ಸಿಂಗಪುರ: ಮಹಾತ್ಮ ಗಾಂಧೀಜಿಯವರ ವಿಚಾರಗಳು ಮತ್ತು ಸಂದೇಶಗಳು ಹಿಂದೆಂದಿಗಿಂತಲೂ ಈಗ ಪ್ರಸ್ತುತವಾಗಿವೆ ಎಂದು ಇಲ್ಲಿನ ಭಾರತೀಯ ಹೈ ಕಮಿಷನರ್ ಪಿ.ಕುಮಾರನ್ ಅಭಿಪ್ರಾಯಪಟ್ಟಿದ್ದಾರೆ.
ಮಹಾತ್ಮ ಗಾಂಧೀಜಿಯವರ 151ನೇ ಜನ್ಮದಿನದ ಅಂಗವಾಗಿ ಶುಕ್ರವಾರಗ್ಲೋಬಲ್ ಇಂಡಿಯನ್ ಇಂಟರ್ ನ್ಯಾಷನಲ್ ಶಾಲೆಯಲ್ಲಿ (ಜಿಐಐಎಸ್) ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಗಾಂಧೀಜಿಯವರಿಗೆ ನಮನ ಸಲ್ಲಿಸಿ ಅವರು ಮಾತನಾಡಿದರು.
‘ಜನ–ಕೇಂದ್ರಿತ ಉತ್ತಮ ಆಡಳಿತ ನೀಡುವ, ಜನರಿಗೆ ಉತ್ತಮ ಜೀವನಮಟ್ಟ ಕಲ್ಪಿಸುವ, ಪ್ರಕೃತಿ ಗೌರವಿಸುವ, ಸಾಮರಸ್ಯದಿಂದ ಸಹಬಾಳ್ವೆ ನಡೆಸುವಂತಹ ಆಡಳಿತ ನೀಡಬೇಕೆನ್ನುವ ರಾಜಕೀಯ ನಾಯಕರು ಮತ್ತು ನೀತಿ ನಿರೂಪಕರ ಸುತ್ತ ಗಾಂಧಿ ತತ್ವಗಳು ಅನುರಣಿಸುತ್ತಿರುತ್ತವೆ‘ ಎಂದು ಹೇಳಿದರು.
ಗಾಂಧಿ ಜಯಂತಿ ಕುರಿತು ಭಾರತೀಯ ವಿದ್ಯಾರ್ಥಿಗಳು ಮತ್ತು ಸ್ಥಳೀಯ ಸಮುದಾಯದ ಮುಖಂಡರನ್ನುದ್ದೇಶಿಸಿ ಮಾತನಾಡಿದ ಅವರು, ಗಾಂಧಿಯವರ ಸ್ವಚ್ಛತೆಯ ಒತ್ತಾಯವು ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದ ಸರ್ಕಾರದ 'ಸ್ವಚ್ಛ ಭಾರತ್ (ಕ್ಲೀನ್ ಇಂಡಿಯಾ) ಕಾರ್ಯಕ್ರಮಕ್ಕೆ ಪ್ರೇರಣೆ ನೀಡಿತು ಎಂದು ಪ್ರತಿಪಾದಿಸಿದರು.