪಕ ಅಧ್ಯಕ್ಷೆ ರೇಣು ಜಯರಾಮ್ ಅವರೊಂದಿಗೆ ರತ್ನಪ್ರಭಾ

‘ಹತ್ತಾರು ಮಹಿಳಾ ಉದ್ಯಮಿಗಳ ಸಂಘಟನೆಗಳು ಇವೆ. ಆದರೆ, ಅವರು ನೇರವಾಗಿ ಸರ್ಕಾರವನ್ನು ಸಂಪರ್ಕಿಸಲು ತಮ್ಮ ಬೇಡಿಕೆ ಮುಂದಿಡುವುದು ಕಷ್ಟಸಾಧ್ಯ. ಅದೇ ಒಕ್ಕುಟ ಇದ್ದಾಗ ಸಂಪರ್ಕ ಸಾಧಿಸುವುದು ಸುಲಭವಾಗುತ್ತದೆ. ಅದೇ ಕಾರಣಕ್ಕೆ ದೊಡ್ಡ ಒಕ್ಕೂಟ ರಚಿಸಲಾಯಿತು. ಇದರಿಂದ ಸಾಕಷ್ಟು ಲಾಭವಾಗಿದೆ‘ ಎನ್ನುತ್ತಾರೆ ಉಬುಂಟು ಮುಖ್ಯಸ್ಥರಾದ ರತ್ನಪ್ರಭಾ.

‘ಒಕ್ಕೂಟದ ಸದಸ್ಯರು ಒಂದು ಕಡೆ ಸೇರಿದಾಗ ತಮ್ಮ ಐಡಿಯಾಗಳನ್ನು ಇನ್ನೊಬ್ಬರೊಂದಿಗೆ ಹಂಚಿಕೊಳ್ಳಲು ಅನುಕೂಲವಾಗುತ್ತದೆ. ವಿಭಿನ್ನ ಉದ್ಯಮಗಳನ್ನು ನಡೆಸುವವರು ಪರಸ್ಪರ ವ್ಯಾಪಾರ– ವಹಿವಾಟಿನಲ್ಲಿ ಸಹಭಾಗಿತ್ವ ವಹಿಸಬಹುದು. ಅಂದರೆ ಒಂದು ಉದ್ಯಮಕ್ಕೆ ಬೇಕಾಗಿರುವ ಕಚ್ಚಾ ವಸ್ತುವನ್ನು ಒಕ್ಕೂಟದಲ್ಲೇ ಇರುವ ಇನ್ನೊಂದು ಉದ್ಯಮದಿಂದ ಖರೀದಿಸಬಹುದು‘ ಎಂದು ಅವರು ತಿಳಿಸಿದರು

ಬಹಳಷ್ಟು ಅನುಕೂಲವಾಗಿದೆ: ’ಉಡುಪಿಯಂತಹ ಎರಡನೇ ಹಂತದ ನಗರಗಳಲ್ಲಿ ಇರುವ ಮಹಿಳಾ ಉದ್ಯಮಿಗಳು ಹಾಗೂ ಸಂಘಟನೆಗಳಿಗೆ ಉಬುಂಟು ವರದಾನವಾಗಿದೆ. ನೇರವಾಗಿ ಸರ್ಕಾರ, ವಿವಿಧ ಇಲಾಖೆಗಳೊಂದಿಗೆ ನೇರವಾಗಿ ಸಂಪರ್ಕ ಸಾಧಿಸಲು ಸಾಧ್ಯವಾಗಿದೆ. ಉದ್ಯಮ, ಕೈಗಾರಿಕೆಗೆ ಸಂಬಂಧಿಸಿದಂತೆ ಸರ್ಕಾರ ಕೈಗೊಳ್ಳುವ ನಿರ್ಧಾರಗಳು ಕೂಡಲೇ ನಮ್ಮನ್ನು ತಲುಪುತ್ತಿವೆ‘ ಎನ್ನುತ್ತಾರೆ ಉಡುಪಿಯ ಪವರ್ ಮಹಿಳಾ ಉದ್ಯಮಿಗಳ ಸಂಘಟನೆಯ ಸಂಸ್ಥಾಪಕ ಅಧ್ಯಕ್ಷೆ ರೇಣು ಜಯರಾಮ್.

ಪವರ್ ಸಂಘಟನೆಯ ಸದಸ್ಯರು
ಪವರ್ ಸಂಘಟನೆಯ ಸದಸ್ಯರು

’ಕೋವಿಡ್ ಸಮಯದಲ್ಲಿ ಉಬುಂಟು ಮಾಡಿದ ಸಹಾಯವನ್ನು ಮರೆಯಲಾಗದು. ವರ್ಚುವಲ್ ಸೆಮಿನಾರ್‌, ಸಂವಾದ ಏರ್ಪಡಿಸಿ ನಮ್ಮ ಸಮಸ್ಯೆಗಳನ್ನು ಕೇಳಿ, ಅದಕ್ಕೆ ಪರಿಹಾರ ನೀಡಿದ್ದಾರೆ. ಮಹಿಳಾ ಸಹಾಯವಾಣಿ ಆರಂಭಿಸಿ ನೆರವು ಮಾರ್ಗದರ್ಶನ ನೀಡಿದ್ದಾರೆ. ಇ ಕಾಮರ್ಸ್‌ ಸಂಪರ್ಕ ಸಾಧಿಸಲು ಸಹ ಉಬುಂಟು ಕಾರಣ. ನಮ್ಮ ಉತ್ಪನ್ನಗಳನ್ನು ಅಮೆಜಾನ್, ಫ್ಲಿಪ್‌ಕಾರ್ಟ್‌ ಮೂಲಕ ಮಾರುಕಟ್ಟೆ ಮಾಡಲು ಸಾಧ್ಯವಾಗಿದೆ‘ ಎನ್ನುತ್ತಾರೆ ಅವರು.

‘ರತ್ನಪ್ರಭಾ ಅವರು ನೈಜ ಕಾಳಜಿ ಹಾಗೂ ಬದ್ಧತೆ ಇರುವ ವ್ಯಕ್ತಿಯಾಗಿದ್ದು, ಎಲ್ಲ ಸಂಘಟನೆಗಳಿಗೆ ಸೂಕ್ತ ಸಲಹೆ, ಮಾರ್ಗದರ್ಶನ ಸಿಗುತ್ತಿದೆ‘ ಎಂದು ರೇಣು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT