ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೆ.21ರಂದು ಮೈಸೂರಿನಲ್ಲಿ ಕನ್ನಡದಲ್ಲಿ ವಿಜ್ಞಾನ ಸಂವಹನ

20-21ರಂದು ರಾಜ್ಯಮಟ್ಟದ ವಿಜ್ಞಾನ ಸಂವಹನ ಸಮ್ಮೇಳನ
Last Updated 11 ಸೆಪ್ಟೆಂಬರ್ 2019, 19:30 IST
ಅಕ್ಷರ ಗಾತ್ರ

ವಿಜ್ಞಾನವಿಲ್ಲದ ದೈನಂದಿನ ಚಟುವಟಿಕೆಯನ್ನು ಊಹಿಸಿಕೊಳ್ಳುವುದು ಸಾಧ್ಯವಿಲ್ಲ. ಇನ್ನು ತಂತ್ರಜ್ಞಾನವಂತೂ ನಮ್ಮ ಬದುಕಿನ ಶೇ 70ರಷ್ಟು ಭಾಗವನ್ನು ವ್ಯಾಪಿಸಿಕೊಂಡಿದೆ. ಆದರೆ ನಮ್ಮ ಪ್ರತಿ ಚಟುವಟಿಕೆಯ ಹಿಂದೆ ವಿಜ್ಞಾನ-ತಂತ್ರಜ್ಞಾನಗಳು ಹೇಗೆ ಕೆಲಸ ಮಾಡುತ್ತವೆ? ಎಷ್ಟು ಮಹತ್ವದ ಕೆಲಸ ಮಾಡುತ್ತಿವೆ ಎಂಬುದು ನಮಗೆ ಗೊತ್ತಿದೆಯೇ? ಈ ತಿಳಿವು ನಿಜಕ್ಕೂ ಅಗತ್ಯವೇ?

ಖಂಡಿತಾ ಅಗತ್ಯ. ನಾವು ಮಾಡುವ ಊಟ, ಬಳಸುವ ಕಂಪ್ಯೂಟರ್, ಅದು ಕೆಲಸ ಮಾಡುವ ರೀತಿ, ಪ್ರಕ್ರಿಯೆ, ಅದರ ಹಿಂದಿನ ಸೂತ್ರಗಳ ಬಗ್ಗೆ ನಮಗೆ ತಿಳಿಯಲು ಸಾಧ್ಯವಾದರೆ ನಮ್ಮ ಆಲೋಚನೆ, ನಮ್ಮ ಸುತ್ತಲಿನ ವಿದ್ಯಮಾನಗಳನ್ನು ನೋಡುವ ಕ್ರಮವೂ ಬದಲಾಗುತ್ತದೆ. ಅಂದರೆ ವಿಚಾರವಂತಿಕೆಯ ಬಲವೊಂದು ನಮಗೆ ಸಿಗುತ್ತದೆ.

ಆದರೆ ವಿಜ್ಞಾನ ಮತ್ತು ತಂತ್ರಜ್ಞಾನ ಕುರಿತು ಈ ಅರಿವು ಹಂಚುವ ಸಾಹಿತ್ಯ ಕನ್ನಡದಲ್ಲಿ ಎಷ್ಟು ಪ್ರಮಾಣದಲ್ಲಿ ಲಭ್ಯವಾಗುತ್ತಿದೆ. ಸಂಕೀರ್ಣವಾದ ವೈಜ್ಞಾನಿಕ ಸಂಗತಿಗಳನ್ನು ಸರಳವಾಗಿ, ಸಾಮಾನ್ಯ ಗ್ರಹಿಕೆಗೂ ಸಿಗುವಂತೆ ಎಷ್ಟು ಬರಹಗಳು ನಮಗೆ ನಿತ್ಯವೂ ಓದಲು ಸಿಗುತ್ತವೆ? ಬಹಳ ಕಡಿಮೆ.
ಈ ಕೊರತೆಯನ್ನು ನೀಗಿಸುವ ನಿಟ್ಟಿನಲ್ಲಿ ನವದೆಹಲಿಯ ವಿಜ್ಞಾನ್‌ ಪ್ರಸಾರ್‌ ಸ್ಥಳೀಯ ಭಾಷೆಯಲ್ಲಿ ವಿಜ್ಞಾನ ಸಂವಹನವನ್ನು ಹೆಚ್ಚು ಹೆಚ್ಚು ಪ್ರಚಾರ ಮಾಡುವ ಪ್ರಯತ್ನವಾಗಿ ವಿವಿಧ ಕಾರ್ಯಕ್ರಮಗಳನ್ನು ರೂಪಿಸಿದೆ. ಇವುಗಳಲ್ಲಿ ಒಂದು ವಿಜ್ಞಾನ ಸಂವಹನ ಸಾಧ್ಯತೆಗಳನ್ನು ಅರಿಯುವ ಸಮ್ಮೇಳನ. ಈಗಾಗಲೇ ಪಶ್ಚಿಮ ಬಂಗಾಳ, ತಮಿಳುನಾಡಿನಲ್ಲಿ ಆಯಾ ರಾಜ್ಯದ ಭಾಷೆಗಳಲ್ಲಿ ಸಮ್ಮೇಳನಗಳನ್ನು ನಡೆಸಿದೆ. ಅಷ್ಟೇ ಅಲ್ಲದೆ ಉರ್ದು ಭಾಷೆಯಲ್ಲೂ ವಿಜ್ಞಾನ ಸಂವಹನ ಕುರಿತು ಸಮ್ಮೇಳನವನ್ನು ನಡೆಸಿದ್ದು, ಈಗ ಕನ್ನಡದಲ್ಲಿ ಆಯೋಜಿಸಲು ಸಜ್ಜಾಗಿದೆ. ಇದೇ 21 ಮತ್ತು 22ರಂದು ಮೈಸೂರಿನಲ್ಲಿ ಕನ್ನಡದಲ್ಲಿ ವಿಜ್ಞಾನ ಸಂವಹನ ಸಮ್ಮೇಳನ ಆಯೋಜಿಸಲಾಗುತ್ತಿದೆ.

‘ಸ್ಥಳೀಯ ಭಾಷೆಗಳಲ್ಲಿ ಉದಾಹರಣೆಗಳೊಂದಿಗೆ ನಡೆಸುವ ಚಟುವಟಿಕೆಗಳು ವಿಜ್ಞಾನವನ್ನು ಹೆಚ್ಚು ಆಸಕ್ತಿದಾಯಕಗೊಳಿಸುತ್ತವೆ ಮತ್ತು ಸಂವಹನದ ಪರಿಣಾಮವನ್ನು ಹೆಚ್ಚಿಸುತ್ತದೆ. ಇದರಿಂದ ಸಂವಹನ ಮಾಡುತ್ತಿರುವವರು ಗೆದ್ದಂತಾಗುತ್ತದೆ. ಹಾಗೇ ಆಸಕ್ತರಲ್ಲಿ ಜಿಜ್ಞಾಸೆ ಹೆಚ್ಚುತ್ತದೆ, ಇನ್ನಷ್ಟು ಕುತೂಹಲಿಗಳೂ ಆಗುತ್ತಾರೆ. ಅದೇ ಕಾರಣಕ್ಕೆ ವಿಜ್ಞಾನ್‌ ಪ್ರಸಾರ್‌ ಕನ್ನಡದಲ್ಲಿ ಕುತೂಹಲಿ ಹೆಸರಿನ ಮಾಸಿಕ ಸುದ್ದಿ ಪತ್ರವನ್ನು ಹೊರತರುತ್ತಿದೆ' ಎನ್ನುತ್ತಾರೆ ವಿಜ್ಞಾನ್‌ ಪ್ರಸಾರ್‌ ನಿರ್ದೇಶಕ ನಕುಲ್‌ ಪರಾಶರ್‌.

ಸಮ್ಮೇಳನ ರೂಪಿಸುವ ಹೊಣೆ ಹೊತ್ತಿರುವ ವಿಜ್ಞಾನ್‌ ಪ್ರಸಾರ್‌ ಹಿರಿಯ ವಿಜ್ಞಾನಿ ಟಿ ವಿ ವೆಂಕಟೇಶ್ವರನ್‌ ‘ನಾವು ಜ್ಞಾನ ಸಮುದಾಯದ ಯುಗದಲ್ಲಿದ್ದೇವೆ. ಆರ್ಟಿಫಿಶಿಯಲ್‌ ಇಂಟೆಲಿಜೆನ್ಸ್‌, ಡಾಟಾ, ಆಲ್ಗರಿದಂ ಆಧರಿಸಿದ ತಂತ್ರಜ್ಞಾನಗಳನ್ನು ನೋಡುತ್ತಿದ್ದೇವೆ. ಹಿಂದೆಂದಿಗಿಂತ ಉತ್ತಮವಾದ ತಂತ್ರಜ್ಞಾನ, ವಿಜ್ಞಾನವನ್ನು ನೋಡುತ್ತಿರುವ ಕಾಲವಿದು. ಒಂದು ಪ್ರಜಾಪ್ರಭುತ್ವ ಗಟ್ಟಿಯಾಗಿರಬೇಕೆಂದರೆ ವಿಜ್ಞಾನದ ಆಗುಹೋಗುಗಳನ್ನು ವಿಜ್ಞಾನಿಯಾಗಿರಲಿ, ಮತ್ತೊಬ್ಬರಿರಲಿ ತಿಳಿಯಬೇಕಾದ್ದು ಅಗತ್ಯ. ಹಾಗಾಗಿ ವಿಜ್ಞಾನವನ್ನು ಎಲ್ಲ ಭಾರತೀಯ ಭಾಷೆಗಳಲ್ಲಿ ತಲುಪಿಸಬೇಕು. ಎಲ್ಲ ಮಾಧ್ಯಮಗಳ ಮೂಲಕ ಸಾಮಾನ್ಯರಿಗೂ ಅವರದೇ ಭಾಷೆಯಲ್ಲಿ ವಿಜ್ಞಾನವನ್ನು ತಲುಪಿಸಬೇಕು. ಇದು ವಿಜ್ಞಾನ್‌ ಪ್ರಸಾರ್‌ನ ಆದ್ಯತೆ. ಈ ಹಿನ್ನೆಲೆಯಲ್ಲಿ ವಿಜ್ಞಾನ ಸಮ್ಮೇಳನಗಳನ್ನು ಆಯೋಜಿಸಲಾಗುತ್ತಿದೆ’ ಎನ್ನುತ್ತಾರೆ.

ಈ ಹಿನ್ನೆಲೆಯಲ್ಲಿ ಆಯೋಜಿಸುತ್ತಿರುವ ಸಮ್ಮೇಳನದಲ್ಲಿ ಐದು ಗೋಷ್ಠಿಗಳಿವೆ. ಅದರಲ್ಲಿ ವಿಜ್ಞಾನ ಸಂವಹನ, ಪ್ರಚಾರ, ಸಂಶೋಧನೆಯಲ್ಲಿ ತೊಡಗಿಸಿಕೊಂಡಿರುವ ಸರ್ಕಾರಿ ಸಂಸ್ಥೆಗಳು, ಸಂಶೋಧನೆ ಮತ್ತು ಅಧ್ಯಯನದಲ್ಲಿ ಸಕ್ರಿಯವಾಗಿರುವ ಸರ್ಕಾರೇತರ ಸಂಸ್ಥೆಗಳು, ವಿಜ್ಞಾನ ಬರವಣಿಗೆಯಲ್ಲಿ ತೊಡಗಿರುವ ಲೇಖಕರು ಮತ್ತು ಪ್ರಕಾಶಕರು, ವಿಜ್ಞಾನ ಸಂವಹನದ ಮಾಧ್ಯಮಗಳಾಗಿರುವ ಸಾಂಪ್ರದಾಯಿಕ ಹಾಗೂ ಡಿಜಿಟಲ್‌ ಮಾಧ್ಯಮಗಳಿಂದ ಮೂವತ್ತು ಜನ ಸಂಪನ್ಮೂಲ ವ್ಯಕ್ತಿಗಳು ಈ ಸಮ್ಮೇಳನದಲ್ಲಿ ತಮ್ಮ ವಿಚಾರಗಳನ್ನು ಮಂಡಿಸಲಿದ್ದಾರೆ. ಜೊತೆಗೆ ಕುತೂಹಲಿ ಎಂಬ ಮಾಸಿಕ ಸುದ್ದಿ ಪತ್ರ ಬಿಡುಗಡೆ, ವಿಜ್ಞಾನ ನಾಟಕ ಪ್ರದರ್ಶನ, ವಿಜ್ಞಾನ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ವಸ್ತುಪ್ರದರ್ಶನವೂ ನಡೆಯಲಿದೆ.

ಜೊತೆಗೆ ಕುತೂಹಲಿ ಎಂಬ ಮಾಸಿಕ ಸುದ್ದಿ ಪತ್ರ ಬಿಡುಗಡೆ, ವಿಜ್ಞಾನ ನಾಟಕ ಪ್ರದರ್ಶನ, ವಿಜ್ಞಾನ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ವಸ್ತುಪ್ರದರ್ಶನವೂ ನಡೆಯಲಿದೆ.

ಸಮ್ಮೇಳನ ಕುರಿತ ಹೆಚ್ಚಿನ ಮಾಹಿತಿಗೆ

ವಿಜ್ಞಾನಸಂವಹನ ಕುರಿತು ನಡೆಯುತ್ತಿರುವಈಸಮ್ಮೇಳನದಲ್ಲಿ ವಿಜ್ಞಾನ ಆಸಕ್ತಿ ಇರುವ ಯಾರು ಬೇಕಾದರೂ ಪಾಲ್ಗೊಳ್ಳಬಹುದು. ನೋಂದಣಿಉಚಿತ. http://bit.ly/2kp5pF7 ಲಿಂಕ್ ಕ್ಲಿಕ್ಮಾಡಿ, ನೋಂದಾಯಿಸಿಕೊಳ್ಳಬಹುದು. ಸೆಪ್ಟೆಂಬರ್15 ನೋಂದಣಿಗೆ ಕಡೆಯ ದನ. ಆಯ್ಕಯಾದವರಿಗೆಸೆ.18ರ ಒಳಗೆ ಇಮೇಲ್ ಅಥವಾ ದೂರವಾಣಿಮೂಲಕ ಖಚಿತಪಡಿಸಲಾಗುವುದು. ಹೆಚ್ಚಿನ ಮಾಹಿತಿಗೆ ಎ.ಎಸ್.ಕೆ.ವಿ.ಎಸ್.ಶರ್ಮ ಅವರನ್ನು ಸಂಪರ್ಕಿಸಬಹುದು. ದೂರವಾಣಿ ಸಂಖ್ಯೆ 9886640328. ಇಮೇಲ್ : iandp.cftri@gmail.com

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT