ಕೊಲಂಬೊ: ಶ್ರೀಲಂಕಾದಲ್ಲಿ ಪ್ರತಿಭಟನಾಕಾರರು ಅಧ್ಯಕ್ಷರು ಮತ್ತು ಪ್ರಧಾನಿಗಳ ಅಧಿಕೃತ ನಿವಾಸಕ್ಕೆ ನುಗ್ಗಿ ದಾಂದಲೆ ನಡೆಸುತ್ತಿರುವ ಹಿನ್ನೆಲೆಯಲ್ಲಿ ಶ್ರೀಲಂಕಾಕ್ಕೆ ಭಾರತ ಸೇನಾಪಡೆಯನ್ನು ಕಳುಹಿಸಲಿದೆ ಎಂಬ ಮಾಧ್ಯಮ ವರದಿಗಳನ್ನು ಶ್ರೀಲಂಕಾದಲ್ಲಿರುವ ಭಾರತೀಯ ಹೈಕಮಿಷನ್ ಅಲ್ಲಗಳೆದಿದೆ.
‘ಶ್ರೀಲಂಕಾಕ್ಕೆ ಭಾರತ ತನ್ನ ಸೈನ್ಯ ಕಳುಹಿಸಲಿದೆ ಎಂಬ ವರದಿಗಳನ್ನು ಭಾರತೀಯ ಹೈ ಕಮಿಷನ್ ಸ್ಪಷ್ಟವಾಗಿ ನಿರಾಕರಿಸಲು ಬಯಸುತ್ತದೆ’ ಎಂದು ಟ್ವೀಟ್ ಮಾಡಿದೆ.
‘ಪ್ರಜಾಸತ್ತಾತ್ಮಕ ಮೌಲ್ಯಗಳು ಮತ್ತು ಸಾಂವಿಧಾನಿಕ ಚೌಕಟ್ಟಿನ ಮೂಲಕ ಸಮೃದ್ಧಿ ಮತ್ತು ಪ್ರಗತಿಗೆ ಪ್ರಯತ್ನಿಸುತ್ತಿರುವ ಶ್ರೀಲಂಕಾದ ಜನರೊಂದಿಗೆ ಭಾರತ ನಿಂತಿದೆ ಎಂದು ಭಾರತದ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರರು ಹೇಳಿದ್ದಾರೆ’ ಎಂದು ಅದು ಹೇಳಿದೆ.