ಮ್ಯಾನ್ಮಾರ್: ಪ್ರಜಾಪ್ರಭುತ್ವ ಮರುಸ್ಥಾಪಿಸಲು ಆಗ್ರಹಪಡಿಸಿ ನಡೆಯುತ್ತಿರುವ ಪ್ರತಿಭಟಿಸುತ್ತಿದ್ದವರ ಮೇಲೆ ಪೊಲೀಸರು, ಭದ್ರತಾ ಸಿಬ್ಬಂದಿ ಗುಂಡು ಹಾರಿಸಿದ್ದು ಶನಿವಾರ ಕನಿಷ್ಠ 100 ಮಂದಿ ಮೃತಪಟ್ಟಿದ್ದಾರೆ. ಅದರ ಹಿಂದೆಯೇ ಭಾನುವಾರ ಪ್ರತಿಭಟನಕಾರರು ದೊಡ್ಡ ಸಂಖ್ಯೆಯಲ್ಲಿ ಮತ್ತೆ ಬೀದಿಗೆ ಇಳಿದಿದ್ದಾರೆ.
ಮ್ಯಾನ್ಮಾರ್ನ ಎರಡು ಅತಿದೊಡ್ಡ ನಗರಗಳಾದ ಯಾಂಗೂನ್ ಮತ್ತು ಮ್ಯಾಂಡಲೆಯಲ್ಲಿ ಪ್ರತಿಭಟನೆ ತೀವ್ರಗೊಂಡಿದೆ. ಹಲವು ಪ್ರತಿಭಟನಕಾರರು ಪೊಲೀಸರ ಜೊತೆಗೆ ಮುಖಾಮುಖಿಯಾಗಿದ್ದಾರೆ. ಪ್ರತಿಭಟನೆ ಹತ್ತಿಕ್ಕುವ ಕ್ರಮವಾಗಿ ಪೊಲೀಸರು, ಭದ್ರತಾ ಸಿಬ್ಬಂದಿ ಪ್ರತಿರೋಧದಿಂದಾಗಿ ಕನಿಷ್ಠ 114 ಮಂದಿ ಸತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಆನ್ಲೈನ್ ಸುದ್ದಿ ಸಂಸ್ಥೆಯಾದ ಮ್ಯಾನ್ಮಾರ್ ನೌ ಪ್ರಕಾರ, ಮೃತರಲ್ಲಿ 16 ವರ್ಷದ ಮೀರದ ಅನೇಕ ಮಕ್ಕಳು ಸೇರಿದ್ದಾರೆ. ಇತರೆ ಮಾಧ್ಯಮ ಸಂಸ್ಥೆಗಳು ಕೂಡಾ ಇಷ್ಟೇ ಸಂಖ್ಯೆಯಲ್ಲಿ ಜನರು ಸತ್ತಿದ್ದಾರೆ ಎಂದು ವರದಿ ಮಾಡಿವೆ. ಪ್ರಜಾಪ್ರಭುತ್ವ ಮರುಸ್ಥಾಪನೆಗೆ ಒತ್ತಾಯಿಸಿ ನಡೆಯುತ್ತಿರುವ ಪ್ರತಿಭಟನೆ ವೇಳೆ ಇದುವರೆಗೂ ಸುಮಾರು 420 ಜನರು ಮೃತಪಟ್ಟಿದ್ದಾರೆ.
ಸೇನಾದಂಗೆಯ ನಂತರ ಪ್ರತಿಭಟನೆ ದಿನೇ ದಿನೇ ತೀವ್ರಗೊಳ್ಳುತ್ತಿದ್ದು, ಮ್ಯಾನ್ಮಾರ್ ಈಗ ಅಂತರರಾಷ್ಟ್ರೀಯ ಸಮುದಾಯದ ಗಮನಸೆಳೆದಿದೆ. ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಅಂಟೊನಿಯೊ ಗುಟೆರಸ್ ಅವರು, ಮಕ್ಕಳು ಸೇರಿದಂತೆ ಹಲವರ ಸಾವು ದಿಗ್ಭ್ರಮೆ ಮೂಡಿಸುವಂಥದ್ದಾಗಿದೆ ಎಂದು ಪ್ರತಿಕ್ರಿಯಿಸಿದ್ದಾರೆ.