ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಣ್ಣ ಮಡಿಲಿನಲ್ಲಿ ಸ್ವಾವಲಂಬಿ ಬದುಕು

ಮಣ್ಣ ಮಡಿಲಿನಲ್ಲಿ ಸ್ವಾವಲಂಬಿ ಬದುಕು
Last Updated 23 ಡಿಸೆಂಬರ್ 2019, 19:30 IST
ಅಕ್ಷರ ಗಾತ್ರ

ಆತ ಟಕ್ ಟಕ್ ಎಂದು ಮಚ್ಚು ಹಿಡಿದು ಧೈರ್ಯವಾಗಿ ನಡೆ ಯುತ್ತಿದ್ದರು. ನೆಲದ ಮೇಲಲ್ಲ, ಗಾಳಿಯಲ್ಲಿ, ಮೂವತ್ತಡಿಯ ತೆಂಗಿನ ಮರವನ್ನಾಧರಿಸಿ!

ನೋಡ ನೋಡುತ್ತಿದ್ದಂತೆ ಎರಡೇ ನಿಮಿಷದಲ್ಲಿ ಮರದ ತುದಿಗೇರಿದರು. ಹತ್ತೇ ನಿಮಿಷದಲ್ಲಿ ಮರದ ತುಂಬ ಇದ್ದ ತೆಂಗಿನ ಕಾಯಿಗಳನ್ನು ಎಳೆನೀರನ್ನು ಇಳಿಸಿದರು. ಒಣಗಿದ ತೆಂಗಿನ ಹೆಡೆಯನ್ನು ಕತ್ತರಿಸಿ ಮರವನ್ನು ಸೋಸಿ ಕೆಳಗೆ ಒಗೆದು ನೆಲಕ್ಕಿಳಿದರು. ಮರ ಹತ್ತಲು ಬಳಸಿದ್ದ ಸಾಧನವನ್ನು ಮರದಿಂದ ಬೇರ್ಪಡಿಸಿ ‘ನೋಡಿ ಸರ‍್ರ್... ಅಂತಾ ಒಂದ ಮರಾ ಸ್ವಚ್ಛ ಮಾಡಿ ಮುಗ್ಸಿದೆ’ ಎಂದು ಹೆಮ್ಮೆಯಿಂದ ನಕ್ಕರು.

ಇದು ಮರ ಏರುವ ಕುಶಲಕರ್ಮಿ ಮೈಸೂರಿನ ಸಮೀಪದ ಇಬ್ಜಾರಿನ ಸ್ವಾಮಿಯವರ ನಿತ್ಯ ಸಾಹಸದ ಗಾಥೆ.

ಮನೆಯಲ್ಲಿನ ಬಡತನದ ಕಾರಣದಿಂದ ಬಾಲ್ಯದಲ್ಲಿ ಶಾಲೆಯ ಮೆಟ್ಟಿಲೇರದ ಸ್ವಾಮಿಗೆ ತೋಟ ಎಂಬ ಪಾಠಶಾಲೆಯಲ್ಲಿಯೇ ಕೃಷಿ ಕೌಶಲಗಳನ್ನು ಕಲಿತರು. ಪಕ್ಕದ ತೋಟದಲ್ಲಿ ಕೂಲಿ ಕೆಲಸಕ್ಕೆ ಬಂದ ಕೇರಳದ ಕೆಲಸಗಾರರೊಂದಿಗೆ ಬೆರೆತು ದುಡಿಯುತ್ತಿದ್ದ ಸ್ವಾಮಿಯವರಿಗೆ ಅವರು ತೆಂಗಿನ ಮರವನ್ನೇರಲು ಬಳಸುತ್ತಿದ್ದ ಸರಳಸಾಧನ ತುಂಬ ಆಕರ್ಷಕ ಸಂಗತಿಯಾಗಿತ್ತು. ‘ನೀನು ಸಾಲಿನೂ ಕಲ್ತಿಲ್ಲ ಜೀವನಕ್ಕಾಯ್ತದೆ ಇಟ್ಗಾ. ಮರಾ ಏರದು ಕಲ್ತಗಾ’ ಎಂದು ಅವರು ಸ್ವಾಮಿಯ ಕೈಗೆ ಒತ್ತಾಯಪೂರ್ವಕವಾಗಿ, ಉದಾರವಾಗಿ ಆ ಯಂತ್ರವನ್ನು ಕೊಟ್ಟು ಹೋದರು.

ಅಲ್ಲಿಯವರೆಗೆ ಹಗ್ಗದ ತಳೆಯನ್ನು ಕಾಲಿಗೆ ಸಿಕ್ಕಿಸಿ ಮರವೇರುತ್ತಿದ್ದ ಹದಿನೈದರ ಹರೆಯದ ಸ್ವಾಮಿಯವರಿಗೆ ಆ ಸಾಧನ ವರವಾಯ್ತು. ಮನೆಯ ತೋಟದ ತೆಂಗಿನ ಮರವನ್ನು ಏರಿ ಅಭ್ಯಾಸ ನಡೆಸಿದರು. ಊರಿನ ಅಕ್ಕ ಪಕ್ಕದ ತೋಟಗಳ ಮಾಲೀಕರು ಕಾಯಿ ಕೀಳಲು ಇವರನ್ನು ಕರೆಯಲಾರಂಭಿಸಿದರು.

ದುಡಿಯುವ ಹುಮ್ಮಸ್ಸು, ಕಾಯಿ ಕೀಳುವುದರೊಂದಿಗೆ ಮರವನ್ನು ಸೋಸುವುದು, ತೆಂಗಿನ ಮರಕ್ಕೆ ಪಾತಿ ಮಾಡುವುದು, ಗಿಡಗಳನ್ನು ನೆಡುವುದು ಕಳೆ ತೆಗೆಯುವುದು, ಉತ್ತುವುದು, ಬಿತ್ತುವುದು ಹೀಗೆ ಹಲವು ಬಗೆಯ ಕೆಲಸ ಕಲಿತು ನಿರಂತರವಾಗಿ ದುಡಿಮೆ ಆರಂಭಿಸಿದರು. ದುಡಿಮೆಯ ಹಣದಲ್ಲಿ ಒಂದೆಕರೆ ಭೂಮಿಯನ್ನು ಕೊಂಡರು. ಈಗ ಸ್ವಂತದ ಭೂಮಿಯಲ್ಲಿ ಕೃಷಿ ಕಾಯಕ ಮಾಡುತ್ತಲೇ ಕೂಲಿ ಕೆಲಸಕ್ಕೆ, ಮರವೇರುವ ಕೆಲಸಕ್ಕೆ ಹೋಗುತ್ತಿದ್ದಾರೆ. ಬಹಳ ವೇಗವಾಗಿ ಕೆಲಸ ಮಾಡುವ ಸ್ವಾಮಿಯವರು ತೆಂಗಿನ ತೋಟಗಳಲ್ಲಿ ಎತ್ತರದ ಮರವಾದರೆ ಒಂದು ದಿನಕ್ಕೆ ಐವತ್ತು ಮರ, ಮಧ್ಯಮ ಗಾತ್ರದ ಮರವಾದರೆ ನೂರು ಮರದಿಂದ ಕಾಯಿಗಳನ್ನು ಇಳಿಸುತ್ತಾರಂತೆ. ಎರಡು ವರ್ಷಗಳಿಂದ ಮೈಸೂರಿನಲ್ಲಿಯೂ ಹಲವೆಡೆ ಕೆಲಸ ಮಾಡುತ್ತಿದ್ದಾರೆ.

‘ಮೊದಲು ಹರಕುಬಟ್ಟೆಯನ್ನೇ ಮತ್ತ ಮತ್ತ ಹೊಲಿದು ಹಾಕಂತಿದ್ದಮಿ. ಹದಿನಾರು ವರಸಾ ನಿಯತ್ತಾಗಿ ದುಡದು ಭೂಮಿ, ಹಸು, ಬೈಕು, ಚಿನ್ನ ಎಲ್ಲಾ ತಕಂಡಿದಿನಿ. ತಂಗಿ ಮದ್ವಿ ಮಾಡಿದೀನಿ’ ಎಂದು ಸಂಕಷ್ಟದ ದಿನಗಳನ್ನು ದಾಟಿ ಬಂದಿದ್ದನ್ನು ಸ್ವಾಮಿ ನೆನಪಿಸಿಕೊಳ್ಳುತ್ತಾರೆ.

