ಜಕಾರ್ತ: ಮ್ಯಾನ್ಮಾರ್ನಲ್ಲಿ ಸೇನಾ ಆಳಿತ ಜಾರಿಯಾಗಿರುವುದನ್ನು ವಿರೋಧಿಸಿ ದೇಶದಾದ್ಯಂತ ಆರೋಗ್ಯ ಕಾರ್ಯಕರ್ತರು ಸೋಮವಾರದಿಂದ ತಾವು ಕೆಲಸ ಮಾಡುವುದಿಲ್ಲ ಎಂದು ಘೋಷಿಸಿ, ಕೆಂಪು ಪಟ್ಟಿ ಧರಿಸಿ ‘ಅಸಹಕಾರ ಚಳವಳಿ‘ ಆರಂಭಿಸಿದ್ದಾರೆ.
ಇಲ್ಲಿನ ಸರ್ಕಾರಿ ಆಸ್ಪತ್ರೆಗಳು ಮತ್ತು ಆರೋಗ್ಯ ಸೇವಾ ಕೇಂದ್ರಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಆರೋಗ್ಯ ಕಾರ್ಯಕರ್ತರು, ಮಿಲಿಟರಿ ಆಡಳಿತವನ್ನು ವಿರೋಧಿಸಿ ನಡೆಸುತ್ತಿರುವ ಅಸಹಕಾರ ಚಳವಳಿ ಕುರಿತು ಬುಧವಾರ ಈ ಹೇಳಿಕೆ ಬಿಡುಗಡೆ ಮಾಡಿದ್ದಾರೆ.
‘ಸೇನಾಡಳಿತದ ಸರ್ವಾಧಿಕಾರದ ವಿರುದ್ಧದ ನಮ್ಮ ಒಗ್ಗಟ್ಟನ್ನು ಜಗತ್ತಿಗೇ ತೋರಿಸುವುದಕ್ಕಾಗಿ ಪ್ರತಿಭಟನೆ ನಡೆಸುತ್ತಿದ್ದೇವೆ. ಮ್ಯಾನ್ಮಾರ್ನಲ್ಲಿ ನಾಗರಿಕ ಸರ್ಕಾರ ಪುನಃ ಅಧಿಕಾರಕ್ಕೆ ಮರಳಬೇಕೆಂದು ಬಯಸುತ್ತೇವೆ‘ ಎಂದು ಯಾಂಗೂನ್ ನಿವಾಸಿ ಡಾ. ಜುನ್ ಐ ಫ್ಯೂ ಹೇಳಿಕೆಯಲ್ಲಿ ತಿಳಿಸಿದ್ದಾರೆ.
‘ನಾವೇ ಆರಿಸಿದ ಸರ್ಕಾರ ರೂಪಿಸಿದ ಕಾನೂನು ನಿಯಮಗಳನ್ನು ಮಾತ್ರ ಪಾಲಿಸುತ್ತೇವೆಯೇ ಹೊರತು ಮಿಲಿಟರಿ ಸರ್ಕಾರಕ್ಕೆ ಬೆಂಬಲಿಸುವುದಿಲ್ಲ ಎಂದು ತೋರಿಸಲು ಪ್ರತಿಭಟನೆ ನಡೆಸುತ್ತಿದ್ದೇವೆ’ ಎಂದು ಜುನ್ ತಿಳಿಸಿದ್ದಾರೆ.
ಆರೋಗ್ಯ ಕಾರ್ಯಕರ್ತರು ಕೆಂಪು ರಿಬ್ಬನ್ಗಳನ್ನು ತಮ್ಮ ವಸ್ತ್ರಗಳಿಗೆ ಸಿಕ್ಕಿಸಿಕೊಂಡು ಅಸಹಕಾರ ಪ್ರತಿಭಟನೆ ನಡೆಸಿದರು. ಕೆಲವು ಕಾರ್ಯಕರ್ತರು ಕೆಂಪುರಿಬ್ಬನ್ ಧರಿಸಿರುವ ಚಿತ್ರಗಳನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳುತ್ತಿದ್ದಾರೆ.
ಮ್ಯಾನ್ಮಾರ್ನಲ್ಲಿ ಕಳೆದ ವರ್ಷದ ನವೆಂಬರ್ನಲ್ಲಿ ನಡೆದ ಚುನಾವಣೆಯಲ್ಲಿ ಅಕ್ರಮ ನಡೆದಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ಆಂಗ್ ಸಾನ್ ಸೂ ಕಿ ನೇತೃತ್ವತದ ನಾಗರಿಕ ಸರ್ಕಾರವನ್ನು ಉಚ್ಚಾಟಿಸಿ ಸೇನಾಡಳಿತ ಹೇರಲಾಗಿದೆ.