ಮಂಗಳವಾರ, 18 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಂದು ಎಕರೆಯ ‘ಸಾಹುಕಾರ’!

Last Updated 18 ಜೂನ್ 2018, 20:10 IST
ಅಕ್ಷರ ಗಾತ್ರ

ಒಂದು ಎಕರೆಯಲ್ಲಿ ಏನು ಕೃಷಿ ಮಾಡಬಹುದು? – ಇಂಥದ್ದೊಂದು ಸಾಮಾನ್ಯ ಪ್ರಶ್ನೆ ಕೇಳಿದರೆ, ‘ಅಷ್ಟರಲ್ಲಿ ಏನ್ ಮಾಡೋಕಾಗುತ್ತೆ’ ಎಂದು ನಿರ್ಲಕ್ಷ್ಯವಾಗಿ ಉತ್ತರ ಹೇಳುವವರೇ ಹೆಚ್ಚು; ಇದೇ ಪ್ರಶ್ನೆಯನ್ನು ಹೇಮದಳದ ಕೃಷಿಕ ಸಿದ್ದಪ್ಪರನ್ನು ಕೇಳಿ ನೋಡಿ. ಎಕರೆಯಲ್ಲಿ ತಾವು ಬೆಳೆದಿರುವ ಬೆಳೆಗಳ ಪಟ್ಟಿಯನ್ನೇ ಕೊಡುತ್ತಾರೆ. ಅಷ್ಟೇ ಅಲ್ಲ, ಆ ಬೆಳೆಗಳಿಂದ ಬರುವ ಆದಾಯ – ಖರ್ಚು ಎಲ್ಲ ಲೆಕ್ಕಾಚಾರ ಒಪ್ಪಿಸಿ ಬಿಡುತ್ತಾರೆ. ಏಕೆ ಗೊತ್ತಾ? ಅವರು ಎರಡೂವರೆ ದಶಕದಿಂದ ಒಂದೇ ಎಕರೆಯಲ್ಲಿ ಕೃಷಿ ಮಾಡುತ್ತಾ ಬದುಕು ಕಟ್ಟಿಕೊಂಡಿದ್ದಾರೆ !

ಚಿತ್ರದುರ್ಗ ಜಿಲ್ಲೆ ಹಿರಿಯೂರು ತಾಲ್ಲೂಕಿನ ಹೇಮದಳ ಗ್ರಾಮದ ಸಾಹುಕಾರ್ ಸಿದ್ದಪ್ಪ ಅವರ ಒಂದು ಎಕರೆ ಕೃಷಿ ಬದುಕಿಗೆ ‘ಬೆಳ್ಳಿಹಬ್ಬ’ದ ಸಂಭ್ರಮ. ಒಂದು ಎಕರೆಯಲ್ಲಿ 30 ಗುಂಟೆ ದಾಳಿಂಬೆ, ಮೂರು ಗುಂಟೆಯಲ್ಲಿ ಸೊಪ್ಪು, ತರಕಾರಿ, ಒಂದೂವರೆ ಗುಂಟೆಯಲ್ಲಿ ಮನೆ, ಮೂರು ಗುಂಟೆಯಲ್ಲಿ ಮಲ್ಲಿಗೆ ಹೂವಿನ ಬಳ್ಳಿಗಳು, ಜಮೀನಿನ ಬೇಲಿಯಲ್ಲಿ ಸಿಲ್ವರ್ ಓಕ್, ತೇಗ, ಹೆಬ್ಬೇವಿನಂತಹ ಕಾಡು ಮರಗಳು, ಕೃಷಿಗೆ ಪೂರಕವಾದ ಹೈನುಗಾರಿಕೆ ಎಲ್ಲವೂ ಇವೆ. ಈ ಎರಡೂವರೆ ದಶಕಗಳ ಅವಧಿಯ ಕೃಷಿ ಜೀವನದಲ್ಲಿ ಹಲವು ಏಳು ಬೀಳುಗಳನ್ನು ಕಂಡರೂ ಅಂತಿಮವಾಗಿ ಸಮಗ್ರ ಕೃಷಿ ಪದ್ಧತಿ ಅಳವಡಿಸಿಕೊಳ್ಳುವ ಮೂಲಕ ಸುಸ್ಥಿರ ಬದುಕು ನಡೆಸುತ್ತಿದ್ದಾರೆ. ‘ಲಕ್ಷ ರೂಪಾಯಿ ಸಂಪಾದಿಸಿ
ದರೂ ಸಿಗದ ನೆಮ್ಮದಿಯನ್ನು ಈ ಒಂದು ಎಕರೆ ಕೃಷಿಯಿಂದ ಪಡೆದಿದ್ದೇನೆ’ ಎಂದು ಅವರು ಹೆಮ್ಮೆಯಿಂದ ನುಡಿಯುತ್ತಾರೆ.

ಸಿದ್ದಪ್ಪ ಓದಿದ್ದು 10ನೇ ತರಗತಿ. ನಂತರ ಹಿರಿಯೂರಿನ ವಾಣಿ ವಿಲಾಸ ಸಹಕಾರಿ ಸಕ್ಕರೆ ಕಾರ್ಖಾನೆಗೆ ನೌಕರಿ ಸೇರಿದರು. ನೀರಿನ ಕೊರತೆಯಿಂದಾಗಿ ಕಬ್ಬು ಕೃಷಿ ಸ್ಥಗಿತಗೊಂಡಿತು. ಕಾರ್ಖಾನೆ ಮುಚ್ಚಿತು. ಉದ್ಯೋಗಕ್ಕಾಗಿ ಊರೂರು ಅಲೆದಾಡಿದರು. ಉದ್ಯೋಗ ಸಿಕ್ಕರೂ ಸ್ಥಿರವಾದ ನೆಲೆ ಸಿಗಲಿಲ್ಲ. ಅಂತಿಮವಾಗಿ ಊರಿಗೆ ವಾಪಸ್ ಆದರು. ತನ್ನ ಪಾಲಿಗೆ ಬಂದಿದ್ದ ಒಂದು ಎಕರೆ ಜಮೀನಿನಲ್ಲಿ ಕೃಷಿ ಮಾಡಲು ನಿರ್ಧರಿಸಿದರು. ಆದರೆ, ಆ ಜಮೀನಿನ ಮೇಲೆ ಸಾಲವಿತ್ತು. ಆ ಸಾಲ ತೀರಿಸಲು ಹರಸಾಹಸಪಡಬೇಕಾಯಿತು.

ದಾಳಿಂಬೆ ಕೃಷಿಯಿಂದ ಆರಂಭ: 90ರ ದಶಕದಲ್ಲಿ ಆಗಷ್ಟೇ ಚಿತ್ರದುರ್ಗ ಜಿಲ್ಲೆಗೆ ದಾಳಿಂಬೆ ಕೃಷಿ ಪರಿಚಯವಾಗಿತ್ತು. ಸಿದ್ದಪ್ಪ, 1994ರಲ್ಲಿ ದಾಳಿಂಬೆ ಸಸಿ ನಾಟಿ ಮಾಡಿದರು. ದಾಳಿಂಬೆ ಬೆಳೆ ಕೈ ಹಿಡಿಯಿತು. ಕೈ ತುಂಬ ಹಣವೂ ಬಂತು. ಆದರೆ, ಎಂಟತ್ತು ವರ್ಷಗಳಲ್ಲಿ ಹಿರಿಯೂರು ಭಾಗದ ದಾಳಿಂಬೆಗೆ ರೋಗಬಂದು ಸಂಪೂರ್ಣ ಬೆಳೆ ನೆಲಕಚ್ಚಿತು. ಈ ಬೆಳವಣಿಗೆಯಿಂದ ಅವರು ಕಂಗೆಡಲಿಲ್ಲ. ಸಿಕ್ಕಷ್ಟು ಬೆಳೆ ಕೊಯ್ಲು ಮಾಡಿಕೊಂಡರು. ದಾಳಿಂಬೆ ತೆಗೆಸಿದರು. ‘ಏಕ ಬೆಳೆ ಪದ್ಧತಿ ಎಂದೂ ಸೂಕ್ತವಲ್ಲ’ ಎಂದು ತೀರ್ಮಾನಿಸಿ, ಬಹುಬೆಳೆ ಪದ್ಧತಿಯತ್ತ ಹೆಜ್ಜೆ ಹಾಕಿದರು. ಪುನಃ 30 ಗುಂಟೆಯಲ್ಲಿ ದಾಳಿಂಬೆಯೊಂದಿಗೆ ಮಲ್ಲಿಗೆ ಹೂವು, ಸೊಪ್ಪು, ತರಕಾರಿ, ಹೈನುಗಾರಿಕೆ ಅಳವಡಿಸಿಕೊಂಡು ಕೃಷಿ ಆರಂಭಿಸಿದರು.

ಉಪ ಆದಾಯದ ಚಟುವಟಿಕೆಗಳು: ದಾಳಿಂಬೆ ವಾರ್ಷಿಕ ಆದಾಯಕ್ಕಾದರೆ, ಮಲ್ಲಿಗೆ ಹೂವಿನ ಬಳ್ಳಿಗಳು, ಹೈನುಗಾರಿಕೆ, ಜೇನು ಕೃಷಿ ಇವೆಲ್ಲ ಉಪ ಆದಾಯ ನೀಡುವ ಚಟುವಟಿಕೆಗಳು. ಹೂವು ಬಿಡಿಸುವುದು, ಮಾಲೆ ಮಾಡಿ ಮಾರುಕಟ್ಟೆ ಕಳುಹಿಸುವುದು ಎಲ್ಲ ಕುಟುಂಬದವರದ್ದೇ ಕೆಲಸ. ಐವತ್ತು ಮಲ್ಲಿಗೆ ಬಳ್ಳಿಗಳಿಂದ ವಾರ್ಷಿಕವಾಗಿ ಸುಮಾರು ₹2 ಲಕ್ಷ ಆದಾಯ ಬರುತ್ತಿದೆ ಎನ್ನುತ್ತಾರೆ ಸಿದ್ದಪ್ಪ.

30 ಗುಂಟೆಗೆ ದಾಳಿಂಬೆ ಬೆಳೆ ಇದ್ದರೂ, ಅಷ್ಟು ವಿಸ್ತೀರ್ಣದಲ್ಲಿರುವುದು 200 ಗಿಡಗಳು ಮಾತ್ರ. ‘ಕಡಿಮೆ ಗಿಡಗಳಿದ್ದರೆ ಆರೈಕೆ ಸುಲಭ ಮತ್ತು ಪರಿಣಾಮಕಾರಿ’ ಎಂಬ ತತ್ವ ಇವರದ್ದು. ಹಾಗೆಯೇ, ಪ್ರತಿ ಕೆಜಿ ದಾಳಿಂಬೆಗೆ ₹ 100 ರೂಪಾಯಿ ಸಿಕ್ಕರೆ ಸಾಕು, ತಕ್ಕಮಟ್ಟಿಗೆ ಲಾಭ ಬರುತ್ತದೆ ಎಂದು ಲೆಕ್ಕಾಚಾರವನ್ನು ಅವರು ನೀಡುತ್ತಾರೆ.

ಸಮಗ್ರ ಕೃಷಿ ಪದ್ಧತಿಗೆ ಕಾಡು ಮರಗಳು ಪೂರಕ ಶಕ್ತಿ. ಅದಕ್ಕಾಗಿಯೇ, ಜಮೀನಿನ ಬೇಲಿ ಸಾಲುಗಳಲ್ಲಿ ಸಿಲ್ವರ್ ಓಕ್, ತೇಗ, ಹೆಬ್ಬೇವು ಸೇರಿದಂತೆ ಹಲವು ವಿಧದ ಕಾಡು ಮರಗಳನ್ನು ಬೆಳೆಸಿದ್ದಾರೆ. ಜಮೀನಿಗೆ ರಕ್ಷಣೆ ನೀಡುವ ಮರಗಳು, ಕೆಲವು ವರ್ಷಗಳ ನಂತರ ಆದಾಯವನ್ನು ನಿರೀಕ್ಷಿಸಬಹುದು ಎಂಬುದು ಸಿದ್ದಪ್ಪ ಅವರ ಲೆಕ್ಕಾಚಾರ.

ಹೈನುಗಾರಿಕೆಯ ‘ಉಪ ಲಾಭ’ಗಳು: ಹೈನುಗಾರಿಕೆ ಸಮಗ್ರ ಕೃಷಿ ಭಾಗ. ಇದಕ್ಕಾಗಿಯೇ ನಾಲ್ಕು ಹಸುಗಳನ್ನು ಸಾಕಿದ್ದಾರೆ. ಹಸು
ಗಳ ಮೇವಿಗಾಗಿ, ಬೇಲಿಯ ಬದಿಯಲ್ಲಿ ಐದಾರು ತರಹದ ಹುಲ್ಲು ಬೆಳೆಸಿದ್ದಾರೆ. ನಿತ್ಯ ಹತ್ತು ಲೀಟರ್‌ನಂತೆ, ಪ್ರತಿ ತಿಂಗಳು ಸುಮಾರು 300 ಲೀಟರ್ ಹಾಲು ಮಾರಾಟ ಮಾಡುತ್ತಾರೆ. ಹೈನುಗಾರಿಕೆ
ಯಿಂದ ತಿಂಗಳಿಗೆ ₹7 ಸಾವಿರದಿಂದ ₹ 8 ಸಾವಿರದವರೆಗೂ ಆದಾಯ ಪಡೆಯುತ್ತಿದ್ದಾರೆ. ಆಕಳು ಸಗಣಿಯನ್ನು ಗೋಬರ್ ಗ್ಯಾಸ್‌ಗೆ ಬಳಸುತ್ತಾರೆ. ಗ್ಯಾಸ್‌ನಿಂದ ಬರುವ ಸ್ಲರಿಯನ್ನು ಎರೆಹುಳು ಗೊಬ್ಬರ ಹಾಗೂ ಬೆಳೆಗೆ ನೇರವಾಗಿ ಬಳಸುತ್ತಾರೆ.

ಹೈನುಗಾರಿಕೆಯಲ್ಲಿ ಹಾಲು ಪ್ರತ್ಯಕ್ಷ ಆದಾಯ ನೀಡಿದರೆ, ಸಗಣಿ ಪರೋಕ್ಷ ಲಾಭ ನೀಡುತ್ತದೆ. ಸಗಣಿ ಬಳಸಿ ಗ್ಯಾಸ್ ಉತ್ಪಾದಿಸುತ್ತೇವೆ. ಜತೆಗೆ ಬೆಳೆಗೆ ಗೊಬ್ಬರವಾಗಿ ಬಳಸುತ್ತೇವೆ. ಗ್ಯಾಸ್ ಮತ್ತು ಗೊಬ್ಬರದ ಉಳಿತಾಯ ಲೆಕ್ಕ ಹಾಕಿದರೆ, ಹಾಲಿನ ಆದಾಯಕ್ಕಿಂತ ಹೆಚ್ಚಾಗುತ್ತದೆ’ ಎಂಬ ಉಪ ಆದಾಯದ ಲೆಕ್ಕಾಚಾರವನ್ನು ತೆಗೆದಿಡುತ್ತಾರೆ.

ನೀರಿನ ಮಿತ ಬಳಕೆ: ಒಂದು ಎಕರೆ ಕೃಷಿಗೆ, ಒಂದು ಕೊಳವೆಬಾವಿ ಇದೆ. 250 ಅಡಿಗೆ 2 ಇಂಚು ನೀರು ಸಿಕ್ಕಿದೆ. 16 ವರ್ಷಗಳಿಂದ ಇದೇ ಕೊಳವೆಬಾವಿ ಆಶ್ರಯಿಸಿ ಕೃಷಿ ಮಾಡುತ್ತಿದ್ದಾರೆ. ನೀರು ಎಷ್ಟಿದ್ದರೂ, ಮಿತವಾಗಿ ಬಳಸುತ್ತಾರೆ. ಜಮೀನಿನಲ್ಲಿ ಕೆಲವು ಕಡೆ ತುಂತುರು ನೀರಾವರಿ, ಇನ್ನೂ ಕೆಲವು ಕಡೆ ಹನಿ ನೀರಾವರಿ ಅಳವಡಿಸಿದ್ದಾರೆ. ಮಳೆಗಾಲದಲ್ಲಿ ಮಳೆ ನೀರಿನಲ್ಲೇ ಕೃಷಿ. ಅಗತ್ಯ ಬಿದ್ದಾಗ ಕೊಳವೆಬಾವಿ ನೀರು ಬಳಕೆ. ಮಣ್ಣಿಗೆ ಸೊಪ್ಪು, ಕಳೆಗಿಡಗಳನ್ನು ಮುಚ್ಚಿಗೆ ಮಾಡುತ್ತಾರೆ. ಬೆಳೆ ತ್ಯಾಜ್ಯವನ್ನು ಮಣ್ಣಿಗೆ ಹರಗಿಸಿ, ಮಣ್ಣಿನಲ್ಲಿ ನೀರು ಹಿಡಿದಿಟ್ಟುಕೊಳ್ಳುವ ಶಕ್ತಿ ವೃದ್ಧಿಸಿದ್ದಾರೆ. ಹೀಗಾಗಿ ನೀರಿನ ಬಳಕೆಯೂ ಮಿತವಾಗಿದೆ.


ಕೊಯ್ಲು ಮಾಡಿದ ಮಲ್ಲಿಗೆ ಹೂವು ಕಟ್ಟುತ್ತಿರುವ ಸಿದ್ದಪ್ಪ

ಸಿದ್ದಪ್ಪ ಅವರಿಗೆ ಈ ಒಂದು ಎಕರೆ ಕೃಷಿ ಭೂಮಿ ಜತೆಗೆ, ಒಂದಿಷ್ಟು ಒಣ ಭೂಮಿಯೂ ಇದೆ. ಆ ಜಾಗದಲ್ಲಿ ಎರಡು ಮೂರು ವರ್ಷಗಳಿಗೊಮ್ಮೆ (ಮಳೆ ಉತ್ತಮವಾಗಿ ಬಿದ್ದ ವರ್ಷದಲ್ಲಿ) ಸಾಂಪ್ರದಾಯಿಕ ಬೆಳೆಗಳಾದ ರಾಗಿ, ನವಣೆ, ಶೇಂಗಾ, ಸೂರ್ಯಕಾಂತಿ ಬೆಳೆಗಳನ್ನು ಬೆಳೆದು, ಮನೆ ಉಪಯೋಗಕ್ಕೆ ಬಳಸಿಕೊಳ್ಳುತ್ತಾರೆ. ಅಪ್ಪ ಮಾಡಿದ ಸಾಲದ ಬಗ್ಗೆ ಭಯವಿಟ್ಟುಕೊಂಡಿರುವ ಸಿದ್ದಪ್ಪ ಅವರು, ಕೃಷಿ ಸಾಲದ ಸಹವಾಸಕ್ಕೆ ಹೋಗಿಲ್ಲ. ಸೌಲಭ್ಯಗಳಿಗಾಗಿ ಸರ್ಕಾರದ ಸಹಾಯ ಧನಕ್ಕಾಗಿ ಅಲೆದಾಡಿಲ್ಲ. ಇದು ಸಿದ್ದಪ್ಪ ಅವರ ಸುಸ್ಥಿರ ಕೃಷಿಯ ವಿಶೇಷ !

