ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉಕ್ರೇನ್‌ನ ಶಸ್ತ್ರಾಸ್ತ್ರ ಸಂಗ್ರಹಾಗಾರ ನಾಶಕ್ಕೆ ಬ್ರಹ್ಮಾಸ್ತ್ರ ಬಳಸಿದ ರಷ್ಯಾ!

ಇದೇ ಮೊದಲು: ಹೈಪರ್‌ಸಾನಿಕ್ ಕ್ಷಿಪಣಿ ಬಳಕೆ
Last Updated 19 ಮಾರ್ಚ್ 2022, 20:25 IST
ಅಕ್ಷರ ಗಾತ್ರ

ಲಂಡನ್‌, ಮಾಸ್ಕೊ: ಉಕ್ರೇನ್‌ ಅನ್ನು ಶತಾಯಗತಾಯ ಆಕ್ರಮಿಸಿಕೊಳ್ಳಲೇಬೇಕೆಂದು ಜಿದ್ದಿಗೆ ಬಿದ್ದಿರುವ ರಷ್ಯಾ, ಉಕ್ರೇನ್‌ ನೆಲದಲ್ಲಿ ನಡೆಸುತ್ತಿರುವ ವಿಶೇಷ ಮಿಲಿಟರಿ ಕಾರ್ಯಾಚರಣೆ ಶನಿವಾರ 24ನೇ ದಿನಕ್ಕೆ ಕಾಲಿಟ್ಟಿದೆ. ರಷ್ಯಾ ತನ್ನ ಬತ್ತಳಿಕೆಯಲ್ಲಿರುವ ಅತ್ಯಾಧುನಿಕ ‘ಕಿಂಜಾಲ್‌’ ಹೈಪರ್‌ಸಾನಿಕ್‌ ಕ್ಷಿಪಣಿಯನ್ನುಇದೇ ಮೊದಲ ಬಾರಿಗೆ ಉಕ್ರೇನ್‌ ಮೇಲೆ ಶುಕ್ರವಾರ ರಾತ್ರಿ ಪ್ರಯೋಗಿಸಿದೆ.

ಉಕ್ರೇನ್‌ನ ಇವಾನೋ-ಫ್ರಾಂಕಿವ್‌ಸ್ಕ್‌ ಪ್ರದೇಶದ ಡೆಲ್ಯಾಟಿನ್‌ ಗ್ರಾಮದಲ್ಲಿ ನೆಲಮಾಳಿಗೆ ಗೋದಾಮಿನಲ್ಲಿ ಉಕ್ರೇನ್‌ ಸೇನೆ ಭಾರಿ ಪ್ರಮಾಣದಲ್ಲಿ ಸಂಗ್ರಹಿಸಿಟ್ಟಿದ್ದಕ್ಷಿಪಣಿಗಳು ಮತ್ತು ವಾಯುದಾಳಿಯ ಶಸ್ತ್ರಾಸ್ತ್ರಗಳನ್ನು ವಾಯು ಖಂಡಾಂತರ ಕಿಂಜಾಲ್‌ ಕ್ಷಿಪಣಿಯು ಧ್ವಂಸಗೊಳಿಸಿದೆ ಎಂದು ರಷ್ಯಾದ ರಕ್ಷಣಾ ಸಚಿವಾಲಯ ಹೇಳಿದೆ. ಈ ಕ್ಷಿಪಣಿ ಮಾಡಿರುವ ಹಾನಿಯ ಅಂದಾಜು, ಸಾವು–ನೋವಿನ ಲೆಕ್ಕ ಸದ್ಯಕ್ಕೆ ಸಿಕ್ಕಿಲ್ಲ.

ನ್ಯಾಟೊ ಸದಸ್ಯ ರಾಷ್ಟ್ರ ರೊಮೇನಿಯಾದ ಜತೆಗೆ ಇವಾನೋ-ಫ್ರಾಂಕಿವ್‌ಸ್ಕ್‌ ಪ್ರದೇಶ 50 ಕಿ.ಮೀ ಉದ್ದಕ್ಕೂ ಗಡಿ ಹಂಚಿಕೊಂಡಿದೆ. ಈ ಪ್ರದೇಶದ ಹೊರವಲಯದ ಪರ್ವತಗಳ ತಪ್ಪಲಿನ ಡೆಲ್ಯಾಟಿನ್‌ ಹಳ್ಳಿಯಲ್ಲಿ ಉಕ್ರೇನ್‌ನ ಶಸ್ತ್ರಾಗಾರವಿತ್ತು.

ರಷ್ಯಾದ ಪಡೆಗಳು ಶನಿವಾರ ಬಾಸ್ಟನ್ ಕರಾವಳಿ ಕ್ಷಿಪಣಿ ವ್ಯವಸ್ಥೆ ಬಳಸಿಕೊಂಡು, ಉಕ್ರೇನ್‌ ಬಂದರು ನಗರ ಒಡೆಸಾ ಬಳಿಯ ಮಿಲಿಟರಿ ರೇಡಿಯೊ ಮತ್ತು ವಿಚಕ್ಷಣ ಕೇಂದ್ರಗಳನ್ನೂ ಧ್ವಂಸಗೊಳಿಸಿವೆ. ರಷ್ಯಾ ಪಡೆಗಳು ಆಯಕಟ್ಟಿನ ದಕ್ಷಿಣ ಬಂದರು ನಗರ ಮರಿಯುಪೋಲ್ ಪ್ರವೇಶಿಸಲು ಉಕ್ರೇನ್‌ನ ರಕ್ಷಣಾ ಕೋಟೆಯನ್ನು ನಾಶಪಡಿಸಿದೆ ಎಂದು ರಷ್ಯಾದ ರಕ್ಷಣಾ ಸಚಿವಾಲಯದ ವಕ್ತಾರ ಐಗೋರ್‌ ಕೊನಾಶೆಂಕೋವ್ ತಿಳಿಸಿದರು‌.

‘ಶತ್ರುಗಳು ನಮ್ಮ ಶಸ್ತ್ರಾಗಾರಗಳನ್ನು ಗುರಿಯಾಗಿಸಿಕೊಂಡಿದ್ದಾರೆ. ಆದರೆ, ಯಾವ ಪ್ರಕಾರದಕ್ಷಿಪಣಿಯಿಂದ ದಾಳಿ ನಡೆದಿದೆ ಎನ್ನುವ ಮಾಹಿತಿ ಇಲ್ಲ. ಯುದ್ಧಸಾಮಗ್ರಿಗಳು ಸ್ಫೋಟಗೊಂಡಿದ್ದು, ಶಸ್ತ್ರಾಗಾರ ನಾಶವಾಗಿದೆ. ರಷ್ಯಾ ತನ್ನ ಎಲ್ಲ ಕ್ಷಿಪಣಿಗಳನ್ನು ನಮ್ಮ ವಿರುದ್ಧ ಬಳಸುತ್ತಿದೆ’ ಎಂದು ಉಕ್ರೇನ್‌ ವಾಯುಪಡೆಯ ವಕ್ತಾರ ಯುರಿ ಇಗ್ನಾಟ್‌ ತಿಳಿಸಿದರು.

ರಷ್ಯಾ ದೊಡ್ಡ ಬೆಲೆ ತೆರಲಿದೆ: ಝೆಲೆನ್‌ಸ್ಕಿ ಎಚ್ಚರಿಕೆ
ಕೀವ್:ಉಕ್ರೇನ್ ವಿರುದ್ಧದ ಸಂಘರ್ಷಕ್ಕಾಗಿ ರಷ್ಯಾ ದೊಡ್ಡ ಬೆಲೆ ತೆರಲಿದೆ ಎಂದು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್‌ ಝೆಲೆನ್‌ಸ್ಕಿ ಎಚ್ಚರಿಸಿದ್ದಾರೆ.

ರಾಷ್ಟ್ರ ಉದ್ದೇಶಿಸಿ ಮಾತನಾಡಿದ ಝೆಲೆನ್‌ಸ್ಕಿ, ಕಳೆದ 25 ವರ್ಷಗಳಲ್ಲಿ ರಷ್ಯಾ ಸಾಧಿಸಿದ ಎಲ್ಲವನ್ನೂ ಅವರು ಕಳೆದುಕೊಳ್ಳುತ್ತಾರೆ ಎಂದು ಹೇಳಿದ್ದಾರೆ.

‘ರಷ್ಯಾ ಉಗಮವಾದ 90ರ ದಶಕದ ದುರಂತಕ್ಕೆ ಮರಳಲಿದೆ. ಇದು ರಷ್ಯಾದ ಪತನ, ನೋವಿನ ಪತನ. ಅದನ್ನು ಅವರು ಅನುಭವಿಸುತ್ತಾರೆ’ ಎಂದು ಹೇಳಿದ್ದಾರೆ.

ಈ ನಡುವೆ ‘ರಷ್ಯಾದೊಂದಿಗಿನ ಮಾತುಕತೆಯಲ್ಲಿ ಉಕ್ರೇನ್ ನಿಲುವಿನಲ್ಲಿ ಯಾವುದೇ ಬದಲಾವಣೆಯಿಲ್ಲ’ ಎಂದು ಅಧ್ಯಕ್ಷರ ಕಚೇರಿಯ ಸಲಹೆಗಾರ ವೈಖೈಲೊ ಪೊಡೊಲ್ಯಾಕ್ ಹೇಳಿದ್ದಾರೆ.

ಶಾಂತಿಮಾತುಕತೆಗೆ ಆಹ್ವಾನ: ರಷ್ಯಾದ ಕಿಂಜಾಲ್‌ ಕ್ಷಿಪಣಿ ದಾಳಿಯ ಬೆನ್ನಲ್ಲೇ ಉಕ್ರೇನ್‌ ಅಧ್ಯಕ್ಷ ವೊಲೊಡಿಮಿರ್‌ ಝೆಲೆನ್‌ಸ್ಕಿ, ಯುದ್ಧ ನಿಲ್ಲಿಸಿ, ಶಾಂತಿ ಮಾತುಕತೆಗೆ ಬರುವಂತೆ ರಷ್ಯಾ ಅಧ್ಯಕ್ಷ ವ್ಲಾಡಿಮಿರ್‌ ಪುಟಿನ್‌ ಅವರನ್ನು ಶನಿವಾರ ಒತ್ತಾಯಿಸಿದರು.

‘ಇದು ಮಾತುಕತೆಗೆ ಸಮಯ. ರಷ್ಯಾದ ಯುದ್ಧಕೋರರು ನಡೆಸುತ್ತಿರುವ ಆಕ್ರಮಣವನ್ನು ತಕ್ಷಣ ಕೊನೆಗೊಳಿಸಬೇಕು’ ಎಂದು ಅವರು ಒತ್ತಾಯಿಸಿದರು. ‘ಉಕ್ರೇನ್‌ನ ಪ್ರಾದೇಶಿಕ ಸಮಗ್ರತೆ ಮತ್ತು ಸೊಬಗನ್ನು ಪುನರುಜ್ಜೀವನಗೊಳಿಸಲು ಪರಸ್ಪರ ಭೇಟಿಯಾಗುವ, ಮಾತುಕತೆ ನಡೆಸುವ ಸಮಯವಿದು. ಇಲ್ಲದಿದ್ದರೆ, ರಷ್ಯಾಕ್ಕೆ ಆಗುವ ಹಾನಿಯನ್ನು ಹಲವು ತಲೆಮಾರುಗಳು ಕಳೆದರೂ ಸರಿಪಡಿಸಲು ಸಾಧ್ಯವಾಗದು’ ಎಂದು ಝೆಲೆನ್‌ಸ್ಕಿ ಫೇಸ್‌ಬುಕ್‌ ಮೂಲಕ ಎಚ್ಚರಿಕೆ ಕೊಟ್ಟಿದ್ದಾರೆ.

ಏನಿದು ಕಿಂಜಾಲ್‌ ಕ್ಷಿಪಣಿ?
ಶಬ್ದಕ್ಕಿಂತ 10 ಪಟ್ಟು ವೇಗವಾಗಿ ಚಲಿಸುವ ಖಂಡಾಂತರ ‘ಕಿಂಜಾಲ್‌’ ಕ್ಷಿಪಣಿಯನ್ನು ರಷ್ಯಾ ತನ್ನ ಬತ್ತಳಿಕೆಯ ಬ್ರಹ್ಮಾಸ್ತ್ರವೆಂದೇ ಪರಿಗಣಿಸಿದೆ.ವಾಯು ರಕ್ಷಣಾ ವ್ಯವಸ್ಥೆಗಳನ್ನು ಭೇದಿಸಿ ದಾಳಿ ನಡೆಸುವ ಸಾಮರ್ಥ್ಯ ಇದಕ್ಕಿದೆ. ಈ ಕ್ಷಿಪಣಿಯನ್ನು ಮೊದಲ ಬಾರಿಗೆ ಯುದ್ಧಭೂಮಿಯಲ್ಲಿ ಬಳಸಲಾಗಿದೆ ಎಂದುರಷ್ಯಾ ಹೇಳಿರುವುದಾಗಿ ಅಲ್ಲಿನ ಸರ್ಕಾರಿ ಸುದ್ದಿ ಸಂಸ್ಥೆ ‘ರಿಯಾ ನೊವೊಸ್ಟಿ’ ಮಾಡಿದೆ.

2018ರಲ್ಲಿ ಕಿಂಜಾಲ್‌ ಹೈಪರ್‌ಸಾನಿಕ್ ಕ್ಷಿಪಣಿಯನ್ನು ವ್ಲಾಡಿಮಿರ್‌ ಪುಟಿನ್ ಅನಾವರಣಗೊಳಿಸಿದ್ದರು. ಆಗರಾಷ್ಟ್ರ ಉದ್ದೇಶಿಸಿ ಭಾಷಣ ಮಾಡಿದ್ದ ಅವರು ‘ಹೈಪರ್‌ಸಾನಿಕ್ ಖಂಡಾಂತರ ಕ್ಷಿಪಣಿಗಳನ್ನು ಒಳಗೊಂಡ ಕಿಂಜಾಲ್ ವಾಯುಕ್ಷಿಪಣಿ ವ್ಯವಸ್ಥೆಯು ದೇಶದ ‘ಐಡಿಯಲ್ ವೆಪನ್’ ಎಂದು ಬಣ್ಣಿಸಿದ್ದರು.

‘ತನ್ನ ಸುಧಾರಿತ ಶಸ್ತ್ರಾಸ್ತ್ರಗಳ ಬಗ್ಗೆ ರಷ್ಯಾ ಹೆಮ್ಮೆಪಡುತ್ತದೆ. ಹೈಪರ್‌ ಸಾನಿಕ್‌ಕ್ಷಿಪಣಿಗಳಲ್ಲಿ ರಷ್ಯಾ ಜಾಗತಿಕ ನಾಯಕ ಆಗಿದೆ. ಈ ಕ್ಷಿಪಣಿಯ ವೇಗ, ಚಾಕಚಕ್ಯತೆಯನ್ನೂ ಊಹಿಸಲು ಅಸಾಧ್ಯ. ಈ ಕ್ಷಿಪಣಿಯನ್ನು ಶತ್ರುಗಳಿಗೆ ಪತ್ತೆಹಚ್ಚಲು ಮತ್ತು ಪ್ರತಿಬಂಧಿಸಲು ಕಷ್ಟ’ ಎಂದು ಅವರು ವರ್ಣಿಸಿದ್ದರು.

ಫೆ.24ರಂದು ಉಕ್ರೇನ್‌ ಮೇಲೆ ವಿಶೇಷ ಮಿಲಿಟರಿ ಕಾರ್ಯಾಚರಣೆಗೆ ರಷ್ಯಾ ಸೇನಾಪಡೆಗಳನ್ನು ಕಳುಹಿಸಿದ ನಂತರ, ಹೈಪರ್‌ಸಾನಿಕ್ ಕಿಂಜಾಲ್ ಕ್ಷಿಪಣಿ ವ್ಯವಸ್ಥೆ ನಿಯೋಜಿಸಿರುವುದು ಇದೇ ಮೊದಲು ಎಂದು ರಷ್ಯಾದ ‘ಇಂಟರ್‌ಫ್ಯಾಕ್ಸ್’ ಸುದ್ದಿ ಸಂಸ್ಥೆ ಕೂಡ ಹೇಳಿದೆ.

ಶೆಲ್‌ ದಾಳಿ: 9 ಮಂದಿ ಸಾವು
ಲುವಿವ್‌:ದಕ್ಷಿಣ ಉಕ್ರೇನ್‌ನ ಝಪೊರಿಝಿಯಾ ನಗರದ ಉಪನಗರಗಳ ಮೇಲೆ ಶುಕ್ರವಾರ ರಾತ್ರಿ ರಷ್ಯಾ ಪಡೆಗಳು ನಡೆಸಿರುವ ಶೆಲ್ ದಾಳಿಯಲ್ಲಿ ಒಂಬತ್ತು ಜನರು ಸಾವನ್ನಪ್ಪಿದ್ದಾರೆ. 17 ಜನರುಗಾಯಗೊಂಡಿದ್ದಾರೆ ಎಂದು ನಗರದ ಉಪ ಮೇಯರ್ ಅನಾಟೊಲಿ ಕುರ್ಟೀವ್ ಶನಿವಾರ ತಿಳಿಸಿದ್ದಾರೆ.

ಝಪೊರಿಝಿಯಾದಲ್ಲಿ 38 ಗಂಟೆಗಳ ಕರ್ಫ್ಯೂ ಘೋಷಿಸಲಾಗಿದೆ.ರಷ್ಯಾದ ಪಡೆಗಳು ಫಿರಂಗಿ, ಟ್ಯಾಂಕ್‌ಗಳು, ಹೆಲಿಕಾಪ್ಟರ್‌ಗಳು ಮತ್ತು ರಾಕೆಟ್‌ಗಳಿಂದ ದಾಳಿ ಮಾಡುತ್ತಿವೆ ಎಂದು ಕುರ್ತೀವ್ ತಿಳಿಸಿದ್ದಾರೆ.

12ಕ್ಕೂ ಹೆಚ್ಚು ಯೋಧರ ಸಾವು: ರಷ್ಯಾದ ಪಡೆಗಳು ಶುಕ್ರವಾರ ಮೈಕೊಲೈವ್‌ ನಗರದಲ್ಲಿ ಸೇನಾ ಬ್ರಿಗೇಡ್ ಪ್ರಧಾನ ಕಚೇರಿಯ ಮೇಲೆ ವೈಮಾನಿಕ ದಾಳಿ ನಡೆಸಿದ್ದು, 12ಕ್ಕೂ ಹೆಚ್ಚು ಯೋಧರು ಮೃತಪಟ್ಟಿದ್ದಾರೆ. ಘಟನೆಯಲ್ಲಿ ಬದುಕುಳಿದಿರುವ ಯೋಧ ಯೆವ್‌ಗೆನ್‌ ಈ ಕಚೇರಿಯಲ್ಲಿ 200 ಮಂದಿ ಇದ್ದೆವು ಎಂದಿದ್ದಾರೆ. ಬದುಕುಳಿದವರ ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ. ಸ್ಥಳದಲ್ಲಿ ನೂರಾರು ಯೋಧರ ಶವಗಳು ಬಿದ್ದಿವೆ ಎಂದು ಸೇನಾ ವಕ್ತಾರೆ ತಿಳಿಸಿದ್ದಾರೆ.

7 ಮಂದಿ ಸಾವು: ರಾಜಧಾನಿ ಕೀವ್‌ ನಗರದ ಮಕರಿವ್ ಮೇಲೆ ರಷ್ಯಾ ಪಡೆಗಳು ಶುಕ್ರವಾರ ನಡೆಸಿದ ಫಿರಂಗಿ ದಾಳಿಗೆ ಏಳು ಜನರು ಮೃತಪಟ್ಟಿದ್ದು, ಗಾಯಗೊಂಡಿರುವಐವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಸ್ಥಳೀಯ ಪೊಲೀಸರು ಶನಿವಾರ ತಿಳಿಸಿದ್ದಾರೆ. ಆದರೆ, ಇದನ್ನು ಅಲ್ಲಗಳೆದಿರುವ ರಷ್ಯಾ, ನಾಗರಿಕರ ಮೇಲೆ ದಾಳಿ ನಡೆಸಿಲ್ಲ ಎಂದಿದೆ.

ಯುರೋಪಿನ ಅತಿ ದೊಡ್ಡಉಕ್ಕಿನ ಸ್ಥಾವರ ನಾಶ: ಮರಿಯುಪೋಲ್‌ಗೆ ಮುತ್ತಿಗೆ ಹಾಕಿರುವ ರಷ್ಯಾ ಪಡೆಗಳುಯುರೋಪಿನ ಅತಿದೊಡ್ಡ ಉಕ್ಕಿನ ಸ್ಥಾವರ ‘ಅಜೋವ್‌ಸ್ಟಾಲ್‌’ ಮೇಲೆ ನಿಯಂತ್ರಣಕ್ಕೆ ತೆಗೆದುಕೊಳ್ಳಲು ಉಕ್ರೇನ್ ಪಡೆಗಳೊಂದಿಗೆ ಭೀಕರ ಕಾಳಗ ನಡೆಸಿದ್ದು, ಉಕ್ಕಿನ ಸ್ಥಾವರವನ್ನು ನಾಶಪಡಿಸಿವೆ.

24ನೇ ದಿನದ ಬೆಳವಣಿಗೆಗಳು
* ಕ್ರಿಮಿಯಾ ಸಮೀಪದ ಕೆರ್ಸಾನ್‌ ಹೊರವಲಯದಲ್ಲಿ ರಷ್ಯಾದ ಲೆಫ್ಟಿನೆಂಟ್‌ ಜನರಲ್‌ ಆಂಡ್ರೈ ಮೊರ್ಡ್‌ವಿಕೆವ್‌ಹತ್ಯೆ. ಈವರೆಗೆ ಉಕ್ರೇನ್‌ ಸೈನಿಕರಿಂದ ಹತರಾದ ರಷ್ಯಾದಉನ್ನತ ಸೇನಾಧಿಕಾರಿಗಳಲ್ಲಿ ಇವರು ಐದನೇಯವರು ಎಂದು ಉಕ್ರೇನ್‌ ಹೇಳಿದೆ
* ಕೀವ್‌ನ ಪೂರ್ವಕ್ಕೆ ಸುಮಾರು 30 ಕಿಲೋಮೀಟರ್‌ವರೆಗೂ ಉಕ್ರೇನ್‌ ಸೈನಿಕರು ತೋರುತ್ತಿರುವ ತೀವ್ರ ಪ್ರತಿರೋಧದಿಂದ ರಷ್ಯಾ ಪಡೆಗಳ ಆಕ್ರಮಣ ಸ್ಥಗಿತಗೊಂಡಿದೆ– ಅಮೆರಿಕದ ಅಧಿಕಾರಿಯೊಬ್ಬರ ಹೇಳಿಕೆ
* ರಷ್ಯಾವು ತನ್ನ ಮುಂಚೂಣಿ ಪಡೆಗಳಿಗೆ ಆಹಾರ ಮತ್ತು ಇಂಧನ ಒದಗಿಸಲುಹೆಣಗಾಡುತ್ತಿದೆ. ಆಹಾರ–ಇಂಧನ ಪೂರೈಕೆ ಮಾರ್ಗಗಳ ಮೇಲೆ ಉಕ್ರೇನ್‌ ನಿರಂತರ ದಾಳಿ ನಡೆಸುತ್ತಿದೆ – ಬ್ರಿಟನ್‌ ರಕ್ಷಣಾ ಸಚಿವಾಲಯದ ಹೇಳಿಕೆ
*ರಷ್ಯಾದ ಕ್ಷಿಪಣಿ ದಾಳಿಗೆ ಧ್ವಂಸಗೊಂಡಿರುವ ಮರಿಯುಪೋಲ್‌ ರಂಗಮಂದಿರದ ಅವಶೇಷಗಡಿ ಸಿಲುಕಿರುವ ನಾಗರಿಕರ ರಕ್ಷಣಾ ಕಾರ್ಯಾಚರಣೆ ಮುಂದುವರಿದಿದೆ. ರಂಗಮಂದಿರದ ನೆಲಮಹಡಿಯಲ್ಲಿ ಮಕ್ಕಳು, ಮಹಿಳೆಯರು ಸೇರಿ ಸಾವಿರಕ್ಕೂ ಹೆಚ್ಚು ಜನರು ಆಶ್ರಯ ಪಡೆದಿದ್ದರು. ಈವರೆಗೆ 130 ಮಂದಿಯನ್ನಷ್ಟೇ ರಕ್ಷಿಸಲಾಗಿದೆ
*ಮರಿಯುಪೋಲ್‌ ನಗರದ ರಸ್ತೆಗಳು ನಾಗರಿಕರ ಶವಗಳಿಂದ ತುಂಬಿಹೋಗಿವೆ– ಸ್ಥಳೀಯ ನಿವಾಸಿ ತಾಮರ ಕಾವುನೆಂಕಾ ಹೇಳಿಕೆ
*ರಷ್ಯಾ ಆಕ್ರಮಣದಿಂದಾಗಿ ಉಕ್ರೇನ್‌ನಲ್ಲಿ ಈವರೆಗೆ 112 ಮಕ್ಕಳು ಮೃತಪಟ್ಟಿದ್ದಾರೆ. 140ಕ್ಕೂ ಹೆಚ್ಚು ಮಕ್ಕಳು ಗಾಯಗೊಂಡಿದ್ದಾರೆ–ಉಕ್ರೇನ್‌ ಪ್ರಾಸಿಕ್ಯೂಟರ್ ಜನರಲ್ ಕಚೇರಿ ಮಾಹಿತಿ
* ಯುದ್ಧದ ಪರಿಣಾಮ ಒಂದೂವರೆ ಲಕ್ಷ ಮಕ್ಕಳು ಉಕ್ರೇನ್‌ ತೊರೆದಿದ್ದಾರೆ– ವಿಶ್ವಸಂಸ್ಥೆಯ ಮಕ್ಕಳ ಏಜೆನ್ಸಿ
*ಉಕ್ರೇನ್‌ನಲ್ಲಿ 65 ಲಕ್ಷ ಜನರು ನಿರಾಶ್ರಿತರಾಗಿದ್ದಾರೆ. ಈಗಾಗಲೇ 32 ಲಕ್ಷ ಜನರು ದೇಶ ತೊರೆದಿದ್ದಾರೆ
* ರಷ್ಯಾ ಪಡೆಗಳು ಉಕ್ರೇನ್‌ನ ಅತಿದೊಡ್ಡ ನಗರಗಳ ಸುತ್ತ ನಿರ್ಬಂಧ ವಿಧಿಸಿ,ನಾಗರಿಕರಿಗೆ ಅಗತ್ಯ ವಸ್ತುಗಳನ್ನು ಪೂರೈಕೆಯಾಗದಂತೆ ತಡೆದು ‘ಮಾನವೀಯ ದುರಂತ’ ಸೃಷ್ಟಿಸಿವೆ– ಝೆಲೆನ್‌ಸ್ಕಿ ಆರೋಪ
* ರಷ್ಯಾದ ಮಾಸ್ಕೊದಲ್ಲಿನಡೆದ ರಾಷ್ಟ್ರಭಕ್ತಿಯ ಬೃಹತ್‌ ರ್‍ಯಾಲಿಯಲ್ಲಿ ಪಾಲ್ಗೊಂಡಿದ್ದ ಅಧ್ಯಕ್ಷ ವ್ಲಾಡಿಮಿರ್‌ ಪುಟಿನ್‌, ರಷ್ಯಾದ ಮಿಲಿಟರಿಯನ್ನು ಪ್ರಶಂಸಿಸಿದರು
*ಉಕ್ರೇನ್‌ ನೆಲದಲ್ಲಿ ಸ್ಫೋಟಿಸದೆ ಬಿದ್ದಿರುವ ಬಾಂಬು, ಮದ್ದುಗುಂಡುಗಳ ನಿಷ್ಕ್ರಿಯಕ್ಕೆವರ್ಷಗಳೇ ಬೇಕು. ಇದಕ್ಕೆ ಪಾಶ್ಚಿಮಾತ್ಯ ರಾಷ್ಟ್ರಗಳ ನೆರವು ಬೇಕಿದೆ– ಉಕ್ರೇನ್ ಆಂತರಿಕ ಸಚಿವ ಡೆನಿಸ್ ಮೊನಾಸ್ಟಿಯುಸ್ಕೈ
