ಹವಾಮಾನ ಬದಲಾವಣೆ: ಗ್ಲಾಸ್ಗೊ ಶೃಂಗಸಭೆಯಲ್ಲಿ ಭಾರತದ ಕ್ರಮಗಳನ್ನು ತಿಳಿಸಲಿರುವ ಮೋದಿ

ಗ್ಲಾಸ್ಗೊ (ಲಂಡನ್): ಗ್ಲಾಸ್ಗೊದಲ್ಲಿ ನಡೆಯಲಿರುವ ಹವಾಮಾನ ಬದಲಾವಣೆ ಶೃಂಗಸಭೆಯಲ್ಲಿ (ಸಿಒಪಿ26) ಪ್ರಧಾನಿ ನರೇಂದ್ರ ಮೋದಿಯವರು ಭಾರತವು ಹವಾಮಾನ ಬದಲಾವಣೆ ನಿಯಂತ್ರಣ ಕುರಿತು ಕೈಗೊಂಡಿರುವ ಕ್ರಮಗಳು ಮತ್ತು ಈ ವಲಯದಲ್ಲಿ ಅನುಸರಿಸುತ್ತಿರುವ ಉತ್ತಮ ಪದ್ಧತಿಗಳು ಹಾಗೂ ಮಾಡಿರುವ ಸಾಧನೆಗಳನ್ನು ಮಂಡಿಸಲಿದ್ದಾರೆ.
ಈ ಶೃಂಗಸಭೆಯಲ್ಲಿ ವಿಶ್ವದ ವಿವಿಧ ರಾಷ್ಟ್ರಗಳ ನಾಯಕರೊಂದಿಗೆ, ಪ್ರಧಾನಿ ಮೋದಿಯವರು, ತಮ್ಮ ರಾಷ್ಟ್ರೀಯ ಹೇಳಿಕೆಯನ್ನು ದಾಖಲಿಸಲು ನಿರ್ಧರಿಸಿದ್ದಾರೆ. ಆಸ್ಟ್ರೇಲಿಯಾ ಪ್ರಧಾನಿ ಸ್ಕಾಟ್ ಮಾರಿಸನ್ ಮತ್ತು ಪೋಲೆಂಡ್ನ ಪ್ರಧಾನಿ ಮಾಟ್ಯೂಸ್ ಮೊರಾವಿಕಿ ಹಾಗೂ ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಹೇಳಿಕೆ ನಂತರ, ಪ್ರಧಾನಿಯವರು ಹೇಳಿಕೆ ನೀಡಲಿದ್ದಾರೆ.
‘ಗ್ಲಾಸ್ಗೊದಲ್ಲಿ ಬಂದಿಳಿದ್ದೇನೆ. ಸಿಒಪಿ26 ಶೃಂಗಸಭೆಗೆ ಹೋಗುತ್ತಿದ್ದೇನೆ. ಅಲ್ಲಿ ಹವಾಮಾನ ಬದಲಾವಣೆ ನಿಯಂತ್ರಿಸಲು ಮತ್ತು ಈ ನಿಟ್ಟಿನಲ್ಲಿ ಭಾರತ ಕೈಗೊಂಡಿರುವ ಪ್ರಯತ್ನಗಳನ್ನು ತಿಳಿಸಲು ಹಾಗೂ ಈ ಕುರಿತು ಇತರ ವಿಶ್ವ ನಾಯಕರೊಂದಿಗೆ ಕೆಲಸ ಮಾಡಲು ನಾನು ಎದುರು ನೋಡುತ್ತಿದ್ದೇನೆ‘ ಎಂದು ಮೋದಿ ಅವರು ಭಾನುವಾರ ರಾತ್ರಿ ಟ್ವೀಟ್ ಮಾಡಿದ್ದಾರೆ.
ಗ್ಲಾಸ್ಗೊದಲ್ಲಿ ಹೋಟೆಲ್ಗೆ ಆಗಮಿಸಿದ ಮೋದಿ ಅವರನ್ನು ಸ್ಕಾಟಿಷ್ನಲ್ಲಿರುವ ಭಾರತೀಯ ಮೂಲದ ಪ್ರತಿನಿಧಿಗಳ ದೊಡ್ಡ ಗುಂಪೊಂದು ‘ಭಾರತ್ ಮಾತಾ ಕಿ ಜೈ‘ ಎಂದು ಘೋಷಣೆ ಕೂಗುವ ಮೂಲಕ ಸ್ವಾಗತಿಸಿತು.
ಸೋಮವಾರ ಬೆಳಿಗ್ಗೆ ಮೋದಿಯವರು ಎಡಿನ್ಬರ್ಗ್ ಮತ್ತು ಗ್ಲಾಸ್ಗೊದಲ್ಲಿರುವ ಭಾರತೀಯ ಮೂಲದ 45 ಪ್ರತಿನಿಧಿಗಳೊಂದಿಗೆ ಸಭೆ ನಡೆಸಲಿದ್ದಾರೆ. ಈ ಸಭೆಯಲ್ಲಿ ಪ್ರಮುಖ ಶಿಕ್ಷಣ ತಜ್ಞರು, ಉದ್ದಿಮೆದಾರರು ಇದ್ದಾರೆ.
ಇದೇ ವೇಳೆ ಅವರು, ದೆಹಲಿ ಮೂಲದ ಮರುಬಳಕೆ ಕಂಪನಿ ‘ತಕಚಾರ್‘ ಸಂಸ್ಥಾಪಕ ವಿದ್ಯುತ್ ಮೋಹನ್ ಮತ್ತು ಸೌರಶಕ್ತಿ ಚಾಲಿತ ಕಬ್ಬಿಣದ ಬಂಡಿಯನ್ನು ಆವಿಷ್ಕರಿಸಿರುವ ತಮಿಳುನಾಡು ಮೂಲದ ವಿನಿಷಾ ಉಮಾಶಂಕರ್ ಅವರನ್ನು ಭೇಟಿಯಾಗಲಿದ್ದಾರೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.