ಇಸ್ಲಾಮಾಬಾದ್ : ಪಾಕಿಸ್ತಾನದ ಪೇಶಾವರದಲ್ಲಿ ಇತ್ತೀಚೆಗೆ ನಡೆದ ಆತ್ಮಾಹುತಿ ಬಾಂಬ್ ದಾಳಿ ಬಳಿಕ ಭಯೋತ್ಪಾದನೆ ವಿರುದ್ಧ ಏಕತೆಯಿಂದ ಹೋರಾಡಲು ಪ್ರಧಾನಿ ಶೆಹಬಾಜ್ ಷರೀಫ್ ಶುಕ್ರವಾರ ಕರೆ ನೀಡಿದ್ದಾರೆ.
ನಗರದ ಮಸೀದಿಯೊಂದರ ಮೇಲಿನ ದಾಳಿಯಲ್ಲಿ 100ಕ್ಕೂ ಹೆಚ್ಚು ಜನ ಮೃತಪಟ್ಟಿದ್ದರು. ಈ ಸಂಬಂಧ ಪೆಶಾವರದಲ್ಲಿ ನಡೆದ ಅಪೆಕ್ಸ್ ಕಮಿಟಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಷರೀಫ್, ಭಯೋತ್ಪಾದನೆಯ ವಿರುದ್ಧ ಎಲ್ಲರು ಒಟ್ಟಾಗಿ ಕೆಲಸ ಮಾಡಲು ಕರೆ ನೀಡಿದ್ದಾರೆ ಎಂದು ಕ್ಸಿನ್ಹುವಾ ವರದಿ ಮಾಡಿದೆ.
‘ರಾಜಕೀಯ ಪಕ್ಷಗಳ ನಾಯಕತ್ವದಲ್ಲಿ ಪ್ರಾಂತ್ಯಗಳು ಮತ್ತು ಕೇಂದ್ರ ಸರ್ಕಾರ ಒಟ್ಟಾಗಿ ಭಯೋತ್ಪಾದನೆ ವಿರುದ್ಧ ಹೋರಾಡಬೇಕು. ಎಲ್ಲ ಭಿನ್ನಾಭಿಪ್ರಾಯಗಳನ್ನು ದೂರವಿಡುವ ಸಮಯ ಬಂದಿದೆ. ಎಲ್ಲ ಒಗ್ಗೂಡಿ ಭಯೋತ್ಪಾದನೆ ಎದುರಿಸಬೇಕು’ ಎಂದು ಪ್ರಧಾನಿ ಹೇಳಿದರು.
‘ಪೆಶಾವರವು ಇತ್ತೀಚೆಗೆ ನೂತನ ಭಯೋತ್ಪಾದಕ ಘಟನೆಗಳಿಗೆ ಸಾಕ್ಷಿಯಾಗಿದೆ. ಹೀಗಾಗಿ ಭದ್ರತಾ ಇಲಾಖೆಗಳಲ್ಲಿ ಸಾಮರ್ಥ್ಯ ವರ್ಧನೆಯ ಅಗತ್ಯವಿದೆ. ಭಯೋತ್ಪಾದನೆಯನ್ನು ಎದುರಿಸಲು ಭಯೋತ್ಪಾದನಾ ನಿಗ್ರಹ ದಳಕ್ಕೆ ಗರಿಷ್ಠ ಬೆಂಬಲವನ್ನು ಒದಗಿಸಲಾಗುವುದು’ ಎಂದು ಅವರು ಹೇಳಿದರು.
‘ಇತ್ತೀಚೆಗೆ ಪೆಶಾವರದಲ್ಲಿ ನಡೆದ ದಾಳಿಯಲ್ಲಿ, ಭಯೋತ್ಪಾದಕ ಭದ್ರತೆಗಳನ್ನು ಲೆಕ್ಕಿಸದೆ ಮಸೀದಿಯನ್ನು ತಲುಪುವಲ್ಲಿ ಯಶಸ್ವಿಯಾಗಿದ್ದಾನೆ. ಸತ್ಯ ಮತ್ತು ತಪ್ಪುಗಳನ್ನು ಒಪ್ಪಿಕೊಳ್ಳಲು ನಾವು ಹಿಂಜರಿಯಬಾರದು. ಭದ್ರತಾ ಲೋಪಗಳಿಂದಾಗಿ ನಡೆದ ಘಟನೆ ಬಗ್ಗೆ ತನಿಖೆ ನಡೆಸಲಾಗುವುದು’ ಎಂದು ಷರೀಫ್ ಹೇಳಿದ್ದಾರೆ.