ಸ್ವಾಮಿ, ಯಾವ ಕೆಲಸ ಕೊಟ್ಟರೂ ಮಾಡುತ್ತಾರೆ. ಆದರೆ, ತೆಂಗಿನ ಮರದ ಕೆಲಸವನ್ನೇ ಹೆಚ್ಚಾಗಿ ಮಾಡುವುದು. ‘ಇಂಥದ್ದೇ ಕೆಲ್ಸಾ ಅಂತೇನಿಲ್ಲ. ಹೆಚ್ಗಿ ತೆಂಗಿನ ಮರದ ಕೆಲ್ಸಾ ಮಾಡ್ತಾ ಜೀವ್ನದಾಗೆ ಮ್ಯಾಲಕ್ಕೆ ಬಂದ ಬುಟ್ಟೆ. ಕಷ್ಟಾ ಪಟ್ಟು ಬೆವ್ರು ಹರ್ಸಿ ದುಡಿತಿನಿ. ಹೊಟ್ಟೆ ತುಂಬಾ ಊಟಾ ಬೇಕು ಅಷ್ಟೇಯ. ಚಟಾ ಗಿಟಾ ಮಾಡಾಕಿಲ್ಲಾ. ದಿನಕ್ಕೆ ಸರಾಸರಿ ಐನೂರಾದ್ರೂ ದುಡಿತೀನಿ..ಇನ್ನೂ ತಲೆ ಒಳ್ಗೆ ಭಾಳ ಕನಸದೆ’ ಎಂದು ಮುಗ್ಧವಾಗಿ ನಗೆ ಬೀರುತ್ತಾರೆ.

ಹೀಗೆ ಕೆಲಸ ಮಾಡುತ್ತಿರುವ ಸ್ವಾಮಿಯವರು ತಮ್ಮ ಒಂದೆಕರೆ ಹೊಲದಲ್ಲಿ ತೆಂಗು, ಕಾಕಡಾ ಬೆಳೆಯುತ್ತಿದ್ದಾರೆ. ಅಷ್ಟೇ ಅಲ್ಲ, ಮುಕ್ಕಾಲು ಎಕರೆ ಭೂಮಿಯನ್ನು ಲಾವಣಿ (ಗುತ್ತಿಗೆ) ಹಿಡಿದು ಬಿತ್ತನೆ ಪದ್ದತಿಯಲ್ಲಿ ಭತ್ತ ಬೆಳೆಯುತ್ತಿದ್ದಾರೆ. ಮಣ್ಣ ಮಡಿಲಿನಲ್ಲಿ ದುಡಿಯುತ್ತಲೇ ಹೊನ್ನಿನಂತಹ ಬಾಳು ಕಟ್ಟ ಬಹುದೆನ್ನುವುದಕ್ಕೆ ಸಾಕ್ಷಿ ಎಂಬಂತೆ ಸ್ವಾಮಿಯವರು ಕಾಣುತ್ತಾರೆ.

ಮರವೇರುವ ಸರಳ ಸಾಧನ
ಎರಡು ಎಂಟು ಎಂ ಎಂ ಬಾರ್ ಅನ್ನು ಒಂದಡಿ ಅಗಲವಿರುವಂತೆ ನಾಲ್ಕೂವರೆ ಅಡಿ ಉದ್ದವಿರುವಂತೆ ವೆಲ್ಡಮಾಡಲಾಗಿದೆ. ಬಾರ್ಗಳ ಮೇಲ್ಭಾಗದಲ್ಲಿ ಮರಗಳನ್ನು ವೃತ್ತಾಕಾರವಾಗಿ ಬಿಗಿಯಬಲ್ಲ ಅರ್ಧ ಚಂದ್ರಾಕೃತಿಯ ರಬ್ಬರ್ ಇದೆ. ಅದರ ಹೊರಭಾಗದಲ್ಲಿ ಉದ್ದನೆಯ ತಿರುಪುಗಳುಳ್ಳ ತಂತಿಗಳಿವೆ. ತಂತಿಯ ತುದಿಗೆ ಸ್ಪ್ರಿಂಗ್ ಅಳವಡಿಸಿ ಕೊನೆಯಲ್ಲಿ ಕೊಕ್ಕೆಯನ್ನಿಟ್ಟಿದ್ದಾರೆ. ಬಾರುಗಳ ಕೆಳಭಾಗದಲ್ಲಿ ನಿಲ್ಲಲು ಸಾಕಾಗುವಷ್ಟು ಕಬ್ಬಿಣದ ಪಟ್ಟಿಗಳಿವೆ. ಅದರ ಮೇಲೆ ಕಾಟನ್ ಬೆಲ್ಟಿದೆ. ಅದಕ್ಕೂ ಎರಡಿಂಚು ಮೇಲೆ ’ವಿ’ ಆಕಾರದ ತುದಿಗೆ ಅರ್ಧ ಚಂದ್ರಾಕೃತಿ ಇರುವ ಕಬ್ಬಿಣದ ಸರಳಿದೆ.

ತೆಂಗಿನಮರಕ್ಕೆ ಅದನ್ನು ಜೋಡಿಸಿ ತಂತಿಯನ್ನು ಮರದ ಸುತ್ತಲೂ ಸುತ್ತಿ ಬಾರಿಗೆ ಜೋಡಿಸಿರುವ ಕೊಂಡಿಯ ಮೂಲಕ ಹಾಯಿಸಿ ಕಾಲಿನ ಬಳಿ ಸಿಕ್ಕಿಸಿದರೆ ಆ ಸಾಧನ ಮರವನ್ನು ಹದವಾದ ಬಿಗಿಯಲ್ಲಿ ಕಚ್ಚಿ ಹಿಡಿಯುತ್ತದೆ. ಇಂತಹ ಸಾಧನ ಎಡಗಾಲಿಗೊಂದು ಬಲಗಾಲಿಗೊಂದರಂತಿರುತ್ತದೆ. ಕಬ್ಬಿಣದ ಪಟ್ಟಿಗಳ ಮೇಲೆ ನಿಂತು ಕಾಟನ್ ಬೆಲ್ಟಿಗೆ ಕಾಲು ತೂರಿಸಿ ಮೆಟ್ಟಿಲೇರಿದಂತೆ ಸಲೀಸಾಗಿ ಮರವೇರಬಹುದು. ( ಅದು ಚಲಿಸುವ ಮೆಟ್ಟಿಲಂತೆ ಅನುಕೂಲ ಒದಗಿಸುತ್ತದೆ)

ಸ್ವಾಮಿ ಸೂತ್ರ
ತೆಂಗಿನ ಮರಕ್ಕೆ ವರ್ಷಕ್ಕೊಮ್ಮೆ ಜುಲೈ ತಿಂಗಳಲ್ಲಿ ಬುಡ ಮಾಡಬೇಕು. ತೆಂಗಿನ ಮರದಿಂದ ಒಂದು ಅಡಿ ದೂರದಲ್ಲಿ ಒಂದಡಿ ಆಳ ಒಂದಡಿ ಅಗಲವಿರುವಂತೆ ವೃತ್ತಾಕಾರವಾಗಿ ಅಡ್ಡ ಬಂದ ತೆಂಗಿನ ಬೇರನ್ನು ಕತ್ತರಿಸುತ್ತಾ ತಗ್ಗು ತೆಗೆಯಬೇಕು. ಮುಚ್ಚಿಗೆಗೆ ದಡ್ಡಿಗೊಬ್ಬರ ಬೇವಿನ ಹಿಂಡಿ, ಮಾವಿನ ಸೊಪ್ಪು, ತೊಗಟೆ ಸೊಪ್ಪು, ಹತ್ತಿಸೊಪ್ಪು, ಉಪ್ಪು ಹಾಕಬೇಕು. ತೆಂಗಿನ ಗರಿ, ನಾರು ಇವುಗಳನ್ನೂ ಕೊಚ್ಚಿ ಹಾಕಬೇಕು. ಇವುಗಳನ್ನು ಹಾಕಿ ಮೇಲಿನಿಂದ ಮಣ್ಣು ಮುಚ್ಚಿ. ‘ಐದು ತಿಂಗಳು ಮಳೆ ನೀರು ಬಿದ್ದಬುಟ್ರೆ ಸಾಕು ಒಳ್ಗೆ ತ್ವಾವ ಹಿಡಕಂಡಿರ್ತದೆ. ಚೆಂದಾಗಿ ಫಸಲು ಬರ್ತದೆ’ ಎನ್ನುತ್ತಾರೆ ಸ್ವಾಮಿ.

ಸಂಪರ್ಕ ಸಂಖ್ಯೆ: 9844253258(ಸಂಜೆ 7 ರಿಂದ ರಾತ್ರಿ 9ರ ನಡುವೆ ಲಭ್ಯ).

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT