ಕೊಲಂಬೊ: ಶ್ರೀಲಂಕಾ ಅಧ್ಯಕ್ಷ ಗೊಟಬಯ ರಾಜಪಕ್ಸ ಅವರಿಗೆ ಇರುವ ಅನಿರ್ಬಂಧಿತ ಅಧಿಕಾರವನ್ನು ಮೊಟಕುಗೊಳಿಸಲು ಅವಕಾಶ ನೀಡುವ, ಸಂವಿಧಾನದ 21ನೇ ತಿದ್ದುಪಡಿಗೆ ಅನುಮೋದನೆ ಪಡೆಯಲುಸಂಪುಟಕ್ಕೆ ಶಿಫಾರಸು ಮಾಡುವಲ್ಲಿ ಪ್ರಧಾನಿ ರಾನಿಲ್ ವಿಕ್ರಮಸಿಂಘೆ ವಿಫಲರಾಗಿದ್ದಾರೆ.
ವಿವಾದಿತ ತಿದ್ದುಪಡಿ ಪ್ರಸ್ತಾವನೆಯನ್ನು ಸೋಮವಾರ ಸಂಪುಟದಲ್ಲಿ ಮಂಡಿಸಲು ನಿರ್ಧರಿಸಲಾಗಿತ್ತು. ಆದರೆಆಡಳಿತಾರೂಢ ಶ್ರೀಲಂಕಾ ಪೊದುಜನ ಪೆರಮುನ (ಎಸ್ಎಲ್ಪಿಪಿ) ಪಕ್ಷದ ಸಂಸದರು ವಿರೋಧ ವ್ಯಕ್ತಪಡಿಸಿದರು. ಸಂಪುಟಕ್ಕೆ ಶಿಫಾರಸು ಮಾಡುವ ಮೊದಲು ಅಟಾರ್ನಿ ಜನರಲ್ ಅನುಮೋದನೆ ಪಡೆಯಬೇಕೆಂದು ಪಟ್ಟು ಹಿಡಿದರು. ಹೀಗಾಗಿ ತಿದ್ದುಪಡಿಯನ್ನು ಸಂಪುಟದ ಶಿಫಾರಸಿಗೆ ಕಳುಹಿಸಿಲ್ಲ ಎಂದು ಮೂಲಗಳು ತಿಳಿಸಿವೆ.
ನಿರ್ಬಂಧ ವಿಸ್ತರಣೆ: ಶ್ರೀಲಂಕಾ ಸೆಂಟ್ರಲ್ ಬ್ಯಾಂಕ್ನ ಮಾಜಿ ಗವರ್ನರ್ ಅಜಿತ್ ನಿವಾರ್ಡ್ ಕಬ್ರಾಲ್ ಅವರು ವಿದೇಶಕ್ಕೆ ಪ್ರಯಾಣಿಸದಂತೆ ಹೇರಿರುವ ನಿರ್ಬಂಧವನ್ನು ಸ್ಥಳೀಯ ನ್ಯಾಯಾಲಯ ಮತ್ತೆ ಜುಲೈ 25ರ ವರೆಗೆ ವಿಸ್ತರಿಸಿದೆ.
ಕಳೆದ ಏಪ್ರಿಲ್ 7ರಂದು ಮೊದಲ ಬಾರಿಗೆ ಕಬ್ರಾಲ್ ಅವರು ವಿದೇಶಕ್ಕೆ ಪ್ರಯಾಣಿಸದಂತೆ ನಿರ್ಬಂಧ ವಿಧಿಸಲಾಗಿತ್ತು. ಏಪ್ರಿಲ್ 18ರಂದು ಮತ್ತೆ ಅದನ್ನು ವಿಸ್ತರಿಸಲಾಗಿತ್ತು.
ಶ್ರೀಲಂಕಾ ಸೆಂಟ್ರಲ್ ಬ್ಯಾಂಕ್ ಗವರ್ನರ್ ಆಗಿದ್ದ ಸಂದರ್ಭದಲ್ಲಿ ಹಣವನ್ನು ದುರುಪಯೋಗಪಡಿಸಿಕೊಂಡಿದ್ದಾರೆ ಎಂಬ ಆರೋಪ ಕಬ್ರಾಲ್ ಅವರ ಮೇಲಿದೆ.