ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟಿಪ್ಪುವಿನ ಬೇಸಿಗೆ ಅರಮನೆ

Last Updated 27 ಜನವರಿ 2019, 20:00 IST
ಅಕ್ಷರ ಗಾತ್ರ

ಇಂಡೊ–ಇಸ್ಲಾಮಿಕ್‌ ವಾಸ್ತು ಶೈಲಿಯಲ್ಲಿ ರಚನೆಯಾಗಿರುವ ‘ಟಿಪ್ಪು ಅರಮನೆ’ ನಗರದ ಪ್ರಮುಖ ಪಾರಂಪರಿಕ ಕಟ್ಟಡ. ಐತಿಹಾಸಿಕವಾಗಿ ಅತ್ಯಂತ ಮಹತ್ವವನ್ನೂ ಹೊಂದಿರುವ ಪ್ರವಾಸಿ ತಾಣ.

ನಗರದ ಕೆ.ಆರ್‌. ಮಾರುಕಟ್ಟೆಗೆ ಇದು ಸಮೀಪದಲ್ಲಿದೆ. ಟಿಪ್ಪುವಿನ ಬೇಸಿಗೆ ಅರಮನೆ ಎಂದೇಇದನ್ನು ಕರೆಯಲಾಗುತ್ತದೆ. ಬಹುತೇಕ ಮರ ಮತ್ತು ಮಣ್ಣಿನ ಗಾರೆಯಿಂದ ನಿರ್ಮಿಸಲಾಗಿರುವ ಈ ಕಟ್ಟಡ ಪರಿಸರ ಸ್ನೇಹಿಯೂ ಹೌದು. ಇಡೀ ಕಟ್ಟಡಕ್ಕೆ ಸಸ್ಯಮೂಲದ (ಹರ್ಬಲ್‌) ಬಣ್ಣವನ್ನು ಬಳಸಿರುವುದು ವಿಶೇಷ. ಈಗಲೂ ಈ ನೈಸರ್ಗಿಕ ಬಣ್ಣದ ಗುರುತುಗಳು ಕಟ್ಟಡದ ಕೆಲ ಭಾಗಗಳಲ್ಲಿ ಇವೆ.

ಶ್ರೀರಂಗಪಟ್ಟಣದ ದರಿಯಾ ದೌಲತ್‌ನಷ್ಟು ವಿಶಾಲವಲ್ಲದ ಬೆಂಗಳೂರಿನ ಈ ಅರಮನೆ ಪ್ರಶಾಂತ ತಾಣ. ಕೆ.ಆರ್‌. ಮಾರುಕಟ್ಟೆಯ ಜನದಟ್ಟಣೆ, ವಾಹನದಟ್ಟಣೆಯ ನಡುವೆಯೂ ತನ್ನತನವನ್ನು ಉಳಿಸಿಕೊಂಡಿರುವ ಬೇಸಿಗೆ ಅರಮನೆ ಪ್ರವೇಶಿಸಿದರೆ ಸಾಕು ತಂಪಾದ, ಆಹ್ಲಾದಕರ ವಾತಾವರಣ ಅನುಭವಕ್ಕೆ ಬರುತ್ತದೆ.

ಟಿಪ್ಪು ಸುಲ್ತಾನ್‌, ಮೈಸೂರು ಸಂಸ್ಥಾನದ ರಾಜರು, ಬ್ರಿಟಿಷ್‌ ಕಮಿಷನರ್‌ಗಳು, ದಿವಾನರು... ಹೀಗೆ ಹಲವರು ತಮ್ಮ ಆಡಳಿತಾವಧಿಯಲ್ಲಿ ಈ ಅರಮನೆಯನ್ನು ಬಳಸಿದ್ದಾರೆ. ಬೆಂಗಳೂರಿನ ನಗರೀಕರಣಕ್ಕೆ ಈ ಅರಮನೆಯ ಕೊಡುಗೆಯೂ ಅಪಾರ.

ಇದು ಟಿಪ್ಪುವಿನ ವಿಶ್ರಾಂತಿ ತಾಣವಷ್ಟೇ ಆಗಿರಲಿಲ್ಲ. ಇಲ್ಲಿ ದರ್ಬಾರ್‌ ಕೂಡ ನಡೆಯುತ್ತಿತ್ತು. ಪ್ರತ್ಯೇಕ ದರ್ಬಾರ್‌ ಹಾಲ್‌ ಕೂಡ ಇದೆ. ನಾಲ್ಕು ಚಿಕ್ಕ ಕೋಣೆಗಳೂ ಇಲ್ಲಿವೆ. 1808ರಲ್ಲಿ ಮುಮ್ಮಡಿ ಕೃಷ್ಣರಾಜ ಒಡೆಯರ್‌ ಅವರು ಇದೇ ಅರಮನೆಯಲ್ಲಿ ಬೆಂಗಳೂರಿನ ಪ್ರಜೆಗಳ ಭೇಟಿಗೆ ಅವಕಾಶ ನೀಡಿದ್ದರು ಎಂಬುದು ಇತಿಹಾಸದ ಪುಟಗಳಲ್ಲಿ ದಾಖಲಾಗಿವೆ.

ಅರಮನೆಯ ಒಳಭಾಗ
ಅರಮನೆಯ ಒಳಭಾಗ

ಕೋಟೆಯೊಳಗೆ ಅರಮನೆ: ಚಿಕ್ಕದೇವರಾಜ ಒಡೆಯರ್‌ (1672–1704) ಕಾಲದಲ್ಲಿ ನಿರ್ಮಿತವಾದ ಅಂಡಾಕಾರದ ಕೋಟೆಯನ್ನು (ಓವೆಲ್‌ ಫೋರ್ಟ್‌) ಹೈದರಾಲಿ 1761ರಲ್ಲಿ ಕಲ್ಲಿನ ಕೋಟೆಯನ್ನಾಗಿ ಪರಿವರ್ತಿಸಿದ್ದರು. ಈ ಕೋಟೆಯ ಒಳಭಾಗದಲ್ಲಿ ಹೈದರಾಲಿ ಅರಮನೆ ನಿರ್ಮಾಣ ಕಾರ್ಯಕ್ಕೆ 1781ರಲ್ಲಿ ಚಾಲನೆ ನೀಡಿದ್ದರು. ಆದರೆ 1782ರಲ್ಲಿಯೇ ಹೈದರ್‌ ಕೊನೆಯುಸಿರೆಳೆದರು. ಹೈದರಾಲಿಯ ಪುತ್ರ ಟಿಪ್ಪುಸುಲ್ತಾನ್‌ ಈ ಕಾರ್ಯವನ್ನು ಮುಂದುವರೆಸಿ 1791ರಲ್ಲಿ ಪೂರ್ಣಗೊಳಿಸಿದರು. ಎರಡಂತಸ್ತಿನ ಅರಮನೆ ಟಿಪ್ಪುವಿನ ಬೇಸಿಗೆ ಅರಮನೆ ಆಯಿತು.

ಸುಂದರ ಕೆತ್ತನೆಯ ಕಂಬಗಳು, ಕಮಾನುಗಳು, ಬಾಲ್ಕನಿಗಳನ್ನು ಹೊಂದಿರುವ ಈ ಅರಮನೆ ಬಹುತೇಕ ತೇಗದ ಮರದಿಂದ ನಿರ್ಮಿಸಲಾಗಿದೆ. ಇಲ್ಲಿ 160 ಆಧಾರ ಕಂಬಗಳಿದ್ದು, ಅದರಲ್ಲಿ ಕೆಲವು ಮೇಲಂತಸ್ತಿನ ಮೇಲ್ಛಾವಣಿಯನ್ನು ಸ್ಪರ್ಶಿಸಿವೆ.

ಟಿಪ್ಪುವಿನ ನಂತರ ಬ್ರಿಟಿಷರ ವಶಕ್ಕೆ: ನಾಲ್ಕನೇ ಆಂಗ್ಲೋ–ಮೈಸೂರು ಯುದ್ಧದಲ್ಲಿ ಟಿಪ್ಪು ಸುಲ್ತಾನ್‌ ಮಡಿದ (1799) ನಂತರ ಈ ಅರಮನೆಯನ್ನು ಬ್ರಿಟಿಷರು ವಶಕ್ಕೆ ತೆಗೆದುಕೊಂಡರು. 1831ರಲ್ಲಿ ಮೈಸೂರಿನಲ್ಲಿ ಕಮಿಷನರ್‌ಗಳ ಆಳ್ವಿಕೆ ಪ್ರಾರಂಭವಾದ ಮೇಲೆ ಇದು ಬ್ರಿಟಿಷ್‌ ಆಡಳಿತದ ಕೇಂದ್ರ ಕಚೇರಿಯಾಯಿತು. ಕಮಿಷನರ್‌ ಎಲ್‌.ಬಿ. ಬೌರಿಂಗ್‌ ಬೆಂಗಳೂರಿನಲ್ಲಿ ಅಠಾರ ಕಚೇರಿಯನ್ನು 1868ರಲ್ಲಿ ನಿರ್ಮಿಸಿದ (ಅದೀಗ ಹೈಕೋರ್ಟ್‌ ಕಟ್ಟಡ) ಬಳಿಕ, ಬ್ರಿಟಿಷರ ಆಡಳಿತದ ಕೇಂದ್ರ ಕಚೇರಿ ಅಠಾರ ಕಚೇರಿಗೆ ಸ್ಥಳಾಂತರವಾಯಿತು. 1956ರಲ್ಲಿ ವಿಧಾನಸೌಧ ನಿರ್ಮಾಣದ ಬಳಿಕ ಆಡಳಿತ ಕಾರ್ಯಾಲಯಗಳು ವಿಧಾನಸೌಧಕ್ಕೆ ಸ್ಥಳಾಂತರವಾದವು.

ಈ ಅರಮನೆಯಲ್ಲೀಗ ಟಿಪ್ಪು ಕಾಲದ ಅಪರೂಪದ ಭಾವಚಿತ್ರಗಳು, ಟಿಪ್ಪು ತಯಾರಿಸಿದ ರಾಕೆಟ್‌ನ (ಆಕಾಶ ಬಾಣ) ಪ್ರದರ್ಶನಾಲಯವೂ ಇದೆ. ಇಲ್ಲಿನ ಗೋಡೆಗೆ ಹೊಂದಿಕೊಂಡಿರುವ ಶಾಸನದಲ್ಲಿ ಈ ಅರಮನೆಯನ್ನು ‘ಸಂತೋಷದ ಆವಾಸ ಹಾಗೂ ಸ್ವರ್ಗದ ವೈರಿ’ ಎಂದು ಬಣ್ಣಿಸಲಾಗಿದೆ. ಇದರ ಆವರಣದಲ್ಲಿ ವಿಶಾಲವಾದ ಸಸ್ಯೋದ್ಯಾನವೂ ಇದೆ. ಅರಮನೆಯ ಕಟ್ಟಡದ ಕೆಲ ಭಾಗ ಶಿಥಿಲಗೊಳ್ಳುತ್ತಿದೆ. ಗೋಡೆಗಳು ಸೊರಗಿವೆ. ಬಿರುಕು ಕಾಣಿಸಿಕೊಂಡಿವೆ ಪಾರಂಪರಿಕ ಕಟ್ಟಡದ ಮೂಲ ಸ್ಥಿತಿಗೆ ಧಕ್ಕೆಯಾಗದಂತೆ ತುರ್ತಾಗಿ ದುರಸ್ತಿ ಕಾರ್ಯ ಆಗಬೇಕಿದೆ.

ಅರಮನೆ ಪ್ರವೇಶ ಶುಲ್ಕ ₹ 25.

**

ಬೆಂಗಳೂರಿನಲ್ಲಿ ಇಂಡೋ– ಸಾರ್ಸನಿಕ್‌ ಶೈಲಿಯ ಪಾರಂಪರಿಕ ಕಟ್ಟಡಗಳು ಕಡಿಮೆ. ಬೆಂಗಳೂರು ಮತ್ತು ರಾಜ್ಯದ ಇತಿಹಾಸದಲ್ಲಿ ತನ್ನದೇ ಆದ ಮಹತ್ವದ ಸ್ಥಾನ ಹೊಂದಿರುವ ಬೆಂಗಳೂರಿನ ಟಿಪ್ಪು ಅರಮನೆಗೆ ಇತಿಹಾಸದ ಪುಟಗಳಲ್ಲಿ ಸಿಗಬೇಕಾದ ಸ್ಥಾನ ಸಿಕ್ಕಿಲ್ಲ. ಇತಿಹಾಸದ ಪ್ರಮುಖ ಪುಸ್ತಕಗಳಲ್ಲಿ ಈ ಅರಮನೆಯ ಬಗ್ಗೆಗಿನ ಉಲ್ಲೇಖಗಳಿರುವುದು ಕಡಿಮೆ.
– ಸುರೇಶ್‌ ಮೂನ, ಇತಿಹಾಸಕಾರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT