ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆ ಸಲ ಕಪ್ ನಮ್ದೇ: 1983ರ ವಿಜಯದ ನಂತರ 40 ವರ್ಷಗಳ ಕತೆ

1983ರ ವಿಜಯದ ನಂತರ 40 ವರ್ಷಗಳ ಕತೆ
Published 25 ಜೂನ್ 2023, 0:30 IST
Last Updated 25 ಜೂನ್ 2023, 0:30 IST
ಅಕ್ಷರ ಗಾತ್ರ

ಗಂಧದ ಕೊರಡು ಎಷ್ಟೇ ಹಳೆಯದಾಗಿರಲಿ. ತೇಯ್ದಷ್ಟೂ ಸುಗಂಧದ ಪರಿಮಳವನ್ನು ಪಸರಿಸುತ್ತಲೇ ಇರುತ್ತದೆ. ಅದೇ ರೀತಿ ಭಾರತ ಕ್ರಿಕೆಟ್‌ ತಂಡವು 1983ರಲ್ಲಿ ಗೆದ್ದ ವಿಶ್ವಕಪ್ ಸಾಧನೆ ಕೂಡ. ಅದರ ಬಗ್ಗೆ ಎಷ್ಟೇ ಮಾತಾಗಲೀ, ನೆನಕೆಯಾಗಲೀ ಚೆಂದದ ಅನುಭೂತಿ. ಅದು ಕ್ರಿಕೆಟ್‌ ಆಟದ ಸಹಜ ಸುಗಂಧ. 

ಇವತ್ತಿಗೆ ಬರೋಬ್ಬರಿ ನಾಲ್ಕು ದಶಕಗಳ ಹಿಂದೆ ಲಾರ್ಡ್ಸ್‌ ಅಂಗಳದ ಅಟ್ಟಣಿಗೆಯ ಮೇಲೆ ಕಪಿಲ್ ದೇವ್ ವಿಶ್ವಕಪ್ ಎತ್ತಿಹಿಡಿದ ಆ ಚಿತ್ರ ನೋಡಿದಾಗಲೆಲ್ಲ ಪುಳಕ. ಇವತ್ತು ಕ್ರಿಕೆಟ್‌ ಜಗತ್ತಿಗೆ ಭಾರತವು ‘ಅನಭಿಷಿಕ್ತ‘ ದೊರೆಯಾಗಲು ಆ ಗೆಲುವೇ ಮೊದಲ ಅಡಿಗಲ್ಲು. ಟಿ.ವಿ., ಮೊಬೈಲ್ ಮತ್ತು ಕಂಪ್ಯೂಟರ್‌ಗಳಲ್ಲಿ ಕ್ರಿಕೆಟ್‌ ಪಂದ್ಯಗಳ ನೇರಪ್ರಸಾರ ನಡೆಯುತ್ತಿರುವ ಈ ಡಿಜಿಟಲ್ ಯುಗದಲ್ಲಿಯೂ ಆ ಕಪ್ಪುಬಿಳುಪು ಚಿತ್ರದ ಸೌಂದರ್ಯ ಮಾಸಿಲ್ಲ.

ಹಣ, ಹೆಸರು ಮತ್ತಿತರ ಆಯಾಮಗಳಲ್ಲಿ ಕ್ರಿಕೆಟ್‌ ಇವತ್ತು ಬೆಳೆದಿದೆ. ಅದೆಷ್ಟೋ ಅಪ್ರತಿಮ ಆಟಗಾರರು ಈ ಅವಧಿಯಲ್ಲಿ ತಮ್ಮ ಹೆಜ್ಜೆಗುರುತು ಮೂಡಿಸಿದ್ದಾರೆ. ಸಾವಿರಾರು ರನ್‌ಗಳು ಹರಿದಿವೆ. ವಿಕೆಟ್‌ಗಳೂ ಪತನವಾಗಿವೆ. ಹಲವಾರು ದಾಖಲೆಗಳ ರಾಶಿಯೇ ನಿರ್ಮಾಣವಾಗಿದೆ. ಹಣ ಗಳಿಕೆಯಲ್ಲಿಯೂ ವಿಶ್ವದಾಖಲೆ ಮೂಡಿದೆ. ಇವತ್ತಿನ ಟಿ20 ಕ್ರಿಕೆಟ್‌ ಪಂದ್ಯಗಳ ಒಂದು ಇನಿಂಗ್ಸ್‌ನಲ್ಲಿಯೇ 200ಕ್ಕೂ ಹೆಚ್ಚು ರನ್‌ಗಳ ಮೊತ್ತ ದಾಖಲಾಗುತ್ತಿದೆ. ಆದರೂ ಅವತ್ತು ಲಾರ್ಡ್ಸ್‌ ಅಂಗಳದಲ್ಲಿ ವೆಸ್ಟ್‌ ಇಂಡೀಸ್‌ ದೈತ್ಯರ ಬಳಗಕ್ಕೆ 183 ರನ್‌ಗಳ ಗುರಿಯನ್ನು ಒಡ್ಡಿ ಗೆದ್ದ ಕಪಿಲ್ ಡೆವಿಲ್ಸ್‌ ಪಡೆಯ ದಂತಕಥೆ ಪುಳಕಗೊಳಿಸುತ್ತದೆ. 

ಕಳೆದ ನಾಲ್ಕು ದಶಕಗಳಲ್ಲಿ ಆಸ್ಟ್ರೇಲಿಯಾ ಆರು ಬಾರಿ, ಇಂಗ್ಲೆಂಡ್, ಪಾಕಿಸ್ತಾನ ಮತ್ತು 2011ರಲ್ಲಿ ಭಾರತದ ಮಹೇಂದ್ರಸಿಂಗ್ ಧೋನಿ ಬಳಗವು ಏಕದಿನ ಮಾದರಿಯಲ್ಲಿ ವಿಶ್ವಕಪ್ ಗೆದ್ದಿವೆ. ಟಿ20 ಮಾದರಿಯಲ್ಲಿಯೂ ಎಂಟು ವಿಶ್ವಕಪ್ ಟೂರ್ನಿಗಳು ಆಗಿವೆ. ಎರಡು ವಿಶ್ವ ಟೆಸ್ಟ್ ಚಾಂಪಿಯನ್‌ಷಿಪ್‌ಗಳೂ ಮುಗಿದಿವೆ. ಆದರೂ ಕಪಿಲ್ ಬಳಗದ ಸಾಧನೆಯು ಈಗಲೂ ಹಸಿರಾಗಿರಲು, ಆ ಗೆಲುವಿನಲ್ಲಿದ್ದ ಕ್ರಿಕೆಟ್‌ ಆಟದ ನೈಜ ಸೌಂದರ್ಯವೇ ಕಾರಣ. ಇವತ್ತು ಆಧುನಿಕತೆ, ತಂತ್ರಜ್ಞಾನ ಹಾಗೂ ಶ್ರೀಮಂತಿಕೆಗಳು ಇದ್ದರೂ ಕ್ರಿಕೆಟ್‌ನಲ್ಲಿನ ಆ ಸಹಜತೆ ಮಾಯವಾಗಿರುವಂತೆ ಭಾಸವಾಗುತ್ತಿರುವುದು ಸುಳ್ಳಲ್ಲ.

ಅದಕ್ಕೆ ಕಾರಣ ಚುಟುಕು ಕ್ರಿಕೆಟ್‌ನ ಜನಪ್ರಿಯತೆ. ಈ ಮಾದರಿಯು ಇವತ್ತು ಯುವಸಮೂಹವನ್ನು ಇನ್ನಿಲ್ಲದಂತೆ ಆವರಿಸಿಕೊಂಡಿದೆ. ಏಕದಿನ ಮಾದರಿ ಜನಿಸಿದಾಗಲೂ ಟೆಸ್ಟ್ ಮಾದರಿಗೆ ಇಷ್ಟೊಂದು ಆತಂಕ ಮೂಡಿರಲಿಲ್ಲ. ಆದರೆ ಈ ಚುಟುಕು ಕ್ರಿಕೆಟ್ ಈಗ ಏಕದಿನ ಮಾದರಿಗೇ ಕುತ್ತಾಗಿ ಪರಿಣಮಿಸಿದೆ. ಆಡುವವರು ಮತ್ತು ನೋಡುವವರು ಇಬ್ಬರಿಗೂ ಫಾಸ್ಟ್‌ ಫುಡ್‌ ತರಹದ ಅನುಭವ ನೀಡುತ್ತಿರುವ ಟಿ20 ಶುರುವಾಗಿ ಎರಡು ದಶಕಗಳು ತುಂಬುತ್ತಿದೆ. ಈ ಹೊತ್ತಿನಲ್ಲಿ ಟೆಸ್ಟ್ ಮತ್ತು ಏಕದಿನ ಕ್ರಿಕೆಟ್‌ ಪುನರುತ್ಥಾನಕ್ಕಾಗಿ ಐಸಿಸಿ ಹೆಣಗಾಡುತ್ತಿದೆ.    

ಕಪಿಲ್ ದೇವ್ ಕೃಷ್ಣಮಾಚಾರಿ ಶ್ರೀಕಾಂತ್ ರೋಜರ್ ಬಿನ್ನಿ ಮತ್ತು ಸೈಯದ್ ಕಿರ್ಮಾನಿ   –ಪ್ರಜಾವಾಣಿ ಚಿತ್ರ ಸಂಗ್ರಹದಿಂದ
ಕಪಿಲ್ ದೇವ್ ಕೃಷ್ಣಮಾಚಾರಿ ಶ್ರೀಕಾಂತ್ ರೋಜರ್ ಬಿನ್ನಿ ಮತ್ತು ಸೈಯದ್ ಕಿರ್ಮಾನಿ   –ಪ್ರಜಾವಾಣಿ ಚಿತ್ರ ಸಂಗ್ರಹದಿಂದ

ಕ್ರಿಕೆಟ್ ಜಗತ್ತಿನ ದೊಡ್ಡಣ್ಣ ಎನಿಸಿಕೊಂಡಿರುವ ಭಾರತವು ಕಳೆದ ಹತ್ತು ವರ್ಷಗಳಿಂದ ಐಸಿಸಿ ಟ್ರೋಫಿ ಜಯಿಸಲು ಸಾಧ್ಯವಾಗಿಲ್ಲ. ಇಂಡಿಯನ್ ಪ್ರೀಮಿಯರ್ ಲೀಗ್ ಕ್ರಿಕೆಟ್‌ ಟೂರ್ನಿಯೆಂಬ ಮಾಯಾಂಗನೆಯ ಬೆನ್ನಟ್ಟಿರುವ ಯುವ ಕ್ರಿಕೆಟ್ ಪಡೆಯು ಟೆಸ್ಟ್ ಮತ್ತು ಏಕದಿನ ಮಾದರಿಗಳತ್ತ ಹೆಚ್ಚು ವಾಲುತ್ತಿಲ್ಲ. ಅವರ ಆಟದಲ್ಲಿ ‘ಹೊಡಿ ಬಡಿ‘ ಆಟದ ಛಾಯೆ ಎದ್ದುಕಾಣುತ್ತಿದೆ.

ಟೆಸ್ಟ್‌ ಉಳಿವಿಗಾಗಿ ವಿಶ್ವ ಚಾಂಪಿಯನ್‌ಷಿಪ್ ಆರಂಭಿಸಿದ ಐಸಿಸಿಯ ಪ್ರಯತ್ನಕ್ಕೆ ಈಗ ಫಲ ದೊರೆಯುತ್ತಿದೆ. ದೀರ್ಘ ಮಾದರಿಯ ಪಂದ್ಯಗಳೂ ಈಗ ರೋಚಕತೆ ಕೆರಳಿಸುತ್ತಿವೆ. ಡ್ರಾ ಫಲಿತಾಂಶಗಳು ಗಣನೀಯವಾಗಿ ಕಡಿಮೆಯಾಗಿವೆ. ಇತ್ತೀಚೆಗೆ ಎಜ್‌ಬಾಸ್ಟನ್‌ನಲ್ಲಿ ನಡೆದ ಆ್ಯಷಸ್ ಸರಣಿಯ ಮೊದಲ ಪಂದ್ಯ ಇದಕ್ಕೆ ಒಂದು ಉತ್ತಮ ಉದಾಹರಣೆ. ಕೊನೆಯ ದಿನದ ಅಂತಿಮ ಹಂತದವರೆಗೂ ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್ ತಂಡಗಳ ಹೋರಾಟ ಕುತೂಹಲ ಉಳಿಸಿಕೊಂಡಿತ್ತು. ಆಸ್ಟ್ರೇಲಿಯಾ ತಂಡದ ನಾಯಕ ಮತ್ತು ವೇಗಿ ಪ್ಯಾಟ್ ಕಮಿನ್ಸ್‌ ಅವರ ದಿಟ್ಟ ಹೋರಾಟಕ್ಕೆ ಜಯ ಒಲಿಯಿತು. ಆದರೆ ಎರಡೂ ತಂಡಗಳ ಆಟವೂ ಇಲ್ಲಿ ಅಭಿನಂದನೀಯ. ಅವತ್ತು ಕಮಿನ್ಸ್‌ ಹೋರಾಟವು ಕಪಿಲ್ ಆಟವನ್ನು ನೆನಪಿಸಿದ್ದರೆ ಅಚ್ಚರಿಯಿಲ್ಲ.

ಆದರೆ ಅದಕ್ಕೂ ಮುನ್ನ ಇದೇ ಆಸ್ಟ್ರೇಲಿಯಾ ಎದುರಿನ ವಿಶ್ವ ಟೆಸ್ಟ್ ಫೈನಲ್‌ನಲ್ಲಿ ಭಾರತ ತಂಡದ ಅಟ ಕಳಪೆಯಾಗಿತ್ತು. ’ಪಂದ್ಯದ ಮೊದಲ ದಿನವೇ ನಾವು ಸೋತಿದ್ದೆವು‘ ಎಂದು ಬಿಸಿಸಿಐ ಅಧ್ಯಕ್ಷ ರೋಜರ್‌ ಬಿನ್ನಿ ಅವರೇ ಹೇಳಿದ್ದು ರೋಹಿತ್ ಶರ್ಮಾ ಬಳಗದ ಆಟಕ್ಕೆ ಹಿಡಿದ ಕೈಗನ್ನಡಿಯಾಗಿತ್ತು.

ಆಲ್‌ರೌಂಡರ್‌ಗಳಿಲ್ಲದೇ ವಿಶ್ವಕಪ್ ಗೆಲ್ಲುವುದು ಕಷ್ಟ ಎನ್ನುವುದು ಸಾರ್ವಕಾಲಿಕ ಸತ್ಯ. ಭಾರತವು ಮೊದಲ ವಿಶ್ವಕಪ್ ಜಯಿಸಲು ಕಪಿಲ್, ಬಿನ್ನಿ, ಮೋಹಿಂದರ್ ಅಮರನಾಥ್ ಮತ್ತು ಮದನ್‌ ಲಾಲ್ ಅವರಂತಹ ಆಲ್‌ರೌಂಡರ್‌ಗಳ ಪಾತ್ರವೇ ಮಹತ್ವದ್ದಾಗಿತ್ತು. 2011ರಲ್ಲಿ ಧೋನಿ ಬಳಗದ ವಿಜಯದಲ್ಲಿ ಯುವರಾಜ್ ಸಿಂಗ್ ಆಲ್‌ರೌಂಡ್ ಆಟವನ್ನು ಯಾರೂ ಮರೆಯಲು ಸಾಧ್ಯವಿಲ್ಲ. ಆದರೆ 2013ರಲ್ಲಿ ಭಾರತವು ಚಾಂಪಿಯನ್ಸ್‌ ಟ್ರೋಫಿ ಗೆದ್ದ ನಂತರದ ವರ್ಷಗಳಲ್ಲಿ ಆಡಿದ ವಿಶ್ವಕಪ್‌ ಟೂರ್ನಿಗಳಲ್ಲಿ ಪ್ರಶಸ್ತಿ ಜಯಿಸಿಲ್ಲ. ಅದಕ್ಕೆ ಪ್ರಮುಖ ಕಾರಣ ಕ್ರಿಕೆಟ್‌ನ ಮೂಲಪಾಠಗಳನ್ನು ಆಟಗಾರರು ಮತ್ತು ತಂಡದ ವ್ಯವಸ್ಥಾಪಕ ಮಂಡಳಿಯು ಕಡೆಗಣಿಸುತ್ತಿರುವುದೇ ಆಗಿದೆ. ತಂಡದ ಯಶಸ್ವಿ ಆಲ್‌ರೌಂಡರ್  ಆರ್‌. ಅಶ್ವಿನ್ ಅವರನ್ನು ಬೆಂಚ್ ಮೇಲೆ ಕೂರಿಸಿರುವ ಪ್ರಮಾದ ಒಂದು ಕಡೆಯಾದರೆ,  ಹಾರ್ದಿಕ್ ಪಾಂಡ್ಯ ಅವರಂತಹ ಬ್ಯಾಟಿಂಗ್ ಆಲ್‌ ರೌಂಡರ್‌ಗೆ ಟೆಸ್ಟ್‌ನಲ್ಲಿ ಆಡಲು ಹೆಚ್ಚು ಅವಕಾಶ ಸಿಗದಿರುವುದು ಇನ್ನೊಂದೆಡೆ. ಟಿ20 ಮತ್ತು ಐಪಿಎಲ್ ಮೇಲೆ ಹೆಚ್ಚು ಗಮನ ಕೇಂದ್ರೀಕರಿಸಿದ್ದು ಮತ್ತು ಗಾಯಗಳಿಗೆ ತುತ್ತಾಗಿದ್ದು ಆಟಗಾರರ ಕ್ಷಮತೆ ಕಡಿಮೆಯಾಗಲು ಕಾರಣವಾಗುತ್ತಿದೆ. ಎಲ್ಲಕ್ಕಿಂತ ಮುಖ್ಯವಾಗಿ ಈಗಿನ ಆಟಗಾರರಿಗೆ ಕ್ರಿಕೆಟ್ ಎನ್ನುವುದು ಹಣ ಮತ್ತು ಹೆಸರು ಗಳಿಕೆಯ ವೃತ್ತಿಯಾಗಿ ಉಳಿದಿದೆ. ಅವರು ಆಟವನ್ನು ಮನಸಾರೆ ಆಸ್ವಾದಿಸುತ್ತಿಲ್ಲ ಎನ್ನುವುದೂ ಅಷ್ಟೇ ದಿಟ. 

ಈ ಪ್ರವೃತ್ತಿ ಭಾರತದಲ್ಲಿ ಮಾತ್ರ ಕಾಣುತ್ತಿರುವುದಕ್ಕೆ ಎದ್ದುಕಾಣುವ ಉದಾಹರಣೆಗಳಿವೆ. ಕ್ರಿಕೆಟ್ ಜನಕರ ನಾಡು ಇಂಗ್ಲೆಂಡ್‌ನಲ್ಲಿ ಇವತ್ತಿಗೂ ಕೌಂಟಿ ಟೂರ್ನಿಗಳು ಪ್ರತಿಭಾವಂತರನ್ನು ತಯಾರಿಸುವ ಕಾರ್ಖಾನೆಗಳಾಗಿವೆ. ಆಸ್ಟ್ರೇಲಿಯಾದಲ್ಲಿಯೂ ಸ್ಥಳೀಯ ಟೂರ್ನಿಗಳು ಮೌಲ್ಯ ಕಳೆದುಕೊಂಡಿಲ್ಲ. ಭಾರತದಲ್ಲಿ ದೇಶಿ ಕ್ರಿಕೆಟ್‌ ಟೂರ್ನಿಗಳು ಇವತ್ತಿಗೂ ಹೆಚ್ಚಿನ ಸಂಖ್ಯೆಯಲ್ಲಿ ಆಟಗಾರರಿಗೆ ಮಣೆ ಹಾಕುತ್ತಿವೆ. ಆದರೆ ರಾಷ್ಟ್ರೀಯ ತಂಡಗಳ ಆಯ್ಕೆಯಲ್ಲಿ ಐಪಿಎಲ್ ಸಾಧನೆ ಮೂಗು ತೂರಿಸುತ್ತಿರುವುದು ಆತಂಕ ಮೂಡಿಸಿದೆ. ಎಲ್ಲಕ್ಕಿಂತ ಮುಖ್ಯವಾಗಿ ತಮ್ಮ ದೇಶದ ತಂಡಕ್ಕಾಗಿ ಮುಖ್ಯ ಟೂರ್ನಿಗಳಲ್ಲಿ ಆಡಲು ಇಂಗ್ಲೆಂಡ್, ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್ ಕ್ರಿಕೆಟಿಗರು ಫ್ರ್ಯಾಂಚೈಸಿ ಲೀಗ್‌ಗಳನ್ನು ತ್ಯಜಿಸುತ್ತಾರೆ. ಆದರೆ, ಐಪಿಎಲ್ ಟೂರ್ನಿ ನಡೆಯುವಾಗ ಭಾರತ ತಂಡಕ್ಕೆ ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಭರ್ತಿ ಎರಡು ತಿಂಗಳುಗಳ ರಜೆ.

ಇಷ್ಟೆಲ್ಲ ಏಳು–ಬೀಳುಗಳ ನಡುವೆಯೂ ಕಪಿಲ್ ಬಳಗದ ಪ್ರತಿಯೊಬ್ಬ ಆಟಗಾರನೂ ದಿಗ್ಗಜರಾಗಿಯೇ ಗೌರವಕ್ಕೆ ಪಾತ್ರರಾಗುತ್ತಾರೆ. ಅವರ ಸಾಧನೆಯೇ ಸರ್ವಶ್ರೇಷ್ಠವಾಗಿ ಗುರುತಿಸಲಾಗುತ್ತದೆ. ಏಕೆಂದರೆ, ಅದರಲ್ಲಿ ನೈಜತೆ ಮತ್ತು ಹಣದ ಮದವಿಲ್ಲದ ಸಾರ್ಥಕತೆಯ ಸುಗಂಧ ಮಾತ್ರವಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT