ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೊಡ್ಡ ಗಣಪ, ಬಸವನ ಗುಡಿ

Last Updated 20 ಜನವರಿ 2019, 19:45 IST
ಅಕ್ಷರ ಗಾತ್ರ

ಬೆಂಗಳೂರಿನಲ್ಲಿರುವ ಧಾರ್ಮಿಕ ತಾಣಗಳಲ್ಲಿ ಬಸವನಗುಡಿಯಲ್ಲಿರುವ ದೊಡ್ಡ ಬಸವನಗುಡಿ ಮತ್ತು ದೊಡ್ಡ ಗಣಪತಿ ದೇವಸ್ಥಾನಗಳು ವಿಶೇಷ ಸ್ಥಾನ ಗಳಿಸಿವೆ. ನಗರದ ಮೂಲ ಕುರುಹುಗಳನ್ನು ಈ ದೇವಾಲಯಗಳು ಪ್ರತಿಬಿಂಬಿಸುತ್ತಿವೆ.

ಕಡಲೆಕಾಯಿ ಪರಿಷೆ, ಗಣೇಶೋತ್ಸವ...ಮುಂತಾದ ಸಾಂಸ್ಕೃತಿಕ, ಧಾರ್ಮಿಕ ಕಾರ್ಯಕ್ರಮಗಳಿಗೆ ನೆಲೆಯಾಗಿರುವ ಬಸವನಗುಡಿ ಪ್ರದೇಶದ ಮೂಲ ಹೆಸರು ಸುಂಕೇನಹಳ್ಳಿ. ಈಗಲೂ ದೇವಸ್ಥಾನವಿರುವ ಪ್ರದೇಶವನ್ನು ಸುಂಕೇನಹಳ್ಳಿ ಎಂದೇ ಕರೆಯಾಲಾಗುತ್ತದೆ.

ಬೆಳೆಯುತ್ತಿದ್ದಾನೆ ದೊಡ್ಡ ಗಣಪ!: ಸುಮಾರು 5 ಎಕರೆಯಲ್ಲಿ ಎರಡೂ ದೇವಾಲಯಗಳನ್ನು ನಿರ್ಮಿಸಲಾಗಿದೆ. ಬಸವನಗುಡಿ ರಸ್ತೆ ಮೂಲಕ ಹೋದರೆ ಮೊದಲು ದೊಡ್ಡ ಗಣಪತಿ ದೇವಸ್ಥಾನವೇ ಸಿಗುತ್ತದೆ. ಕ್ರಿ.ಶ 1536ರಲ್ಲಿ ಮಾಗಡಿಯ ಕೆಂಪೇಗೌಡರು ಈ ದೇವಸ್ಥಾನ ನಿರ್ಮಿಸಿದರೆಂದು ಹೇಳಲಾಗಿದೆ. 1983ರ ನಂತರ ದೇವಸ್ಥಾನವು ಹಲವು ಬಾರಿ ಜೀರ್ಣೋದ್ಧಾರಗೊಂಡಿದೆ.

ದೊಡ್ಡ ಗಣಪತಿ ವಿಗ್ರಹ
ದೊಡ್ಡ ಗಣಪತಿ ವಿಗ್ರಹ

ಗಣಪತಿಯ ಮೂಲ ವಿಗ್ರಹ ಇರುವ ಗರ್ಭಗುಡಿ ಮಾತ್ರ ಕೆಂಪೇಗೌಡರ ಕಾಲದಲ್ಲಿ ನಿರ್ಮಾಣವಾಗಿದೆ. ಆವರಣ, ಹೊರಗಿನ ಕಟ್ಟಡ, ಗೋಪುರ... ಹೀಗೆ ಎಲ್ಲವನ್ನು ಮುಜರಾಯಿ ಇಲಾಖೆ ನಿರ್ಮಿಸಿದೆ. ಒಂದೇ ಕಲ್ಲಿನಲ್ಲಿ ಈ ವಿಗ್ರಹವನ್ನು ಕೆತ್ತಲಾಗಿದ್ದು, 11 ಅಡಿ ಉದ್ದ ಮತ್ತು 16 ಅಡಿ ಅಗಲವಿದೆ. ಶಂಖ, ಚಕ್ರ, ಮುರಿದ ದಂತ ಮತ್ತು ಪ್ರಸಾದವನ್ನು ಹಿಡಿದುಕೊಂಡಿರುವ ಚತುರ್ಭುಜ ಗಣಪತಿಯನ್ನು ಕುಳಿತಿರುವ ಭಂಗಿಯಲ್ಲಿ ಆಕರ್ಷಕವಾಗಿ ಕೆತ್ತಲಾಗಿದೆ. ಕಾಲುಗಳಲ್ಲಿ ಕಡಗ, ಕತ್ತಿನಲ್ಲಿ ನಾಲ್ಕು ಸರಗಳು, ಕಿರೀಟ ಮತ್ತು ಅಗಲವಾದ ಕಿವಿಗಳು, ಹೊಟ್ಟೆಯ ಮೇಲಿರುವ ನಾಗರಹಾವಿನ ಕೆತ್ತನೆಗಳು ಅಂದಿನ ಶಿಲ್ಪ ಕಲಾ ನೈಪುಣ್ಯಕ್ಕೆ ಕನ್ನಡಿ ಹಿಡಿದಂತಿವೆ. ‌

ಗಮನ ಸೆಳೆಯುವ ಬೃಹತ್ ನಂದಿ ವಿಗ್ರಹ: ಸುಂಕೇನಹಳ್ಳಿಗೆ ಬಸವನಗುಡಿ ಎಂದು ಹೆಸರು ಬರಲು ಇಲ್ಲಿನ ದೊಡ್ಡ ಬಸವನಗುಡಿ ಕಾರಣ. ಈ ದೇವಸ್ಥಾನ ಕ್ರಿ.ಶ 1537ರಲ್ಲಿ ನಿರ್ಮಾಣವಾಗಿದ್ದು, ಇದನ್ನೂ ಕೆಂಪೇಗೌಡರೇ ನಿರ್ಮಿಸಿದ್ದಾರೆ ಎಂದು ಹೇಳಲಾಗಿದೆ. ಏಕಶಿಲೆಯಲ್ಲಿ ನಿರ್ಮಿಸಿರುವ ಅಪರೂಪದ ನಂದಿ ವಿಗ್ರಹಗಳಲ್ಲಿ ಇದೂ ಒಂದಾಗಿದೆ.

ಸುಂಕೇನಹಳ್ಳಿಯ ರೈತರೊಬ್ಬರ ಎತ್ತೊಂದು ಇಲ್ಲಿ ಬೆಳೆಯುತ್ತಿದ್ದ ಕಡಲೆಕಾಯಿ ಬೆಳೆಯನ್ನು ರಾತ್ರಿ ಹೊತ್ತಲ್ಲಿ ಮೇಯುತ್ತಿತ್ತಂತೆ, ಅದನ್ನು ನೋಡಿದ ಕಾವಲುಗಾರನೊಬ್ಬ, ಇದನ್ನು ಊರಿನವರಿಗೆ ತೋರಿಸಬೇಕೆಂದು, ಜನರನ್ನು ಕರೆದುಕೊಂಡು ಬಂದ ನಂತರ ಮೇವು ತಿನ್ನುತ್ತಿದ್ದ ಎತ್ತು ಹಾಗೆಯೇ ಶಿಲೆಯಾಯಿತಂತೆ. ನಂತರ ಜನರು ಈ ವಿಗ್ರಹಕ್ಕೆ ಪೂಜೆ ಮಾಡುತ್ತಿದ್ದರಂತೆ, ಇಲ್ಲಿಗೆ ಬೇಟೆಗಾಗಿ ಬಂದ ಕೆಂಪೇಗೌಡರು, ಇಲ್ಲಿನ ಜನರು ಈ ವಿಗ್ರಹಕ್ಕೆ ಪೂಜೆ ಸಲ್ಲಿಸುತ್ತಿರುವುದನ್ನು ಕಂಡು, ಈ ದೇವಸ್ಥಾನ ನಿರ್ಮಿಸಿದರು. ಈ ಶಿಲೆಯೇ ಬೆಳೆದು ಇಷ್ಟು ದೊಡ್ಡದಾಗಿದೆ ಎಂಬ ಕತೆಯಿದೆ.

ನಂದಿ ವಿಗ್ರಹ 12 ಅಡಿ ಎತ್ತರವಿದ್ದು, 20 ಅಡಿ ಉದ್ದ, 11 ಅಡಿ ಅಗಲವಿದೆ. ವಿಗ್ರಹದ ಕತ್ತಿನಲ್ಲಿರುವ ಗಂಟೆ, ಸರ, ಹಾರಗಳ ಕೆತ್ತನೆಗಳು ಗಮನ ಸೆಳೆಯುತ್ತವೆ. ಬೆನ್ನಿನ ಮೇಲೆ ಹೊದಿಕೆ ಹೊದಿಸಿರುವಂತೆ ತೋರುವ ಕೆತ್ತನೆಗಳೂ ಆಕರ್ಷಿಸುತ್ತವೆ. 16ನೇ ಶತಮಾನದ ದ್ರಾವಿಡ ಶೈಲಿಯ ಶಿಲ್ಪಕಲಾ ಚಾತುರ್ಯಕ್ಕೆ ಈ ನಂದಿ ವಿಗ್ರಹ ಕನ್ನಡಿ ಹಿಡಿದಂತಿದೆ. ಚೌಕಾಕಾರದ ಕಲ್ಲಿನ ವೇದಿಕೆ ಮೇಲೆ ಈ ವಿಗ್ರಹವಿದೆ.

ವೃಷಭಾವತಿ ನದಿಯ ಉಗಮ ಸ್ಥಾನ: ನಂದಿಯ ಬಲ ಪಾದವನ್ನು ವೀಣೆ ನುಡಿಸುತ್ತಿರುವಂತೆ, ಈ ವೀಣೆ ತಾವರೆ ಹೂವಿನ ಮೇಲೆ ಇರುವಂತೆ ಕೆತ್ತಲಾಗಿದೆ. ಈ ವೀಣೆಯ ಕೆಳಗೆ ನೀರಿನ ಸೆಲೆಯಿದ್ದು, ಇದೇ ವೃಷಭಾವತಿ ನದಿಯ ಉಗಮಸ್ಥಾನ ಎಂದು ಹೇಳಲಾಗಿದೆ.

‘ಇದು ವೃಷಭಾವತಿ ನದಿಯ ಉಗಮ ಸ್ಥಾನ ಎಂಬುದಕ್ಕೆ ದೇವಸ್ಥಾನದ ಪಕ್ಕದಲ್ಲೇ ಇದ್ದ ಕಲ್ಯಾಣಿಯೇ ಸಾಕ್ಷಿ. ಕಲ್ಯಾಣಿಗೆ ಹೊಂದಿಕೊಂಡಂತೆ ಕೆರೆಯೂ ಇತ್ತು. ಈಗ ಆ ಪ್ರದೇಶವೆಲ್ಲಾ ಕಾಲೇಜು, ಉದ್ಯಾನವಾಗಿ ಬದಲಾಗಿದೆ. ನಾನು ಚಿಕ್ಕವನಾಗಿದ್ದಾಗ ಇಲ್ಲಿ ಕೆರೆ ಇದ್ದುದ್ದನ್ನು ನೋಡಿದ್ದೇನೆ’ ಎನ್ನುತ್ತಾರೆ ದೇವಸ್ಥಾನದ ಪ್ರಧಾನ ಅರ್ಚಕ ಸುನೀಲ್‌ಕುಮಾರ್.

ನಂದಿ ವಿಗ್ರಹದ ಬಲಪಾದದ ಕೆಳಗೆ ಇರುವ ಕಲ್ಲಿನ ವೀಣೆ
ನಂದಿ ವಿಗ್ರಹದ ಬಲಪಾದದ ಕೆಳಗೆ ಇರುವ ಕಲ್ಲಿನ ವೀಣೆ

ದೇವಸ್ಥಾನದಲ್ಲಿ ಒಟ್ಟು 32 ಸ್ಥಂಭಗಳಿದ್ದು, ಎಲ್ಲ ಸ್ಥಂಭಗಳ ಮೇಲೆ ಬರಹಗಳಿವೆ. ಸುಮಾರು 40 ಅಡಿ ಉದ್ದ ಆವರಣವಿದ್ದು, ಭಕ್ತರು ತಂಗುವುದಕ್ಕೆ ವ್ಯವಸ್ಥೆ ಮಾಡಿದಂತಿದೆ. ಹೊರಗಿನಿಂದ ನೋಡಿದರೆ ದೇವಸ್ಥಾನದ ಮೇಲ್ಛಾವಣಿ ಸುತ್ತಲೂ ಶೈವ ಪರಂಪರೆ ಬಿಂಬಿಸುವಂತೆ ವಿಗ್ರಹಗಳನ್ನು ಕೆತ್ತಲಾಗಿದೆ. ಮಧ್ಯಭಾಗದಲ್ಲಿ ಶಿವ ಮತ್ತು ಪಾರ್ವತಿ, ಎಡಭಾಗದಲ್ಲಿ ಷಣ್ಮುಖ, ಬಲಭಾಗದಲ್ಲಿ ವಿನಾಯಕ ವಿಗ್ರಹಗಳಿವೆ.

‘ಗರ್ಭಗುಡಿ ಮತ್ತು ದೇವಸ್ಥಾನದ ಆವರಣ ಸುಮಾರು 1 ಎಕರೆಯಲ್ಲಿದ್ದು, ದೇವಸ್ಥಾನದ ಮುಂದಿರುವ ಗೋಪುರವನ್ನು ಮುಜರಾಯಿ ಇಲಾಖೆ ನಿರ್ಮಿಸಿದೆ. ಕೆಲವು ವರ್ಷಗಳಿಂದ ದೇವಸ್ಥಾನಕ್ಕೆ ನವೀಕರಣದ ಸ್ಪರ್ಶ ಕೊಡುವ ಕೆಲಸ ನಡೆಯುತ್ತಿದೆ’ ಎನ್ನುತ್ತಾರೆ ದೇವಸ್ಥಾನದ ಪಾರುಪತ್ತೆಗಾರ ಗೋಪಾಲಗೌಡ.

ಹೊರ ಆವರಣದಲ್ಲಿ ಎರಡು ಬೃಹತ್ ಅರಳಿ ಮರಗಳಿವೆ. ಅಲ್ಲದೇ, ಆಂಜನೇಯ ಸ್ವಾಮಿ, ಬೇಡರ ಕಣ್ಣಪ್ಪ ದೇವಸ್ಥಾವೂ ಇದೆ. ದೇವಸ್ಥಾನಕ್ಕೆ ಹೊಂದಿಕೊಂಡಂತೆ ಬ್ಯೂಗಲ್‌ ರಾಕ್ ಉದ್ಯಾನವೂ ಇದೆ. ಅಂದು ಪಹರೆ ಕಾಯುತ್ತಿದ್ದ ಸೈನಿಕರು ಈ ಉದ್ಯಾನದಲ್ಲಿರುವ ಬಂಡೆಯ ಮೇಲಿರುವ ಗೋಪುರದಲ್ಲಿ ಕಹಳೆ ಊದುತ್ತಿದ್ದರು.

ಸಂಪರ್ಕ: ಬಸ್‌ ಮಾರ್ಗವಾಗಿ ಬಂದರೆ ಮೆಜೆಸ್ಟಿಕ್‌ನಲ್ಲಿ, 36, 36/A, 36/B, 104, 43, 43/A, 43/B 45, 45/G ಸಂಖ್ಯೆಯ ಬಸ್‌ಗಳನ್ನು ಹತ್ತಿದರೆ ದೇವಸ್ಥಾನದ ಬಳಿ ನಿಲ್ಲಿಸುತ್ತಾರೆ. ಮೆಟ್ರೊ ರೈಲು ಮಾರ್ಗವಾಗಿ ಬಂದರೆ, ನ್ಯಾಷನಲ್ ಕಾಲೇಜು ಬಳಿ ಇಳಿದು ಅಲ್ಲಿಂದ ಆಟೋದಲ್ಲಿ ಹೋಗಬಹುದು.‌

**

ಅಮಿತಾಬ್‌ ಬಚ್ಚನ್‌ ಬೆಣ್ಣೆ ಅಲಂಕಾರ!

1983ರಿಂದಲೂ ಈ ದೇವಸ್ಥಾನಕ್ಕೆ ಬರುತ್ತಿದ್ದೇನೆ. ನಾನು ನೋಡಿದಂತೆ, ಗರ್ಭಗುಡಿಯ ಮೇಲ್ಛಾವಣಿಯನ್ನು ಹೆಂಚಿನಿಂದ ಹೊದಿಸಲಾಗಿತ್ತು. ಒಂದೇ ಒಂದು ಬಾಗಿಲಿತ್ತು. ದೇವಸ್ಥಾನದ ಆವರಣವೆಲ್ಲಾ ಭತ್ತ, ಕಡಲೇಕಾಯಿ ಬೆಳೆಯುವ ಪ್ರದೇಶವಾಗಿತ್ತು.
ಡಾ. ರಾಜ್‌ಕುಮಾರ್ ಮತ್ತು ಕಲ್ಪನಾ ಅಭಿನಯದ ‘ಎರಡು ಕನಸು’ ಸಿನಿಮಾವನ್ನು ಇಲ್ಲಿ ಚಿತ್ರೀಕರಿಸಲಾಗಿದೆ.

ಬೆಂಗಳೂರಿನ ರೈಲ್ವೆ ನಿಲ್ದಾಣದಲ್ಲಿ ಬಾಲಿವುಡ್‌ನ ಕೂಲಿ ಸಿನಿಮಾ ಚಿತ್ರೀಕರಣ ನಡೆಯುತ್ತಿದ್ದಾಗ, ನಟ ಅಮಿತಾಬ್‌ ಬಚ್ಚನ್‌ ಗಂಭೀರವಾಗಿ ಗಾಯಗೊಂಡಿದ್ದರು. ಅವರು ಶೀಘ್ರ ಗುಣಮುಖರಾಗಲೆಂದು, ನಟ ಶಿವರಾಮ್ ಅವರ ಅಣ್ಣ ನಿರ್ಮಾಪಕ ರಾಮನಾಥ್‌ ಅವರು, ದೊಡ್ಡ ಗಣಪತಿಗೆ ಬೆಣ್ಣೆ ಅಲಂಕಾರ ಮಾಡಿಸುವ ಹರಕೆ ಹೊತ್ತಿದ್ದರು. ನನಗೆ ತಿಳಿದ ಮಟ್ಟಿಗೆ ರಾಮನಾಥ್ ಅವರೇ ಈ ವಿಗ್ರಹಕ್ಕೆ ಮೊದಲ ಬಾರಿಗೆ ಬೆಣ್ಣೆ ಅಲಂಕಾರ ಮಾಡಿಸಿದರು. ಈ ಅಲಂಕಾರಕ್ಕೆ ಸುಮಾರು 100 ಕೆ.ಜಿ ಬೆಣ್ಣೆ ಬೇಕಾಗುತ್ತದೆ. ಇವಷ್ಟೇ ಅಲ್ಲದೇ, ತರಕಾರಿ ಅಲಂಕಾರ, ಕಡುಬಿನ ಅಲಂಕಾರವನ್ನೂ ಮಾಡಲಾಗುತ್ತದೆ. ಬೆಂಗಳೂರು ಗಣೇಶ ಉತ್ಸವ, ಕಡಲೆಕಾಯಿ ಪರಿಷೆ, ಸಂಕ್ರಾಂತಿ ಉತ್ಸವಕ್ಕೆ ಈ ದೇವಸ್ಥಾನವೇ ಪ್ರೇರಣೆ.

-ಕೆ.ವಿ. ರಾಮಚಂದ್ರ ರಾವ್‌, ಭಕ್ತ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT