ಢಾಕಾ (ಬಾಂಗ್ಲಾದೇಶ): ‘ಸರಕು ಸಾಗಣೆ ಹಡಗು ಮತ್ತು ದೋಣಿಯ ನಡುವೆ ಡಿಕ್ಕಿ ಸಂಭವಿಸಿದ್ದು, 26 ಮಂದಿ ಮೃತಪಟ್ಟಿದ್ದಾರೆ’ ಎಂದು ಮಾಧ್ಯಮಗಳು ವರದಿ ಮಾಡಿವೆ.
ಈ ಘಟನೆ ಭಾನುವಾರ ಸಂಜೆ ನಾರಾಯಣ್ಗಂಜ್ ಜಿಲ್ಲೆಯಲ್ಲಿ ನಡೆದಿದೆ. ಈ ದೋಣಿಯಲ್ಲಿ 100ಕ್ಕೂ ಹೆಚ್ಚು ಪ್ರಯಾಣಿಕರಿದ್ದರು.
‘ಭಾನುವಾರ ಐದು ಶವಗಳನ್ನು ಪತ್ತೆ ಹಚ್ಚಲಾಗಿತ್ತು. ಸೋಮವಾರದ ವೇಳೆಗೆ ಒಟ್ಟು 21 ಶವಗಳನ್ನು ಹೊರ ತೆಗೆಯಲಾಯಿತು. ನೌಕಾಪಡೆ, ಕರಾವಳಿ ಕಾವಲು ಪಡೆ ಮತ್ತು ಅಗ್ನಿಶಾಮಕ ಪಡೆ ರಕ್ಷಣಾ ಕಾರ್ಯಾಚರಣೆಯಲ್ಲಿ ನಿರತರಾಗಿದ್ದಾರೆ ’ ಎಂದು ಡಾಕಾ ಟ್ರಿಬ್ಯೂನ್ ವರದಿ ಮಾಡಿದೆ.
‘ಮುನ್ಶಿಗಂಜ್ನ ಸೈಯದ್ಪುರ ಕೊಯ್ಲಾ ಘಾಟ್ನ ಬಳಿ ಎಂಎಲ್ ಸಾಬಿತ್ ಅಲ್ ಹಸನ್ ಪ್ರಯಾಣಿಕರ ದೋಣಿ ಮತ್ತು ಎಸ್ಕೆಎಲ್ –3 ಸರಕು ಸಾಗಣೆ ಹಡಗಿನ ನಡುವೆ ಡಿಕ್ಕಿ ಸಂಭವಿಸಿದೆ. ಈ ವೇಳೆ ಪ್ರಯಾಣಿಕರ ದೋಣಿ ನೀರಿನಲ್ಲಿ ಮುಳುಗಿದೆ. ಆದರೆ ಸರಕು ಸಾಗಣೆ ಹಡಗು ಅಲ್ಲಿಂದ ಪರಾರಿಯಾಗಿದೆ’ ಎಂದು ವರದಿ ಹೇಳಿದೆ.
‘ಈ ಬಗ್ಗೆ ತನಿಖೆ ನಡೆಸಲು ಹೆಚ್ಚುವರಿ ಜಿಲ್ಲಾ ಮ್ಯಾಜಿಸ್ಟ್ರೇಟ್ ನೇತೃತ್ವದಲ್ಲಿ ತಂಡವನ್ನು ರೂಪಿಸಲಾಗಿದೆ’ ಎಂದು ನಾರಾಯಣ್ಗಂಜ್ನ ಉಪ ಆಯುಕ್ತ ಮುಸ್ತೇನ್ ಬಿಲ್ಹಾ ಅವರು ತಿಳಿಸಿದರು.