ಜೆರುಸಲೆಮ್: ಕೊರೊನಾ ಸಾಂಕ್ರಾಮಿಕ ವಿರುದ್ಧದ ಹೋರಾಡುತ್ತಿರುವ ಭಾರತಕ್ಕೆ ನೆರವಾಗಲು ಮುಂದಾಗಿರುವ ಇಸ್ರೇಲ್, ಈ ವಾರ ಪೂರ್ತಿ ಜೀವ ಉಳಿಸುವ ವೈದ್ಯಕೀಯ ಪರಿಕರಗಳನ್ನು ಕಳುಹಿಸುತ್ತಿರುವುದಾಗಿ ಪ್ರಕಟಣೆಯಲ್ಲಿ ತಿಳಿಸಿದೆ.
ಇಸ್ರೇಲ್ ಕಳುಹಿಸುವ ವೈದ್ಯಕೀಯ ಪರಿಕರಗಳಲ್ಲಿ ಆಮ್ಲಜನಕ ಉತ್ಪಾದಿಸುವ ಕಾನ್ಸನ್ಟ್ರೇಟರ್ಗಳು ಮತ್ತು ರೆಸ್ಪಿರೇಟರಿ ಸಾಧನಗಳು ಇವೆ. ಮಂಗಳವಾರದಿಂದ ಸರಣಿ ವಿಮಾನಗಳ ಮೂಲಕ ಈ ಉಪಕರಣಗಳನ್ನು ಭಾರತಕ್ಕೆ ತಲುಪಿಸಲಾಗುವುದು ಎಂದು ಪತ್ರಿಕಾ ಪ್ರಕಟಣೆ ತಿಳಿಸಿದೆ.
‘ಇಸ್ರೇಲ್ನ ಪ್ರಮುಖ ಆಪ್ತ ರಾಷ್ಟ್ರಗಳಲ್ಲಿ ಭಾರತವೂ ಒಂದು. ನಾವು ಭಾರತದ ನೆರವಿಗೆ ನಿಲ್ಲುತ್ತಿದ್ದೇವೆ. ಇಂಥ ಸಂಕಷ್ಟದ ಸಮಯದಲ್ಲಿ ಆ ದೇಶದಲ್ಲಿರುವ ನಮ್ಮ ಸಹೋದರ–ಸಹೋದರಿಯರ ಜೀವ ಉಳಿಸುವ ಸಾಧನಗಳನ್ನು ಕಳುಹಿಸುತ್ತಿದ್ದೇವೆ‘ ಎಂದು ವಿದೇಶಾಂಗ ಸಚಿವ ಗಬಿ ಅಶ್ಕೆನಾಜಿ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಅಂತರರಾಷ್ಟ್ರೀಯ ಮಟ್ಟದಲ್ಲಿ, ಅದರಲ್ಲೂ ವಿಶೇಷವಾಗಿ ಏಷ್ಯಾ-ಪೆಸಿಫಿಕ್ನಲ್ಲಿ ಇಸ್ರೇಲ್ ಜತೆಗೆ ಭಾರತ ಸದಾ ಜತೆಯಾಗಿದೆ‘ ಎಂದು ಹೇಳಿರುವ ವಿದೇಶಾಂಗ ಸಚಿವರು, ‘ಈ ತುರ್ತು ನೆರವು ಎರಡೂ ರಾಷ್ಟ್ರಗಳ ನಡುವಿನ ‘ಆಳವಾದ ಸ್ನೇಹದ ಅಭಿವ್ಯಕ್ತಿ‘ಯಾಗಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.