ಕಾಬೂಲ್: ಉತ್ತರ ಅಫ್ಗಾನಿಸ್ತಾನದಲ್ಲಿ ಪ್ರತಿಭಟನೆ ನಡೆಸುತ್ತಿರುವವರ ಜತೆ ಸಂಧಾನಕ್ಕೆ ಸಿದ್ಧವಿರುವುದಾಗಿ ಅವರಿಗೆ ತಿಳಿಸುವಂತೆ ತಾಲಿಬಾನ್ ನಾಯಕರು ತಮಗೆ ಹೇಳಿದ್ದಾಗಿ ಕಾಬೂಲ್ನಲ್ಲಿರುವ ರಷ್ಯಾ ರಾಯಭಾರಿ ಮಾಹಿತಿ ನೀಡಿದ್ದಾರೆ.
ಪಂಜ್ಶಿರ್ ಕಣಿವೆಯಲ್ಲಿ ಪ್ರತಿಭಟನೆ ನಡೆಸುತ್ತಿರುವವರ ಜತೆ ರಾಜಕೀಯ ಸಂಧಾನಕ್ಕೆ ತಾಲಿಬಾನ್ ಮುಂದಾಗಿದೆ. ಈ ಕುರಿತು ತಾಲಿಬಾನ್ನ ಹಿರಿಯ ನಾಯಕರು ಮಾಹಿತಿ ನೀಡಿದ್ದಾರೆ ಎಂದು ರಷ್ಯಾ ರಾಯಭಾರಿ ಡಿಮಿಟ್ರಿ ಜಿರ್ನೋವ್ ತಿಳಿಸಿದ್ದಾರೆ.
ಪಂಜ್ಶಿರ್ ಕಣಿವೆ ಪ್ರದೇಶದಲ್ಲಿ ರಕ್ತಪಾತ ನಡೆಸುವುದು ಬೇಕಿಲ್ಲ. ಹೀಗಾಗಿ ಮಾತುಕತೆಗೆ ಮುಂದಾಗಿರುವುದಾಗಿ ತಾಲಿಬಾನ್ ನಾಯಕರು ಹೇಳಿದ್ದಾರೆ ಎಂದು ಜಿರ್ನೋವ್ ತಿಳಿಸಿದ್ದಾರೆ.
ಕಾಬೂಲ್ನ ಉತ್ತರಕ್ಕಿರುವ ಪಂಜ್ಶಿರ್ ಕಣಿವೆಯು ತಾಲಿಬಾನ್ ವಿರೋಧಿಸುವವರ ಪ್ರಬಲ ಒಕ್ಕೂಟ ಹೊಂದಿದ್ದು, ಇದು 2001ರಿಂದ ಅಮೆರಿಕ ಪಡೆಗಳ ಜತೆ ಮೈತ್ರಿ ಮಾಡಿಕೊಂಡಿದೆ. ಸದ್ಯ ಕಣಿವೆಯು ಅಫ್ಗಾನಿಸ್ತಾನದಲ್ಲಿ ತಾಲಿಬಾನ್ ವಶವಾಗದಿರುವ ಏಕೈಕ ಪ್ರದೇಶವಾಗಿದೆ.