‘ನೆಮ್ಮದಿಯ ಬದುಕಿಗೆ ಒಂದು ಎಕರೆ ಸಾಕು. ಆ ವಿಷಯದಲ್ಲಿ ನಾನೆಂದೂ ಸಾಹುಕಾರ ಸಿದ್ದಪ್ಪನೇ’ ಎಂದು ಹೆಮ್ಮೆಯಿಂದ ಹೇಳುತ್ತಾರೆ. ಸಿದ್ದಪ್ಪ ಅವರ ಸುಸ್ಥಿರ ಕೃಷಿ ಬದುಕಿನ ಯಶಸ್ಸಿನ ಹಿಂದೆ ಪತ್ನಿ ಮಹಾಂತಮ್ಮ ಹಾಗೂ ಪುತ್ರ ಸತೀಶ್ ಕುಮಾರ್ ಅವರ ನೆರವೂ ಇದೆ. ಸಿದ್ದಪ್ಪ ಅವರ ಸಂಪರ್ಕಕ್ಕಾಗಿ: 9108624041
*
ಕೊಟ್ಟಿಗೆ ಗೊಬ್ಬರದಿಂದ ರೋಗ ನಿಯಂತ್ರಣ
ಚಿತ್ರದುರ್ಗ ಜಿಲ್ಲೆಯಾದ್ಯಂತ ದಾಳಿಂಬೆ ಬೆಳೆ ಬ್ಲೈಟ್ ರೋಗದಿಂದ ನಾಶವಾಗುತ್ತಿದ್ದಾಗ, ಸಿದ್ದಪ್ಪನವರ ತೋಟದ ದಾಳಿಂಬೆ ಆರೋಗ್ಯವಾಗಿತ್ತು. ಇದಕ್ಕೆ ಕಾರಣ ಏನಿರಬಹುದು? ಎಂದು ಯೋಚಿಸಿದಾಗ, ದಾಳಿಂಬೆ ಗಿಡಗಳಿಗೆ ಕೊಟ್ಟಿಗೆ ಗೊಬ್ಬರ, ಜೀವಾಮೃತ ಮತ್ತು ಜೈವಿಕ ಗೊಬ್ಬರಗಳನ್ನು ಸಮರ್ಪಕವಾಗಿ ಕೊಟ್ಟಿದ್ದು ಬ್ಲೈಟ್ ನಿಯಂತ್ರಣಕ್ಕೆ ಕಾರಣ ಎಂದು ತಿಳಿದುಬಂದಿದೆ. ದಾಳಿಂಬೆ ಬೆಳೆಗೆ ಕಾಡುವ ಸೊರಗು ರೋಗಕ್ಕೂ ಕೊಟ್ಟಿಗೆ ಗೊಬ್ಬರ ಉತ್ತಮ ಔಷಧವಾಗಿದೆ. ಈ ಎರಡೂ ಅಂಶಗಳನ್ನು ಬಬ್ಬೂರು ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥರು ಹಾಗೂ ಹಿರಿಯ ವಿಜ್ಞಾನಿ ಡಾ ಎಸ್. ಓಂಕಾರಪ್ಪ ದೃಢಪಡಿಸುತ್ತಾರೆ.

ಚಿತ್ರಗಳು: ಗಿರಿಧರ್‌ ಎಂ.ಎಲ್‌., ಹಿರಿಯೂರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT