ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಈ ಹೊತ್ತಿನ ತುರ್ತಿಗೆ ಸುಬ್ಬಣ್ಣ ಸ್ಮರಣೆ

Published 13 ಆಗಸ್ಟ್ 2023, 0:32 IST
Last Updated 13 ಆಗಸ್ಟ್ 2023, 0:32 IST
ಅಕ್ಷರ ಗಾತ್ರ

ಸುಬ್ಬಣ್ಣ ಇನ್ನಿಲ್ಲವಾಗಿ ಇದು 18ನೇ ವರ್ಷ. ಕೋವಿಡ್‌ ಸಂದರ್ಭದಲ್ಲಿ ಬಿಟ್ಟರೆ ಪ್ರತಿ ವರ್ಷವೂ ಅವರ ನೆನಪಿನ ಕಾರ್ಯಕ್ರಮಗಳು ಹೆಗ್ಗೋಡಿನ ನೀನಾಸಂನಲ್ಲಿ ನಡೆಯುತ್ತಾ ಬಂದಿವೆ. ಈ ವರ್ಷ ಜುಲೈ 16 ಮತ್ತು 17ರಂದು ಪರಿಸರ ಕುರಿತ ಉಪನ್ಯಾಸದ ಜತೆ ಎರಡು ನಾಟಕಗಳ ಪ್ರದರ್ಶನ ಆಯೋಜಿಸಲಾಗಿತ್ತು...

‘ಸುಬ್ಬಣ್ಣ ಸುಮ್ಮನೆ ಆದವರೆ? ಸೂರ್ಯನ ಕುಡಿದು ಸುಡದವರು’- ನಮ್ಮೆಲ್ಲರ ರಂಗಪ್ರಜ್ಞೆಯನ್ನು ರೂಪಿಸಿದ ಕೆ.ವಿ. ಸುಬ್ಬಣ್ಣನವರ ವ್ಯಕ್ತಿತ್ವವನ್ನು ನಿರೂಪಿಸಲು ಕಂಬಾರರ ಈ ಕವಿತೆಯ ಈ ಒಂದು ಸಾಲು ಸಾಕು. ಹೆಗ್ಗೋಡಿನಂತಹ ಹಳ್ಳಿಗೆ ದಿಲ್ಲಿಯಂತಹ ಜಗತ್ತು ತಂದು ಅದರ ಸಾರವನ್ನೆಲ್ಲ ಇಲ್ಲಿನ ಜನರಿಗೆ ಸಮಾನವಾಗಿ ಉಣಬಡಿಸಿದ ಬಹುದೊಡ್ಡ ಪ್ರಜಾಪ್ರಭುತ್ವವಾದಿ ಸುಬ್ಬಣ್ಣ. ಇಂತಹವರ ಸ್ಮರಣೆಯೊಂದೇ ಈ ಹೊತ್ತಿನ ಬಿಕ್ಕಟ್ಟುಗಳಿಗೆ ತುರ್ತು ಪರಿಹಾರವೆನೋ ಅನಿಸುತ್ತಿದೆ.

ಸುಬ್ಬಣ್ಣ ಇನ್ನಿಲ್ಲವಾಗಿ ಇದು 18ನೇ ವರ್ಷ. ಕೋವಿಡ್‌ ಸಂದರ್ಭದಲ್ಲಿ ಬಿಟ್ಟರೆ ಪ್ರತಿ ವರ್ಷವೂ ಅವರ ನೆನಪಿನ ಕಾರ್ಯಕ್ರಮಗಳು ಹೆಗ್ಗೋಡಿನ ನೀನಾಸಂನಲ್ಲಿ ನಡೆಯುತ್ತಾ ಬಂದಿವೆ. ಈ ವರ್ಷ ಜುಲೈ 16 ಮತ್ತು 17ರಂದು ಪರಿಸರ ಕುರಿತ ಉಪನ್ಯಾಸದ ಜತೆ ಎರಡು ನಾಟಕಗಳ ಪ್ರದರ್ಶನ ಆಯೋಜಿಸಲಾಗಿತ್ತು.

ಕುವೆಂಪು ಅವರ ‘ರಕ್ತಾಕ್ಷಿ’ ಹಾಗೂ ಪಿ. ಲಂಕೇಶರ ಕಥೆಗಳನ್ನು ಆಧರಿಸಿದ ‘ರೊಟ್ಟಿಯ ಸಲುವಾಗಿ ಇಷ್ಟೆಲ್ಲ..!?’ ನಾಟಕಗಳು ಕಿಕ್ಕಿರಿದು ತುಂಬಿದ್ದ ರಂಗಮಂದಿರದಲ್ಲಿ ಮತ್ತೆ ಮತ್ತೆ ಸುಬ್ಬಣ್ಣರ ಸ್ಮರಣೆಯ ಅಲೆ ಎಬ್ಬಿಸಿದವು.

ಶೇಕ್‌ಸ್ಪಿಯರ್‌ನ ಪ್ರಸಿದ್ಧ ನಾಟಕ ‘ಹ್ಯಾಮ್ಲೆಟ್‌’ ಪ್ರೇರಣೆ ಪಡೆದು ರಚಿತವಾಗಿರುವ ‘ರಕ್ತಾಕ್ಷಿ’ಯ ಮೊದಲ ಕೆಲವು ದೃಶ್ಯಗಳಲ್ಲಿ ಈ ನಾಟಕದ ಛಾಯೆ ಕಾಣುತ್ತದೆ. ಮುಂದಿನ ಭಾಗಗಳು ಕುವೆಂಪು ಅವರ ಸ್ವಂತ ಸೃಷ್ಟಿ. ಈ ನಾಟಕದ ಇನ್ನೊಂದು ಮೂಲ ಬಿದನೂರು ಸಂಸ್ಥಾನದ ಇತಿಹಾಸ; ಇದು ಕೂಡ ಸೀಮಿತವಾಗಿ.

ಬಿದನೂರಿನ ರಾಣಿ ಚೆಲುವಾಂಬೆ ತನ್ನ ಪತಿ ಬಸಪ್ಪ ನಾಯಕನ ಸಾವಿನ ನಂತರ ಮಗನೊಬ್ಬನನ್ನು ದತ್ತು ಪಡೆದು ಆತನು ತನ್ನ ಶೀಲವನ್ನು ಶಂಕಿಸಿದ್ದರಿಂದ ಕೊಲ್ಲಿಸಿದಳು ಎಂಬ ಐತಿಹ್ಯವನ್ನು ಆಧರಿಸಿ ನಾಟಕದ ಕಥಾನಕವು ವಿಸ್ತಾರಗೊಂಡಿದೆ. ರಾಣಿಯ ಶೀಲದ ಬಗ್ಗೆ ಎದ್ದ ಸಂದೇಹ ಮತ್ತು ಹೈದರ್‌ ಆಲಿಯು ಬಿದನೂರನ್ನು ಆಕ್ರಮಿಸಿ ಗೆದ್ದನೆಂಬ ಇತಿಹಾಸದ ಕಥನ-ಇದನ್ನು ಭಿತ್ತಿಯಾಗಿಟ್ಟುಕೊಂಡು ಕುವೆಂಪು ಅವರು ಹಲವು ಹೊಸ ಪಾತ್ರ-ಸನ್ನಿವೇಶಗಳನ್ನು ಅದರ ಸುತ್ತ ರೂಪಿಸಿದ್ದಾರೆ. ಈ ನಾಟಕವನ್ನು ಕಟ್ಟುವಾಗ ಕುವೆಂಪು ಅವರು ಬೆಳೆಸಿರುವ ಪ್ರಮುಖ ಪಾತ್ರ ಈ ನಾಟಕದ ಮಂತ್ರಿಯ ಮಗಳು ರುದ್ರಾಂಬೆ. ಮುಂದೆ ಈ ರುದ್ರಾಂಬೆಯೇ ಉನ್ಮತ್ತಳಾಗಿ ರಕ್ತಾಕ್ಷಿಯೆಂಬ ಹೆಸರು ಹಚ್ಚಿಕೊಂಡು ನಡೆದ ಅನ್ಯಾಯಗಳ ವಿರುದ್ಧ ಸೇಡು ತೀರಿಸಿಕೊಳ್ಳುವುದೇ ಈ ನಾಟಕದ ದ್ವಿತೀಯಾರ್ಧ.

1932ರಲ್ಲಿ ಈ ನಾಟಕ ರಚನೆಯಾದರೂ ಇಂದಿಗೂ ಹೆಚ್ಚು ಪ್ರಸ್ತುತ. ಅಧಿಕಾರಕ್ಕಾಗಿ ಮನುಷ್ಯನ ಹಪಾಹಪಿತನವನ್ನು ಬಿಚ್ಚಿಡುವ ಈ ನಾಟಕವನ್ನು ಕನ್ನಡ ರಂಗಭೂಮಿಯಲ್ಲಿ ಇಷ್ಟು ವರ್ಷಗಳಲ್ಲಿ ಹಲವು ತಂಡಗಳು ಹಲವಾರು ಪ್ರಯೋಗಗಳನ್ನು ನೀಡಿವೆ. ಇದನ್ನು ರಂಗದ ಮೇಲೆ ತರುವುದು ತುಸು ಸವಾಲಿನ ಕೆಲಸ. ಅರ್ಧ ಹಳಗನ್ನಡ ಪದ್ಯ ಶೈಲಿಯಲ್ಲಿರುವ ಸಂಭಾಷಣೆಯನ್ನು ಒಪ್ಪಿಸುವುದು ನಟ ಹಾಗೂ ನಿರ್ದೇಶಕ ಇಬ್ಬರು ನುರಿತರಾಗಿದ್ದರಷ್ಟೇ ಸುಲಭ. ಇಂತಹ ಪ್ರಯೋಗಗಳಲ್ಲಿ ಎಂದಿಗೂ ಸೈ ಎನಿಸಿಕೊಂಡಿರುವ ನಿರ್ದೇಶಕ ಬಿ.ಆರ್‌.ವೆಂಕಟರಮಣ ಐತಾಳರು ಮತ್ತೊಮ್ಮೆ ಮೆಚ್ಚುಗೆ ಕೆಲಸವನ್ನೇ ಮಾಡಿದ್ದಾರೆ.

ಪ್ರಸ್ತುತ ಪ್ರಯೋಗದಲ್ಲಿ ಬಸವಯ್ಯ, ಲಿಂಗಣ್ಣ, ಹೊನ್ನಯ್ಯ, ಚೆಲುವಾಂಬೆ, ಸನ್ಯಾಸಿ, ಕೆಂಚಣ್ಣ, ಸಿಂಗಣ್ಣ ಪಾತ್ರಧಾರಿಗಳದ್ದು ಜೀವ ಚೈತನ್ಯದ ನಟನೆ. ರಕ್ತಾಕ್ಷಿ ಪಾತ್ರದಲ್ಲಿ ವಿದ್ಯಾ ಹೆಗಡೆ ಅವರದ್ದು ಅದ್ಭುತ ಅಭಿನಯ. ರಕ್ತಾಕ್ಷಿ ಉನ್ಮತ್ತಳಾಗಿ, ಸೇಡು ತೀರಿಸಿಕೊಳ್ಳುವ ಅಭಿನಯದ ದೃಶ್ಯಗಳಂತೂ ಪ್ರೇಕ್ಷಕನ ಮನಸ್ಸಿನಲ್ ಲಿ ವಿಷಾದ ಮಡುಗಟ್ಟುವಂತೆ ಮಾಡುತ್ತವೆ. ನಿಂಬಯ್ಯ ಪಾತ್ರ ಪೋಷಣೆಗೆ ವಸ್ತ್ರಾಲಂಕಾರವೇ ತೊಡಕಾಗಿದ್ದಂತೆ ಕಾಣಿಸಿತು. ರುದ್ರಾಂಬೆಯ ಸಂಭಾಷಣೆಯ ಏರಿಳಿತ ಸಾಕಾಗಿಲ್ಲ. ರಂಗಸಜ್ಜಿಕೆ, ಸಂಗೀತ, ಬೆಳಕು ಒಂದಕ್ಕೊಂದು ಪೈಪೋಟಿ ಕೊಡುವಷ್ಟು ಗುಣಾತ್ಮಕವಾಗಿದ್ದವು. ನಾಟಕದ ಬಹುತೇಕ ಕಲಾವಿದರು ಹವ್ಯಾಸಿಗಳು ಎನ್ನುವುದು ಗಮನಿಸಬೇಕಾದ ಅಂಶ.

ಇಲ್ಲಿ ಕುತೂಹಲದ ಸಂಗತಿಯೊಂದಿದೆ. ಸುಬ್ಬಣ್ಣ ಅವರು ಮೈಸೂರಿನಲ್ಲಿ ವ್ಯಾಸಂಗ ಮಾಡುತ್ತಿರುವಾಗ ‘ರಕ್ತಾಕ್ಷಿ’ ನಾಟಕದ ರುದ್ರಾಂಬೆ ಪಾತ್ರದಲ್ಲಿ ನಟಿಸಿದ್ದರಂತೆ; ಅದನ್ನು ಸ್ವತಃ ಕುವೆಂಪು ಅವರು ನೋಡಿ ಮೆಚ್ಚುಗೆ ಸೂಚಿಸಿದ್ದರಂತೆ.

ಎರಡನೇ ನಾಟಕ-ಇದು ಲಂಕೇಶರ ‘ರೊಟ್ಟಿ’ ಮತ್ತು ‘ಅಧಿಕಾರಗಳು ಮತ್ತು ಕೆಲಸದವ’ ಕಥೆಗಳನ್ನು ಆಧರಿಸಿ ‘ರೊಟ್ಟಿಯ ಸಲುವಾಗಿ ಇಷ್ಟೆಲ್ಲ…!?’ ಹೆಸರಿನ ಆಪ್ತ ರಂಗ ಪ್ರಯೋಗ. ಈ ನಾಟಕದ ವಿನ್ಯಾಸ ಹಾಗೂ ನಿರ್ದೇಶನ ಡಾ.ಎಂ.ಗಣೇಶ್ ಅವರದ್ದು. ನೀನಾಸಂ ರಂಗ ಶಿಕ್ಷಣ ಕೇಂದ್ರದ ಪ್ರಾಂಶುಪಾಲರಾಗಿರುವ ಗಣೇಶ್‌ ರಜೆ ಅವಧಿಯಲ್ಲಿ ಜನಮನದಾಟ ರಂಗ ತಂಡ ಸಂಘಟಿಸಿ ಪ್ರಸ್ತುತ ಪಡಿಸಿರುವ ಪ್ರದರ್ಶನವಿದು. ಹೀಗೆ ತಂಡ ಕಟ್ಟಿ, ತಿರುಗಾಟ ನಡೆಸಲು ಸ್ಫೂರ್ತಿ ಮತ್ತು ಪ್ರೇರಣೆ ನೀಡಿದವರು ಸುಬ್ಬಣ್ಣನವರೇ ಎಂದು ಕೃತಜ್ಞತೆಯಿಂದ ಸ್ಮರಿಸುತ್ತಾರೆ ಗಣೇಶ್.‌

ಈಗಿನ ರಾಜ್ಯ ಸರ್ಕಾರದ ಉಚಿತ ಯೋಜನೆಗಳನ್ನು ಟೀಕಿಸುವ ಭರದಲ್ಲಿ ಹಸಿವನ್ನೇ ಹಂಗಿಸುವ ಕೆಲಸ ವ್ಯವಸ್ಥಿತವಾಗಿ ನಡೆಯುತ್ತಿದೆ. ಆದರೆ, ನಿಜವಾಗಿಯೂ ಹಸಿವು ಎಂದರೇನು ಎಂಬುದನ್ನು ಪ್ರಯಾಣದಲ್ಲಿದ್ದು, ಹಸಿವೆಯಿಂದ ರೊಟ್ಟಿ ತಿನ್ನಲು ರೈಲ್ವೆ ನಿಲ್ದಾಣದಲ್ಲಿ ಒಬ್ಬಂಟಿ ಮುದುಕಿಯೊಬ್ಬಳು ಗಂಟು ಬಿಚ್ಚುತ್ತಿದ್ದಾಗ ಹಸಿದ ಭಿಕಾರಿಯೊಬ್ಬ ಅದನ್ನು ಕಿತ್ತುಕೊಂಡು ಪರಾರಿಯಾಗುವ ಸನ್ನಿವೇಶದ ಮೂಲಕ ಮಾರ್ಮಿಕವಾಗಿ ಕಟ್ಟಿಕೊಡಲಾಗಿದೆ.

ತದನಂತರ ನಡೆಯುವ ಘಟನಾವಳಿಗಳಿಂದ ತಾನೊಬ್ಬ ಕ್ರೂರಿ ಎಂಬಂತೆ ಪರಿಸ್ಥಿತಿ ನಿರ್ಮಾಣವಾದುದರ ಬಗೆಗೆ ಮುದುಕಿ ಬೇಸತ್ತು ತನ್ನಲ್ಲಿರುವ ರೊಟ್ಟಿ, ಹಣ ಎಲ್ಲವನ್ನೂ ಎಲ್ಲರಿಗೂ ಹಂಚಲು ಮುಂದಾದರೂ ಜನ ಅವಳನ್ನು ತಿರಸ್ಕರಿಸಿ ಹಿಂದೆ ಸರಿಯುತ್ತಾರೆ. ಕಂಗಾಲಾದ ಆಕೆ ದುಃಖದಿಂದ ಕುಸಿಯುತ್ತಾಳೆ. ಇದಿಷ್ಟು ಕಥೆಯನ್ನು ಬಹಳ ಸರಳ ರಂಗಸಜ್ಜಿಕೆಯಲ್ಲಿ, ನಾಲ್ಕೇ ಪಾತ್ರಗಳು ಅಭಿನಯ-ಸಂಭಾಷಣೆಗಳ ಮೂಲಕವೇ ಪ್ರೇಕ್ಷಕರಿಗೆ ದಾಟಿಸುತ್ತವೆ. ನಾಲ್ವರದ್ದೂ ಪೈಪೋಟಿಯ ನಟನೆ. ‘ಮುದುಕಿ’ಯಾಗಿ ವಿಭಾ ನಿಧಿ ಶಿವಂ ಅವರದ್ದು ಸಾಠಿ ಇಲ್ಲದ ಅಭಿನಯ.

ಇನ್ನೊಂದು ಕಥೆ ‘ಅಧಿಕಾರಿಗಳು ಮತ್ತು ಕೆಲಸದವ’. ಇದರಲ್ಲಿ ಜಗತ್ತಿನ ಸ್ಪಂದನೆಗಳಿಗೆ ಮೂಕರು- ಕಿವುಡರೂ ಆಗಿರುವ ಸರ್ಕಾರಿ ಅಧಿಕಾರಿಗಳ ನಿರ್ಲಿಪ್ತ, ನಿರ್ಲಜ್ಞತನಗಳನ್ನು ಬಿಚ್ಚಿಡಲಾಗುತ್ತದೆ. ಕೆಲಸಗಾರರನ್ನು ಪ್ರಾಣಿಗಳಿಗಿಂತಲೂ ಕೀಳಾಗಿ ಕಾಣುವ ಅಧಿಕಾರ ವ್ಯವಸ್ಥೆಯ ಕ್ರೂರತೆ ಇಲ್ಲಿ ದರ್ಶನವಾಗುತ್ತದೆ. ಸತತ ದೌರ್ಜನ್ಯದಿಂದ ಕಂಗೆಟ್ಟ ಕೆಲಸಗಾರನೂ ಒಮ್ಮೆ ಎದೆ ಸೆಟೆದು ನಿಲ್ಲುತ್ತಾನೆ ಎಂಬುದನ್ನು ಸೂಚ್ಯವಾಗಿ ತಿಳಿಸುವ ಮೂಲಕ ನಾಟಕ ಮುಕ್ತಾಯವಾಗುತ್ತದೆ.

ಕೆ.ವಿ.ಸುಬ್ಬಣ್ಣ
ಕೆ.ವಿ.ಸುಬ್ಬಣ್ಣ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT