ಗ್ರಾಮೀಣ ಭಾಗದಲ್ಲಿ ಸಾಂಪ್ರದಾಯಿಕ ಶೈಲಿಯ ಧಾನ್ಯ ಸಂಗ್ರಹಣೆ ಇಂದು ಅಪರೂಪವಾಗುತ್ತಿದೆ. ಮೂಡೆ, ವಾಡೆ, ಪಣತಗಳು ಕಾಣೆಯಾಗುತ್ತಿವೆ. ಅವುಗಳಲ್ಲಿ ಧಾನ್ಯ ಸಂರಕ್ಷಿಸಿಕೊಳ್ಳುವ ಸಮಯ ಹಾಗೂ ನೈಪುಣ್ಯವೂ ಇಲ್ಲದಂತಾಗಿದೆ. ಪರಿಣಾಮವಾಗಿ ಕಾಳುಗಳ ರಕ್ಷಣೆಗೆ ರಾಸಾಯನಿಕ ಮಾತ್ರೆಗಳು, ಪುಡಿಗಳ ಬಳಕೆ ಹೆಚ್ಚಾಗಿದೆ.
ಕೆಲವು ರೈತರು ಇದಕ್ಕಿಂತ ವಿಶಿಷ್ಟವಾದ ಸಂಪ್ರದಾಯವನ್ನು ಇತ್ತೀಚೆಗೆ ರೂಢಿಸಿಕೊಳ್ಳುತ್ತಿದ್ದಾರೆ. ಬಳಸಿ ಬಿಸಾಡಿದ ಪ್ಲಾಸ್ಟಿಕ್ ಶೀಷೆ, ಕ್ಯಾನ್ಗಳನ್ನು ಧಾನ್ಯ ತುಂಬಿಟ್ಟುಕೊಳ್ಳುವಂತಹ ಸರಳ ವಿಧಾನವನ್ನು ಅನುಸರಿಸುತ್ತಿದ್ದಾರೆ. ಈ ವಿಧಾನದಲ್ಲಿ ಯಾವುದೇ ರಾಸಾಯನಿಕ ಪುಡಿ, ಮಾತ್ರೆಗಳನ್ನು ಬಳಸುವುದಿಲ್ಲ.
ಚಿಕ್ಕ ಕಂಠದ ಬಾಟಲ್ಗಳಲ್ಲಿ ಭದ್ರವಾಗಿರಿಸಿದರೆ ಬಹುಕಾಲದವರೆಗೆ ಧಾನ್ಯಗಳನ್ನು ಸಂಗ್ರಹಿಸಿಡಬಹುದು. ಕಾಳುಗಳಿಗೆ ಸ್ವಲ್ಪ ಉಪ್ಪು ಸೇರಿಸಿದರೆ, ಕಾಳುಗಳು ಮತ್ತಷ್ಟು ಸುರಕ್ಷಿತವಾಗಿರುತ್ತವೆ. ಚಿತ್ರದುರ್ಗ ಜಿಲ್ಲೆಯ ಹೊಸದುರ್ಗ ಭಾಗದ ಕೆಲವು ರೈತರು ಇಂಥ ಧಾನ್ಯ ಸಂಗ್ರಹ ವಿಧಾನವನ್ನು ಅನುಸರಿಸುತ್ತಿದ್ದಾರೆ.