ಲಂಡನ್: ಇಲ್ಲಿನ ನಾರ್ತ್ವೇಲ್ಸ್ನಲ್ಲಿ ಭಾರತ ಮೂಲದ ಐವರು ವ್ಯಕ್ತಿಗಳು ನಡೆಸುತ್ತಿರುವ ಕಾಳಜಿ ಕೇಂದ್ರಗಳಲ್ಲಿ ಕೆಲಸ ಮಾಡುತ್ತಿರುವ 50ಕ್ಕೂ ಹೆಚ್ಚು ಭಾರತೀಯ ವಿದ್ಯಾರ್ಥಿಗಳು ಜೀತದಾಳಾಗುವ ಭೀತಿ ಎದುರಿಸುತ್ತಿದ್ದಾರೆ. ಈ ಸಂಬಂಧ ಸಹಾಯ ಮತ್ತು ಆಪ್ತಸಮಾಲೋಚನೆಗಾಗಿ ವಿದ್ಯಾರ್ಥಿಗಳು ತಮ್ಮ ಕಚೇರಿಯನ್ನು ಸಂಪರ್ಕಿಸುವಂತೆ ಭಾರತೀಯ ಹೈಕಮೀಷನ್ ಶುಕ್ರವಾರ ಹೇಳಿದೆ.
ಕಾರ್ಮಿಕರ ನಿಂದನೆ ಮತ್ತು ಶೋಷಣೆ ಮಾಡುತ್ತಿರುವ ಆರೋಪದ ಮೇಲೆ ಈ ಐವರ ವಿರುದ್ಧ ‘ಗ್ಯಾಂಗ್ ಮಾಸ್ಟರ್ಸ್ ಮತ್ತು ಲೇಬರ್ ಅಬ್ಯೂಸ್ ಅಥಾರಿಟಿ’ (ಜಿಎಲ್ಎಎ) ಪ್ರಕರಣ ದಾಖಲಿಸಿದೆ. ಈ ಸಂಸ್ಥೆಯು ಕಾರ್ಮಿಕರ ಶೋಷಣೆ ಬಗ್ಗೆ ತನಿಖೆ ಮಾಹಿತಿ ಸಂಗ್ರಹಿಸಿ, ಕ್ರಮ ತೆಗೆದುಕೊಳ್ಳುತ್ತದೆ.
ಆರೋಪಿಗಳಾದ ಮ್ಯಾಥ್ಯೂ ಐಸಾಕ್, ಜೆನು ಚೆರಿಯನ್, ಎಲ್ದೋಸ್ ಚೆರಿಯನ್, ಎಲ್ದೋಸ್ ಕುರಿಯಾಚ್ಚನ್ ಮತ್ತು ಜೆಕೊಬ್ ಲಿಜಿ ಎಂಬುವರನ್ನು ಬಂಧಿಸಲಾಗಿದೆ. ಬಂಧಿತರೆಲ್ಲರೂ ಕೇರಳದವರು ಎಂದು ಮೂಲಗಳು ಹೇಳಿವೆ.
‘ಈ ಪ್ರಕರಣದಲ್ಲಿ ಕಳೆದ 14 ತಿಂಗಳುಗಳಲ್ಲಿ 50ಕ್ಕೂ ಹೆಚ್ಚು ಭಾರತೀಯ ವಿದ್ಯಾರ್ಥಿಗಳು ಶೋಷಣೆಗೆ ಒಳಗಾಗಿದ್ದಾರೆ’ ಎಂದೂ ಜಿಎಲ್ಎಎ ವರದಿ ಮಾಡಿತ್ತು.