ಕೊಲಂಬೊ: ತೀವ್ರ ಆರ್ಥಿಕ ಸಂಕಷ್ಟ ನಡುವೆ ಶ್ರೀಲಂಕಾ ಅಧ್ಯಕ್ಷ ರಾನಿಲ್ ವಿಕ್ರಮಸಿಂಘೆ ಅವರು 37 ರಾಜ್ಯ ಸಚಿವರೊಂದಿಗೆ ಸಚಿವಸಂಪುಟವಿಸ್ತರಣೆ ಮಾಡಿರುವುದಕ್ಕೆ ವಿರೋಧ ಪಕ್ಷಗಳ ಟೀಕೆಗೆ ಗುರಿಯಾಗಿದ್ದಾರೆ. ಈಗ ಮತ್ತೆ 12 ಸಂಪುಟ ಸಚಿವರನ್ನು ಶೀಘ್ರದಲ್ಲೇ ನೇಮಿಸುವ ಕುರಿತು ಚರ್ಚೆ ನಡೆಯುತ್ತಿದೆ.
ವಿಕ್ರಮಸಿಂಘೆ ಗುರುವಾರ ನೇಮಕ ಮಾಡಿರುವ 37 ಕಿರಿಯ ಸಚಿವರ ಪೈಕಿ ಆಡಳಿತಾರೂಢ ಶ್ರೀಲಂಕಾ ಪೊದುಜನ ಪೆರಮುನಾ (ಎಸ್ಎಲ್ಪಿಪಿ) ಮತ್ತು ಶ್ರೀಲಂಕಾ ಫ್ರೀಡಂ ಪಾರ್ಟಿಯನ್ನು (ಎಸ್ಎಲ್ಎಫ್ಪಿ) ಹೆಚ್ಚು ಮಂದಿ ಪ್ರತಿನಿಧಿಸುತ್ತಾರೆ.
20 ಸದಸ್ಯರ ಸಂಪುಟಕ್ಕೆ ಹೆಚ್ಚುವರಿಯಾಗಿ 37 ಹೊಸ ಹುದ್ದೆ ಸೇರ್ಪಡೆಯಾಗಿದೆ. ಅಧ್ಯಕ್ಷರ ಕ್ರಮವನ್ನು ಪ್ರತಿಪಕ್ಷಗಳು ತೀವ್ರವಾಗಿ ಖಂಡಿಸಿವೆ. ಇತ್ತೀಚಿನ ತೆರಿಗೆ ಹೆಚ್ಚಳ ಜನರಿಗೆ ಹೊರೆಯಾಗಿದೆ ಎಂದು ಟೀಕಿಸಿವೆ.
‘ಬೆಲೆ ಏರಿಕೆಯಿಂದ ಜೀವನ ನಿರ್ವಹಣೆ ಕಷ್ಟ. ಜನರ ನೋವನ್ನು ಸರ್ಕಾರ ಪರಿಗಣಿಸುವುದಿಲ್ಲ’ ಎಂದು ಪ್ರಮುಖ ವಿರೋಧ ಪಕ್ಷ ಎಸ್ಜೆಬಿ ನಾಯಕ ಸಜಿತ್ ಪ್ರೇಮದಾಸ ಹೇಳಿದರು.
ಹೊಸ ರಾಜ್ಯ ಸಚಿವರು ಯಾವುದೇ ಸವಲತ್ತುಗಳಿಲ್ಲದೆ ಕೆಲಸ ಮಾಡುತ್ತಿರುವುದರಿಂದ ದೇಶಕ್ಕೆ ಹೊರೆಯಾಗುವುದಿಲ್ಲ ಎಂದು ನಗರಾಭಿವೃದ್ಧಿ ಮತ್ತು ವಸತಿ ಸಚಿವ ಪ್ರಸನ್ನ ರಣತುಂಗ ಹೇಳಿದ್ದಾರೆ.
ದೇಶದಲ್ಲಿ ಸಾಮಾನ್ಯ ಜನರು ಎದುರಿಸುತ್ತಿರುವ ಸಂಕಷ್ಟ ಗಮನದಲ್ಲಿಟ್ಟುಕೊಂಡು ವೆಚ್ಚ ಕಡಿಮೆ ಮಾಡುವಂತೆ ರಾಜ್ಯ ಸಚಿವರಿಗೆ ಕಟ್ಟುನಿಟ್ಟಾಗಿ ತಿಳಿಸಲಾಗಿದೆ ಎಂದು ವಿಕ್ರಮಸಿಂಘೆ ಅವರ ಕಚೇರಿ ತಿಳಿಸಿದೆ.