ಜಕಾರ್ತ: ಇಂಡೊನೇಷ್ಯಾ ರಾಜಧಾನಿ ಜಕಾರ್ತದಿಂದ ಹೊರಟಿದ್ದ ಶ್ರೀವಿಜಯ ಏರ್ನ ವಿಮಾನ ಶನಿವಾರ ನಾಪತ್ತೆಯಾಗಿದೆ. ಇದರಲ್ಲಿ 62 ಜನ ಪ್ರಯಾಣಿಕರಿದ್ದಾರೆ.
ಮಧ್ಯಾಹ್ನ 1.56ಕ್ಕೆ ವಿಮಾನ ಟೇಕಾಫ್ ಆಯಿತು. ಮಧ್ಯಾಹ್ನ 2.40ರ ವೇಳೆಗೆ ವಿಮಾನವು (ಬೋಯಿಂಗ್ 737–500) ಏರ್ ಟ್ರಾಫಿಕ್ ಕಂಟ್ರೋಲರ್ ಜೊತೆ ಸಂಪರ್ಕ ಕಳೆದುಕೊಂಡಿತು ಎಂದು ಇಂಡೊನೇಷ್ಯಾದ ಸಾರಿಗೆ ಸಚಿವಾಲಯದ ವಕ್ತಾರರಾದ ಅದಿತಾ ಇರಾವತಿ ಹೇಳಿದ್ದಾರೆ.
ಈ ವಿಮಾನವು ಜಕಾರ್ತದಿಂದ ಬೋರ್ನಿಯೊ ದ್ವೀಪದ ವೆಸ್ಟ್ ಕಲಿಮಂತಾನ್ ಪ್ರಾಂತ್ಯದ ರಾಜಧಾನಿ ಪೊಂಟಿಯಾನಕ್ಗೆ ಹೊರಟಿತ್ತು. 56 ಪ್ರಯಾಣಿಕರು ಹಾಗೂ 6 ಜನ ಸಿಬ್ಬಂದಿ ವಿಮಾನದಲ್ಲಿದ್ದಾರೆ ಎಂದು ಶ್ರೀವಿಜಯ ಏರ್ನ ಪ್ರಕಟಣೆ ತಿಳಿಸಿದೆ.
‘ವಿಮಾನ ಪತ್ತೆ ಹಾಗೂ ರಕ್ಷಣಾ ಕಾರ್ಯವನ್ನು ಕೈಗೆತ್ತಿಕೊಳ್ಳಲಾಗಿದೆ. ನ್ಯಾಷನಲ್ ಸರ್ಚ್ ಆ್ಯಂಡ್ ರೆಸ್ಕ್ಯೂ ಏಜೆನ್ಸಿ, ನ್ಯಾಷನಲ್ ಟ್ರಾನ್ಸ್ಪೋರ್ಟೇಷನ್ ಸೇಫ್ಟಿ ಕಮಿಟಿ ಈ ಕಾರ್ಯದ ಉಸ್ತುವಾರಿ ನೋಡಿಕೊಳ್ಳುತ್ತಿವೆ’ ಎಂದು ಇರಾವತಿ ತಿಳಿಸಿದ್ದಾರೆ.