ಸಿಂಗಪುರ: ವಲಸೆ ಕಾರ್ಮಿಕರಿಗೆ ಆಯೋಜಿಸಿದ್ದ ಸ್ಪರ್ಧೆಯಲ್ಲಿ ಭಾರತೀಯನಿಗೆ ಬಹುಮಾನ

ಸಿಂಗಪುರ: ಸಿಂಗಪುರ ಸರ್ಕಾರವು ವಲಸೆ ಕಾರ್ಮಿಕರಿಗಾಗಿ ಆಯೋಜಿಸಿದ್ದ ಸ್ಪರ್ಧೆಯಲ್ಲಿ ತಮಿಳುನಾಡು ಮೂಲದ ಗಣೇಶನ್ ಸಂಧಿರಕಾಸನ್ ಪ್ರಥಮ ಬಹುಮಾನ ಗಳಿಸಿದ್ದಾರೆ.
ಭಾರತದ ಸಾಂಪ್ರದಾಯಿಕ ಸಮರ ಕಲೆ ಸಿಲಾಂಬಮ್ ಅನ್ನು ಪ್ರದರ್ಶಿಸುವ ಮೂಲಕ ಗಣೇಶನ್ ಅವರು ₹55 ಸಾವಿರ ನಗದು ಬಹುಮಾನ ಗೆದ್ದಿದ್ದಾರೆ. ಈ ಸಮರ ಕಲೆಯನ್ನು ಕ್ರಿ.ಪೂ 4ನೇ ಶತಮಾನದಿಂದ ಭಾರತದಲ್ಲಿ ಪ್ರದರ್ಶಿಸಲಾಗುತ್ತಿದೆ.
ಇದು ತಮಿಳಿನ ‘ಚಿಲ್ ಪನ್ನು ಮಾಪಿ’ ಕಾರ್ಯಕ್ರಮದ ಭಾಗವಾಗಿದೆ. ಇದನ್ನು ಸಂವಹನ ಮತ್ತು ಮಾಹಿತಿ ಸಚಿವಾಲಯ ಆಯೋಜಿಸಿದ್ದು, ಈ ಕಾರ್ಯಕ್ರಮವನ್ನು ಕಾಸ್ಮಿಕ್ ಅಲ್ಟಿಮಾ ಪಿಚರ್ಸ್ ನಿರ್ಮಾಣ ಮಾಡಿದೆ.
ಈ ಸ್ಪರ್ಧೆಯನ್ನು ವಲಸೆ ಕಾರ್ಮಿಕರಿಗಾಗಿ ಆಯೋಜಿಸಲಾಗಿತ್ತು. ಇದರ ಫಿನಾಲೆ ಎಪಿಸೋಡ್ ಅನ್ನು ಸೋಮವಾರ ರಾತ್ರಿ ಪ್ರಸಾರ ಮಾಡಲಾಯಿತು.
‘ವಲಸೆ ಕಾರ್ಮಿಕರಿಗೆ ವಿಡಿಯೊದ ಮೂಲಕ ತಮ್ಮ ಪ್ರತಿಭೆಯನ್ನು ತೋರಿಸುವಂತೆ ಸೂಚಿಸಲಾಗಿತ್ತು. ಈ ಸ್ಪರ್ಧೆಗೆ 600ಕ್ಕೂ ಹೆಚ್ಚು ಮಂದಿ ಅರ್ಜಿ ಸಲ್ಲಿಸಿದ್ದರು. ಅದರಲ್ಲಿ 19 ಮಂದಿಯನ್ನು ಆಯ್ಕೆ ಮಾಡಲಾಗಿತ್ತು’ ಎಂದು ಕಾರ್ಯಕ್ರಮದ ಕಾರ್ಯನಿರ್ವಾಹಕ ನಿರ್ಮಾಪಕ ಎಸ್.ಎಸ್. ವಿಜ್ನೇಶ್ವರನ್ ತಿಳಿಸಿದರು.
ಗಣೇಶನ್ ಅವರು ತಮ್ಮ ಸಿಲಾಂಬಮ್ ವಿಡಿಯೊವನ್ನು ಟಿಕ್ಟಾಕ್ನಲ್ಲಿ ಹಂಚಿಕೊಂಡಿದ್ದರು. ಅದಕ್ಕೆ ಅತಿ ಹೆಚ್ಚು ಲೈಕ್ ಮತ್ತು ವ್ಯೂವ್ಗಳು ಬಂದಿವೆ.
ಗಣೇಶನ್ ಅವರು ತಮ್ಮ 12ನೇ ವಯಸ್ಸಿನಲ್ಲಿ ಸಿಲಾಂಬಮ್ ಅಭ್ಯಾಸ ಪ್ರಾರಂಭಿಸಿದ್ದರು. 2010ರಲ್ಲಿ ನಡೆದ ಮೊದಲ ಸಿಲಾಂಬಮ್ ವಿಶ್ವ ಚಾಂಪಿಯನ್ಶಿಪ್ನಲ್ಲಿ ಅವರು ಬೆಳ್ಳಿ ಪದಕ ಗೆದ್ದಿದ್ದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.