ಢಾಕಾ: ಶಾಂತಿಯುತ ಮತ್ತು ಸಮೃದ್ಧ ಪ್ರದೇಶ ನಿರ್ಮಾಣವನ್ನು ಸಾಕಾರಗೊಳಿಸಲು ಭಾರತದೊಂದಿಗೆ ಕಾರ್ಯನಿರ್ವಹಿಸಲು ಬಾಂಗ್ಲಾದೇಶ ಉತ್ಸುಕವಾಗಿದೆ ಎಂದು ಪ್ರಧಾನ ಮಂತ್ರಿ ಶೇಖ್ ಹಸೀನಾ ಬುಧವಾರ ಹೇಳಿದ್ದಾರೆ.
ದೇಶದ 73ನೇ ಗಣರಾಜ್ಯೋತ್ಸವದ ಸಂದರ್ಭದಲ್ಲಿ ಭಾರತದ ಜನತೆ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಶುಭಾಶಯ ಕೋರಿ ಅವರು ಈ ಹೇಳಿಕೆ ನೀಡಿದ್ದಾರೆ.
ಈ ಕುರಿತು ಪ್ರಧಾನಿ ಮೋದಿ ಅವರಿಗೆ ಪತ್ರ ಬರೆದಿರುವ ಅವರು, ಭಾರತ ಮತ್ತು ಬಾಂಗ್ಲಾದೇಶದ ಬಾಂಧವ್ಯಕ್ಕೆ 2021 ಒಂದು ಐತಿಹಾಸಿಕ ವರ್ಷವಾಗಿದೆ. ಈ ವೇಳೆ ಉಭಯ ರಾಷ್ಟ್ರಗಳ ನಡುವೆ ಉನ್ನತ ಮಟ್ಟದ ಸಭೆಗಳು, ಕಾರ್ಯಕ್ರಮಗಳು ನಡೆದಿವೆ ಎಂದು ಅವರು ಉಲ್ಲೇಖಿಸಿದ್ದಾರೆ.
‘ಬಾಂಗ್ಲಾದೇಶದ ಸರ್ಕಾರ, ರಾಷ್ಟ್ರದ ಜನತೆ ಪರವಾಗಿ ಭಾರತದ ಜನತೆ ಮತ್ತು ಪ್ರಧಾನಿಗೆ ಭಾರತ ಗಣರಾಜ್ಯೋತ್ಸವದ ಹೃದಯಪೂರ್ವಕ ಶುಭಾಶಯಗಳು’ ಎಂದು ಹಸೀನಾ ಅವರು ಪತ್ರದಲ್ಲಿ ಹೇಳಿದ್ದಾರೆ.