ವಿಶ್ವಸಂಸ್ಥೆ: ವಿಶ್ವಸಂಸ್ಥೆಯ ಸಾಮಾನ್ಯ ಸಭೆಯ ಚುನಾಯಿತ ಅಧ್ಯಕ್ಷ ಅಬ್ದುಲ್ಲಾ ಶಹೀದ್ ಅವರು, ವಿಶ್ವಸಂಸ್ಥೆಯಲ್ಲಿ ಭಾರತದ ರಾಯಭಾರಿಯ ಕಾಯಂ ಉಪಪ್ರತಿನಿಧಿಯಾಗಿರುವ ಕೆ.ನಾಗರಾಜ್ ನಾಯ್ಡು ಅವರನ್ನು ತಮ್ಮ ಕಚೇರಿಯ ಮುಖ್ಯಸ್ಥರನ್ನಾಗಿ ನೇಮಕ ಮಾಡಿದ್ದಾರೆ.
‘ಥಿಲ್ಮೀಜಾ ಹುಸೇನ್ ಅವರನ್ನು ಸಾಮಾನ್ಯಸಭೆ ಅಧ್ಯಕ್ಷರ ವಿಶೇಷ ರಾಯಭಾರಿಯನ್ನಾಗಿ ನೇಮಕ ಮಾಡಲಾಗಿದೆ’ ಎಂದು ಅಬ್ದುಲ್ಲಾ ಅವರು ತಿಳಿಸಿದ್ದಾರೆ.
‘ಥಿಲ್ಮೀಜಾ ಹುಸೇನ್ ಹಾಗೂ ನಾಗರಾಜ್ ನಾಯ್ಡು ಅವರು ವಿಶ್ವಸಂಸ್ಥೆಯ ಅಧ್ಯಕ್ಷನಾಗಿ ನನ್ನ ಮುನ್ನೋಟ, ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸುವಲ್ಲಿ ಮಹತ್ತರ ಪಾತ್ರ ವಹಿಸುವರು’ ಎಂದೂ ಅವರು ಟ್ವೀಟ್ ಮಾಡಿದ್ದಾರೆ.
ಹುಸೇನ್ ಅವರು ವಿಶ್ವಸಂಸ್ಥೆಯಲ್ಲಿ ಮಾಲ್ಡೀವ್ಸ್ನ ಕಾಯಂ ರಾಯಭಾರಿಯಾಗಿದ್ದಾರೆ.
‘ಸಾಮಾನ್ಯಸಭೆಯ ಚುನಾಯಿತ ಅಧ್ಯಕ್ಷರ ಕಚೇರಿಯ ಮುಖ್ಯಸ್ಥ ಹುದ್ದೆಗೆ ನೇಮಕಗೊಂಡಿರುವುದು ನನಗೆ ದೊರೆತ ವಿಶೇಷ ಗೌರವ ಎಂದು ಭಾವಿಸುವೆ. ಅಧ್ಯಕ್ಷರೊಂದಿಗೆ ಕಾರ್ಯನಿರ್ವಹಿಸಲು ಉತ್ಸುಕನಾಗಿದ್ದೇನೆ’ ಎಂದು ನಾಯ್ದು ಪ್ರತಿಕ್ರಿಯಿಸಿದರು.
ಶಹೀದ್ ಅವರು ಮಾಲ್ಡೀವ್ಸ್ನ ವಿದೇಶಾಂಗ ಸಚಿವರಾಗಿದ್ದು, ವಿಶ್ವಸಂಸ್ಥೆಯ ಮುಂದಿನ ಸಾಮಾನ್ಯಸಭೆಯ ಅಧ್ಯಕ್ಷ ಸ್ಥಾನಕ್ಕೆ ಜೂನ್ 7ರಂದು ನಡೆದ ಚುನಾವಣೆಯಲ್ಲಿ ಅತ್ಯಧಿಕ ಮತಗಳನ್ನು ಪಡೆದು ಆಯ್ಕೆಯಾಗಿದ್ದಾರೆ. ಸಾಮಾನ್ಯಸಭೆ ಸೆಪ್ಟೆಂಬರ್ನಲ್ಲಿ ನಡೆಯಲಿದೆ.