ವಾಷಿಂಗ್ಟನ್: ಲಡಾಖ್ನ ಭಾರತದ ಗಡಿಯಲ್ಲಿ ಚೀನಾ ನಿರ್ಮಾಣ ಚಟುವಟಿಕೆಗಳನ್ನು ಮುಂದುವರಿಸಿರುವ ವರದಿಗಳ ಬಗ್ಗೆ ಅಮೆರಿಕದ ಪ್ರಭಾವಿ ಸಂಸದರೊಬ್ಬರು ಕಳವಳ ವ್ಯಕ್ತಪಡಿಸಿದ್ದಾರೆ.
'ಭಾರತ ಗಡಿಯಲ್ಲಿ ಚೀನಾ ನಿರ್ಮಾಣ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದೆ ಎಂಬ ವರದಿಗಳು ನಿಜವಾಗಿದ್ದರೆ, ಅದು ಚೀನಾದ 'ಪ್ರಚೋದನಕಾರಿ ಕ್ರಮ'. ಅಲ್ಲದೇ, ಈ ಕೃತ್ಯವೂ ದಕ್ಷಿಣ ಚೀನಾ ಸಮುದ್ರದಲ್ಲಿ ಅದು ವರ್ತಿಸುತ್ತಿರುವ ರೀತಿಯಲ್ಲೇ ಇದೆ,' ಎಂದು ಡೆಮಕ್ರಟಿಕ್ ಪಕ್ಷದ ಸಂಸದ ರಾಜಾ ಕೃಷ್ಣಮೂರ್ತಿ ಹೇಳಿದ್ದಾರೆ.
ಕಳೆದ ಮೇ ತಿಂಗಳಿಂದಲೂ ಭಾರತ ಮತ್ತು ಚೀನಾ ನಡುವೆ ಗಡಿ ವಿಷಯವಾಗಿ ಉದ್ವಿಘ್ನತೆ ಮನೆ ಮಾಡಿದೆ. ಈ ಸಮಸ್ಯೆ ಸರಿಪಡಿಸಿಕೊಳ್ಳಲು ಹಲವು ಹಂತಗಳಲ್ಲಿ ಮಾತುಕತೆ, ಸಮಾಲೋಚನೆಗಳು ನಡೆದಿವೆ. ಆದರೆ, ಮಾತುಕತೆ ಫಲಪ್ರದವಾಗಿಲ್ಲ.
'ಗಡಿಯಲ್ಲಿ ಚೀನಾ ನಿರ್ಮಾಣ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದೆ ಎಂಬ ವರದಿಗಳು ನಿಜವೇ ಆಗಿದ್ದರೆ, ಯಥಾಸ್ಥಿತಿಯನ್ನು ಬದಲಿಸುವುದು ಚೀನಾ ಮಿಲಿಟರಿಯ ಮತ್ತೊಂದು ಪ್ರಚೋದನಕಾರಿ ನಡೆಯಲಾಗಲಿದೆ' ಎಂದು ರಾಜ ಕೃಷ್ಣಮೂರ್ತಿ ಸುದ್ದಿ ಸಂಸ್ಥೆ ಪಿಟಿಐಗೆ ತಿಳಿಸಿದ್ದಾರೆ.
'ಭಾರತ ಗಡಿಯಲ್ಲಿ ಚೀನಾ ಪ್ರದರ್ಶಿಸುತ್ತಿರುವ ನಡವಳಿಕೆಯು, ದಕ್ಷಿಣ ಚೀನಾ ಸಮುದ್ರದಲ್ಲಿ ದ್ವೀಪ ನಿರ್ಮಿಸಲು ಹೊರಟ ಅದರ ನಡವಳಿಕೆಗಳಿಗೆ ಸರಿಹೊಂದುತ್ತದೆ. ಆ ಪ್ರದೇಶದ ಬಗ್ಗೆ ನಮಗೆ ಈ ಮೊದಲು ಇದ್ದ ಮಾಹಿತಿ ಮತ್ತು ಸತ್ಯವನ್ನು ಅವರು ಬದಲಾಯಿಸಲು ಹೊರಟಿದ್ದಾರೆ. ಅಲ್ಲಿನ ವ್ಯವಸ್ಥೆಯನ್ನು ಅವರು ತೀವ್ರವಾಗಿ ತೊಂದರೆಗೀಡು ಮಾಡಿದ್ದಾರೆ' ಎಂದು ಕೃಷ್ಣಮೂರ್ತಿ ಹೇಳಿದರು. ರಾಜ ಕೃಷ್ಣಮೂರ್ತಿ ಅವರು ಅಮೆರಿಕ ಸಂಸತ್ನ ಗುಪ್ತಚರ ವಿಭಾಗದ ಶಾಶ್ವತ ಆಯ್ಕೆ ಸಮಿತಿಗೆ ನೇಮಕವಾದ ಮೊದಲ ಭಾರತೀಯ ಅಮೆರಿಕನ್ ಆಗಿದ್ದಾರೆ.
ಇಲಿನಾಯ್ಸ್ನ ಸಂಸದರಾದ ರಾಜಕೃಷ್ಣಮೂರ್ತಿ ಚೀನಾದ ನಿರ್ಮಾಣ ಚಟುವಟಿಕೆಗಳಿಗೆ ತಾವು ಉಪಗ್ರಹ ಚಿತ್ರಗಳನ್ನು ಆಧಾರವಾಗಿ ಬಳಸಿಕೊಂಡಿರುವುದಾಗಿ ತಿಳಿಸಿದ್ದಾರೆ.