ನ್ಯೂಯಾರ್ಕ್: 9/11 ಉಗ್ರರ ದಾಳಿಯನ್ನು, ದಾಳಿಗೆ ಬಲಿಯಾದವರನ್ನು ಮತ್ತು ಇಂತಹ ಹೀನ ಕೃತ್ಯದಿಂದ ಕಲಿತ ಪಾಠಗಳನ್ನು ಎಂದಿಗೂ ಮರೆಯಬಾರದು. ಯಾವುದೇ ರೀತಿಯ ಭಯೋತ್ಪಾದನೆಯನ್ನು ಖಂಡಿಸಲೇಬೇಕು ಎಂದು ಭಾರತ ಹೇಳಿದೆ.
ವಿಶ್ವಸಂಸ್ಥೆಯ ಭಯೋತ್ಪಾದನಾ ನಿಗ್ರಹ ಕಚೇರಿಯು ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಕಾರ್ಯದರ್ಶಿ ರೀನತ್ ಸಂಧು ಅವರು ದಾಳಿಯಲ್ಲಿ ಬಲಿಯಾದವರಿಗೆ ಗೌರವ ನಮನ ಸಲ್ಲಿಸಿ ಮಾತನಾಡಿದರು.
2001 ಮತ್ತು 1993ರ ಉಗ್ರರ ದಾಳಿಯಲ್ಲಿ ಸಾವಿಗೀಡಾದ 2,983 ಜನರ ಹೆಸರುಗಳನ್ನು ಸ್ಮಾರಕಗಳ ಬಳಿ ಬರೆಸಲಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರು 2014ರ ಸೆಪ್ಟೆಂಬರ್ನಲ್ಲಿ ಈ ಸ್ಮಾರಕ ಸ್ಥಳಕ್ಕೆ ಭೇಟಿ ನೀಡಿ ಶ್ರದ್ಧಾಂಜಲಿ ಸಲ್ಲಿಸಿದ್ದರು.
ವಿಶ್ವಸಂಸ್ಥೆಯ ಸಾಮಾನ್ಯ ಸಭೆಯ 76ನೇ ಅಧಿವೇಶನದ ಉನ್ನತ ಮಟ್ಟದ ವಾರ್ಷಿಕ ಸಪ್ತಾಹದ ಮುನ್ನಾ ದಿನ ವಿಶ್ವಸಂಸ್ಥೆಯು ಈ ದಾಳಿಯ 20ನೇ ವಾರ್ಷಿಕ ಆಚರಣೆಯ ಪ್ರಯುಕ್ತ ವಿಶೇಷ ಕಾರ್ಯಕ್ರಮ ಹಮ್ಮಿಕೊಂಡಿತ್ತು.
ವಿವಿಧ ರಾಷ್ಟ್ರಗಳ ನೇತಾರರು, ಸಚಿವರು, ನಿಯೋಗದ ಸದಸ್ಯರು ಸೇರಿದಂತೆ 300ಕ್ಕೂ ಹೆಚ್ಚು ಮಂದಿ ಪಾಲ್ಗೊಂಡಿದ್ದರು.