ಲಖನೌ: ನೇಪಾಳದ ಪೊಖರಾದಲ್ಲಿ ವಿಮಾನ ಪತನಗೊಂಡು ಮೃತಪಟ್ಟಿರುವ ಉತ್ತರಪ್ರದೇಶದ ಗಾಜಿಪುರ ಜಿಲ್ಲೆಯ ನಾಲ್ವರು ಬಾಲ್ಯಸ್ನೇಹಿತರಾಗಿದ್ದು, ಪ್ರಸಿದ್ಧ ಪಶುಪತಿನಾಥ ದೇವಾಲಯಕ್ಕೆ ಭೇಟಿ ನೀಡಲು ತೆರಳಿದ್ದರು ಎಂದು ಮೂಲಗಳು ತಿಳಿಸಿವೆ.
ಸೋನು ಜೈಸ್ವಾಲ್, ಅಭಿಷೇಕ್ ಕುಶ್ವಾಹಾ, ಅನಿಲ್ ರಾಜ್ಬರ್ ಮತ್ತು ವಿಶಾಲ್ ಶರ್ಮಾ ಅವರು ಜನವರಿ 10ರಂದು ನೇಪಾಳಕ್ಕೆ ತೆರಳಿದ್ದರು ಮತ್ತು ಕಠ್ಮಂಡುವಿನಿಂದ ಪೊಖರಾಕ್ಕೆ ಯೇತಿ ಏರ್ಲೈನ್ಸ್ ವಿಮಾನದಲ್ಲಿ ತೆರಳುತ್ತಿದ್ದಾಗ ಅವಘಡ ಸಂಭವಿಸಿದೆ ಎಂದಿವೆ.
ಈ ನಾಲ್ವರು ಒಂದೇ ಶಾಲೆಯಲ್ಲಿ ಕಲಿತಿದ್ದು, ತುಂಬಾ ಆತ್ಮೀಯರಾಗಿದ್ದರು. ಅಭಿಷೇಕ್, ಅನಿಲ್ ಮತ್ತು ವಿಶಾಲ್ ಅವರು ಮೊದಲ ಬಾರಿಗೆ ವಿಮಾನದಲ್ಲಿ ಪ್ರಯಾಣಿಸುತ್ತಿದ್ದರು ಮತ್ತು ತುಂಬಾ ಉತ್ಸುಕರಾಗಿದ್ದರು ಎಂದೂ ವಿವರಿಸಿವೆ.
ಸೋನು ಜೈಸ್ವಾಲ್ ಮದ್ಯದ ವ್ಯಾಪಾರ ಮಾಡುತ್ತಿದ್ದು, ಪಶುಪತಿನಾಥ ದೇವಾಲಯ ದರ್ಶನಕ್ಕಾಗಿ ಇತರ ಮೂವರನ್ನೂ ಆತನೇ ಕರೆದೊಯ್ದಿದ್ದ ಎಂದಿವೆ. ವಿಮಾನ ಪತನಗೊಳ್ಳುತ್ತಿದ್ದ ಸಂದರ್ಭದಲ್ಲಿ ಸೋನು ಫೇಸ್ಬುಕ್ ಲೈವ್ ಮಾಡಿದ್ದು, ಆ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡಿತ್ತು.