ಲಾಸ್ ಏಂಜಲಿಸ್: ಇತ್ತೀಚೆಗೆ ಕ್ಯಾಲಿಫೊರ್ನಿಯಾದಲ್ಲಿ ನಡೆದ ಗುಂಡಿನ ದಾಳಿ ಸಂದರ್ಭದಲ್ಲಿ ಹಲವರನ್ನು ರಕ್ಷಿಸಿ ಸಾವಿಗೀಡಾದ ಭಾರತ ಮೂಲದ ತಪ್ತೆಜದೀಪ್ ಸಿಂಗ್ ಅವರಿಗೆ ‘ಹೀರೊ’ ಪಟ್ಟ ನೀಡಿ ಗೌರವಿಸಲಾಗುತ್ತಿದೆ.
ಮೇ 26ರಂದು ನಡೆದ ದಾಳಿಯಲ್ಲಿ ತಪ್ತೆಜದೀಪ್ ಸಿಂಗ್ ಸೇರಿದಂತೆ ಒಂಬತ್ತು ಮಂದಿ ಸಾವಿಗೀಡಾಗಿದ್ದರು. ‘ವ್ಯಾಲಿ ಟ್ರಾನ್ಸ್ಫೋರ್ಟ್ ಅಥಾರಿಟಿ’ಯ (ವಿಟಿಎ) ಉದ್ಯೋಗಿಗಳ ಮೇಲೆ ಈ ದಾಳಿ ನಡೆಸಲಾಗಿತ್ತು.
ತಪ್ತೆಜದೀಪ್ ಸಿಂಗ್ (36) ಮೌಲ್ಯಯುತ ಜೀವನ ನಡೆಸಿದ್ದರು ಮತ್ತು ಇತರರ ಸೇವೆಯಲ್ಲಿ ತೊಡಗಿದ್ದರು ಎಂದು ಅವರ ಕುಟುಂಬದ ಸದಸ್ಯರು ಸ್ಮರಿಸಿದ್ದಾರೆ.
‘ಸಿಂಗ್ ಅವರಿಂದಾಗಿ ಹಲವರು ಇಂದು ಸುರಕ್ಷಿತವಾಗಿದ್ದಾರೆ. ಅವರನ್ನು ನಾವು ಎಂದಿಗೂ ಮರೆಯಲು ಸಾಧ್ಯವಿಲ್ಲ’ ಎಂದು ವಿಟಿಎ ಉದ್ಯೋಗಿ ಸುಖವೀರ್ ಸಿಂಗ್ ಸ್ಮರಿಸಿದ್ದಾರೆ.
ಗುರುವಾರ ಸುಮಾರು ಎರಡು ಸಾವಿರಕ್ಕೂ ಹೆಚ್ಚು ಮಂದಿ ಸ್ಯಾನ್ ಜೋಸ್ ಸಿಟಿ ಹಾಲ್ನಲ್ಲಿ ಸೇರಿ ವಿಟಿಎ ದಾಳಿಯಲ್ಲಿ ಸಾವಿಗೀಡಾದವರಿಗೆ ಶ್ರದ್ಧಾಂಜಲಿ ಸಲ್ಲಿಸಿದರು.
ದಾಳಿ ನಡೆಸಿದ ಬಂದೂಕುಧಾರಿ ಸ್ಯಾಮುಲ್ ಕ್ಯಾಸ್ಸಿಡಿಗೆ (57), ಕೆಲವರ ಮೇಲೆ ದ್ವೇಷ ಇತ್ತು. ದಾಳಿ ನಡೆಸಿದ ಸಂದರ್ಭದಲ್ಲಿ ಎಲ್ಲರ ಮೇಲೆಯೂ ಆತ ಗುಂಡು ಹಾರಿಸಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.