ಕಾಬೂಲ್: ‘ಅಫ್ಗಾನಿಸ್ತಾನದ ಮಾಜಿ ಅಧ್ಯಕ್ಷ ಹಮೀದ್ ಕರಾಜೈ, ಅಬ್ದುಲ್ ಅಬ್ದುಲ್ಲಾ ಸೇರಿದಂತೆ ಇತರೆ ರಾಜಕೀಯ ನಾಯಕರೊಂದಿಗೆ ತಾಲಿಬಾನ್ನ ಹಿರಿಯ ನಾಯಕ ಅಮೀರ್ ಖಾನ್ ಮುಟ್ಟಾಕಿ ಕಾಬೂಲ್ನಲ್ಲಿ ಮಾತುಕತೆ ನಡೆಸುತ್ತಿದ್ದಾರೆ’ ಎಂದು ಈ ಬೆಳವಣಿಗೆ ಬಗ್ಗೆ ತಿಳಿದಿರುವ ಅಧಿಕಾರಿಯೊಬ್ಬರು ಹೇಳಿದರು.
ತಾಲಿಬಾನ್ ಕೊನೆಯ ಆಡಳಿತದಲ್ಲಿ ಮುಟ್ಟಾಕಿ ಉನ್ನತ ಶಿಕ್ಷಣ ಸಚಿವರಾಗಿದ್ದರು. ಅಫ್ಗಾನಿಸ್ತಾನದ ಅಧ್ಯಕ್ಷ ಅಶ್ರಫ್ ಘನಿ ಅವರು ದೇಶ ಬಿಟ್ಟು ಪರಾರಿಯಾಗುವುದಕ್ಕೂ ಮುನ್ನವೇ ಮುಟ್ಟಾಕಿ, ರಾಜಕೀಯ ನಾಯಕರೊಂದಿಗೆ ಸಂಪರ್ಕ ಸಾಧಿಸಲು ಆರಂಭಿಸಿದ್ದರು ಎನ್ನಲಾಗಿದೆ.
‘ಅಫ್ಗಾನ್ ರಾಜಕೀಯ ನಾಯಕರುಗಳನ್ನು ನೂತನ ಸರ್ಕಾರದಲ್ಲಿ ಸೇರ್ಪಡೆಗೊಳಿಸುವ ನಿಟ್ಟಿನಲ್ಲಿ ಈ ಮಾತುಕತೆಯನ್ನು ನಡೆಸಲಾಗುತ್ತಿದೆ’ ಎಂದು ಅವರು ಮಾಹಿತಿ ನೀಡಿದರು.
ನವದೆಹಲಿ: ಅಫ್ಗಾನಿಸ್ತಾನದಲ್ಲಿರುವ ಭಾರತೀಯ ರಾಯಭಾರಿ ಸೇರಿದಂತೆ ಇತರೆ 120 ಅಧಿಕಾರಿಗಳನ್ನು ಭಾರತೀಯ ವಾಯುಪಡೆಯ ವಿಮಾನದ ಮೂಲಕ ಮಂಗಳವಾರ ವಾಪಸ್ ಕರೆತರಲಾಗುತ್ತಿದೆ.
‘ಅಫ್ಗಾನಿಸ್ತಾನ ತಾಲಿಬಾನ್ ಕೈವಶವಾಗಿದೆ. ಅಲ್ಲಿ ಪರಿಸ್ಥಿತಿ ಹದಗೆಡುತ್ತಿದೆ. ಹಾಗಾಗಿ ಅಲ್ಲಿಂದ ಭಾರತೀಯ ರಾಯಭಾರಿ ಮತ್ತು ಅಧಿಕಾರಿಗಳನ್ನು ದೇಶಕ್ಕೆ ವಾಪಸ್ ಕರೆತರಲು ನಿರ್ಧಾರಿಸಲಾಗಿದೆ’ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ಅರಿಂದಮ್ ಬಾಗ್ಚಿ ಅವರು ಟ್ವೀಟ್ ಮಾಡಿದ್ದಾರೆ.
ಅಫ್ಗಾನಿಸ್ತಾನದಿಂದ ಕೆಲ ಭಾರತೀಯ ಅಧಿಕಾರಿಗಳನ್ನು ಸಿ–17 ವಿಮಾನದ ಮೂಲಕ ಭಾರತಕ್ಕೆ ಕರೆತರಲಾಗಿದೆ. ಇನ್ನುಳಿದ ಅಧಿಕಾರಿಗಳನ್ನು ಎರಡನೇ ವಿಮಾನದ ಮೂಲಕ ಮಂಗಳವಾರ ಕರೆತರಲಾಗುತ್ತಿದೆ.