ಲಂಡನ್: ದುಬೈನಲ್ಲಿ ಇತ್ತೀಚೆಗೆ ಮುಕ್ತಾಯವಾದ ಏಷ್ಯಾ ಕಪ್ ಟೂರ್ನಿಯ ಭಾರತ-ಪಾಕಿಸ್ತಾನ ನಡುವಿನ ಕ್ರಿಕೆಟ್ ಪಂದ್ಯದ ನಂತರ ಪೂರ್ವ ಇಂಗ್ಲೆಂಡ್ನ ಲಿಸೆಸ್ಟರ್ ನಗರದಲ್ಲಿ ಹಿಂದೂ– ಮುಸ್ಲಿಮರ ನಡುವೆ ಹಿಂಸಾತ್ಮಕ ಘರ್ಷಣೆ ತೀವ್ರಗೊಂಡಿದೆ. ಬರ್ಮಿಂಗ್ಹ್ಯಾಂನಲ್ಲಿ ಹಿಂದೂ ದೇವಾಲಯದ ಎದುರು ಪ್ರತಿಭಟಿಸುತ್ತಿದ್ದ ವ್ಯಕ್ತಿಯೊಬ್ಬನನ್ನು ಬುಧವಾರ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಹಿಂಸಾಚಾರ ಸಂಬಂಧ ಲಿಸೆಸ್ಟರ್ಶೈರ್ನಲ್ಲಿ ಇದುವರೆಗೆ 47 ಜನರನ್ನು ಬಂಧಿಸಲಾಗಿದೆ. ಬಂಧಿತರಲ್ಲಿ ಬಹುತೇಕರು ನಗರದ ಹೊರಗಿನವರು. ಬರ್ಮಿಂಗ್ಹ್ಯಾಂನವರೇ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.
ಶನಿವಾರ ಘಟನೆಯ ಸಮಯದಲ್ಲಿ ಬಂಧನಕ್ಕೊಳಗಾದ ಸ್ಥಳೀಯ ಯುವಕ ಅಮೋಸ್ ನೊರೊನ್ಹಾ (20) ಎಂಬಾತಮಾರಕಾಸ್ತ್ರ ಹೊಂದಿದ್ದ ಬಗ್ಗೆ ತಪ್ಪೊಪ್ಪಿಕೊಂಡಿದ್ದು, ಲಿಸೆಸ್ಟರ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯ ಆತನಿಗೆ ಹತ್ತು ತಿಂಗಳ ಶಿಕ್ಷೆ ವಿಧಿಸಿದೆ ಎಂದು ಪೊಲೀಸರು ಹೇಳಿದ್ದಾರೆ.
ಕಳೆದ ಐದು ದಿನಗಳ ಹಿಂದೆ ಶುರುವಾದ ಘರ್ಷಣೆ ಹಿಂಸಾಚಾರಕ್ಕೆ ತಿರುಗಿದ್ದು, ತ್ವೇಷಮಯ ವಾತಾವರಣ ಉಂಟಾಗಿದೆ. ಸಾಮರಸ್ಯ ಕಾಪಾಡಲು ಉಭಯ ಸಮುದಾಯದ ನಾಯಕರು ಜಂಟಿ ಕರೆ ಕೊಟ್ಟಿದ್ದಾರೆ.
ಹಿಂದೂ ದೇಗುಲಗಳು ಮತ್ತು ಹಿಂದೂ ಧರ್ಮದ ಲಾಂಛನಗಳನ್ನು ಧ್ವಂಸಗೊಳಿಸಿರುವುದನ್ನು ಹಾಗೂ ಭಾರತೀಯ ಸಮುದಾಯದವರ ಮೇಲಿನ ದೌರ್ಜನ್ಯವನ್ನು ತೀವ್ರವಾಗಿ ಖಂಡಿಸಿದ ಭಾರತೀಯ ಹೈಕಮಿಷನ್, ಸಂತ್ರಸ್ತರಿಗೆ ಸೂಕ್ತ ರಕ್ಷಣೆ ನೀಡುವಂತೆ ಒತ್ತಾಯಿಸಿತು. ಪರಿಣಾಮಪೊಲೀಸರು,ಶಾಂತಿ– ಸುವ್ಯವಸ್ಥೆ ಕಾಪಾಡಲು ಬುಧವಾರವೂ ಗಸ್ತು ನಡೆಸಿದರು.
ನಗರದ ಮಸೀದಿಯ ಹೊರಗೆ ಸೇರಿದ್ದ ಸಮುದಾಯದ ಮುಖಂಡರ ಪರವಾಗಿನಗರದ ಇಸ್ಕಾನ್ ದೇವಾಲಯದ ಅಧ್ಯಕ್ಷ ಪ್ರದ್ಯುಮ್ನ ದಾಸ್ ಅವರುವಾರಾಂತ್ಯದಲ್ಲಿ ಉಲ್ಬಣಗೊಂಡ ಹಿಂಸಾಚಾರದ ಬಗ್ಗೆ ವಿಷಾದಿಸುವ ಹೇಳಿಕೆ ಬಿಡುಗಡೆ ಮಾಡಿದರು.
‘ಪ್ರಚೋದನೆ ಮತ್ತು ಹಿಂಸಾಚಾರ ತಕ್ಷಣವೇ ನಿಲ್ಲಿಸಿ. ಲಿಸೆಸ್ಟರ್ ನಗರವನ್ನು ಶಾಂತವಾಗಿರಲು ಬಿಟ್ಟು, ಸಾಮರಸ್ಯ ಕಾಯ್ದುಕೊಳ್ಳಬೇಕು. ಪರಸ್ಪರರ ಪೂಜಾ, ಪ್ರಾರ್ಥನಾ ಸ್ಥಳಗಳನ್ನು ಗೌರವಿಸಬೇಕು. ಶಾಂತಿ ಕದಡಲು ಬಿಡೆವು, ಇದು ನಮ್ಮ ಸ್ಪಷ್ಟ ಸಂದೇಶ’ ಎಂದು ಹೇಳಿಕೆಯಲ್ಲಿ ತಿಳಿಸಿದ್ದಾರೆ.