* ಸದ್ಯದ ಪರಿಸ್ಥಿತಿಯಲ್ಲಿರಷ್ಯಾ ಮತ್ತು ಚೀನಾ ನಡುವಿನ ಸಹಕಾರ ಬಲಗೊಳ್ಳಲಿದೆ.ಪಾಶ್ಚಿಮಾತ್ಯರು ಅಂತರರಾಷ್ಟ್ರೀಯ ವ್ಯವಸ್ಥೆ ಆಧರಿಸಿದ ಎಲ್ಲ ಅಡಿಪಾಯಗಳನ್ನು ನಿರ್ಲಜ್ಜವಾಗಿ ಹಾಳುಮಾಡುತ್ತಿರುವ ಸಮಯದಲ್ಲಿ ಚೀನಾ– ರಷ್ಯಾ ಎರಡು ಮಹಾನ್ ಶಕ್ತಿಗಳಾಗಿ ಈ ವಿಶ್ವದಲ್ಲಿ ಯಾವ ರೀತಿಯ ಹೆಜ್ಜೆ ಇಡಬೇಕೆಂಬುದರ ಬಗ್ಗೆ ಯೋಚಿಸಬೇಕಿದೆ ಎಂದು ರಷ್ಯಾ ವಿದೇಶಾಂಗ ಸಚಿವ ಸರ್ಗೈ ಲಾವ್ರೊವ್ ಹೇಳಿರುವುದಾಗಿ ‘ಇಂಟರ್‌ ಫಾಕ್ಸ್‌’ ಸುದ್ದಿ ಸಂಸ್ಥೆ ವರದಿ ಮಾಡಿದೆ
*ಲುಹಾನ್‌ಸ್ಕ್‌, ಕೀವ್‌, ಮರಿಯುಪೋಲ್‌ ನಗರ ಸೇರಿದಂತೆ ಪ್ರಮುಖ ನಗರಗಳಲ್ಲಿ 10 ಮಾನವೀಯ ಕಾರಿಡಾರ್‌ ತೆರೆಯಲು ರಷ್ಯಾ ಮತ್ತು ಉಕ್ರೇನ್‌ ಸಮ್ಮತಿ. ರಷ್ಯಾ ಪಡೆಗಳ ನಿಯಂತ್ರಣದಲ್ಲಿರುವ ಕೆರ್ಸಾನ್‌ನಲ್ಲಿ ಮಾನವೀಯ ನೆರವು ಕಲ್ಪಿಸುವ ಯೋಜನೆ ಪ್ರಕಟಿಸಿದ ಉಕ್ರೇನ್‌ ಉಪ ಪ್ರಧಾನಿ ಇರೆನಾ ವೆರೆಸ್‌ಚುಕ್‌
*ಬಾಲ್ಟಿಕ್ ದೇಶಗಳಾದ ಎಸ್ಟೋನಿಯಾ, ಲಾಟ್ವಿಯಾ ಮತ್ತು ಲಿಥುವೇನಿಯಾ, ಉಕ್ರೇನ್ ಮೇಲಿನ ಆಕ್ರಮಣ ಖಂಡಿಸಿರಷ್ಯಾದ 10 ರಾಜತಾಂತ್ರಿಕರನ್ನು ಹೊರಹಾಕುವುದಾಗಿ ಘೋಷಿಸಿವೆ
* ಮರಿಯುಪೋಲ್, ಮೈಕೊಲೈವ್ ಮತ್ತು ಕೆರ್ಸಾನ್ ಮತ್ತು ಇಝಿಯುಮ್‌ನಲ್ಲಿ ರಷ್ಯಾದ ಪಡೆಗಳು ಆಕ್ರಮಣಕಾರಿ ದಾಳಿ ನಡೆಸುತ್ತಿವೆ–ಅಧ್ಯಕ್ಷರ ಸಲಹೆಗಾರ ಒಲೆಕ್ಸಿ ಅರೆಸ್ಟೋವಿಚ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT