ದಲಿತರು, ಮುಸ್ಲಿಮರು, ಹಿಂದುತ್ವ, ಕೋಮುವಾದ, ಆರೆಸ್ಸೆಸ್ ಮುಂತಾದ ವಿಚಾರಗಳ ಬಗ್ಗೆ ಕೃತಿಯಲ್ಲಿ ಅಧ್ಯಯನಪೂರ್ಣವಾದ ಲೇಖನಗಳಿವೆ. ಆನಂದ್ ತೇಲ್ತುಂಬ್ಡೆ ಅವರ ‘ಅಂಬೇಡ್ಕರ್ ಮತ್ತು ಮುಸ್ಲಿಮರು’ ಪುಸ್ತಕಕ್ಕೆ ಬರೆದ ಮುನ್ನುಡಿ, ವಿಜೇತಾ ದಹಿಯಾ ಸಂಶೋಧನೆಯ ಆಧಾರದ ಮೇಲೆ ಧ್ರುವ ರಾಠಿ ರೂಪಿಸಿದ ಯೂ ಟ್ಯೂಬ್ ಕಾರ್ಯಕ್ರಮಗಳನ್ನು ಆಧರಿಸಿ ಬರೆದ ‘ದೇಶ ವಿಭಜನೆಯ ವಾಸ್ತವ ಸತ್ಯಗಳು’, ಮಧು ಲಿಮಯೆ ಅವರ ‘ಆರೆಸ್ಸೆಸ್ ನಿಜ ಬಣ್ಣ ಏನು’ ಎನ್ನುವ ಅನುವಾದಿತ ಲೇಖನದಂಥ ವಿಚಾರ ಪ್ರಚೋದಕ ಬರಹಗಳು ಪುಸ್ತಕದಲ್ಲಿವೆ. ಯಡಿಯೂರಪ್ಪ, ಸದಾನಂದಗೌಡರ ನಿಲುವುಗಳನ್ನು ಪ್ರಶ್ನಿಸಿ ಬರೆದ ಲೇಖನಗಳಿರುವ ಹಾಗೆಯೇ ಸಿದ್ದರಾಮಯ್ಯ ಸರ್ಕಾರ ಹೋಮ ಮಾಡಲು ಮುಂದಾಗಿದ್ದನ್ನು ಟೀಕಿಸಿದ ಲೇಖನವೂ ಇದೆ.
ವೃತ್ತಿಯಿಂದ ಅಧ್ಯಾಪಕರಾಗಿದ್ದ ಗಂಗಾಧರಮೂರ್ತಿಯವರು ಸಹಜವಾಗಿಯೇ ಶಿಕ್ಷಕರ ಗುಣಮಟ್ಟ, ಶಾಲೆಗಳಲ್ಲಿ ವಂದೇ ಮಾತರಂ ಕಡ್ಡಾಯ, ರಾಷ್ಟ್ರೀಯ ಶಿಕ್ಷಣದ ಕೇಸರೀಕರಣದ ಬಗ್ಗೆ ಬರೆದದ್ದು ಕೃತಿಯ ಎರಡನೇ ಭಾಗದಲ್ಲಿದೆ. ಅನಂತಮೂರ್ತಿ, ಕುಮಾರಪ್ಪ, ಎಚ್ಚೆನ್, ನಿಡುಮಾಮಿಡಿ ಸ್ವಾಮೀಜಿ, ಐಎಎಸ್ ಅಧಿಕಾರಿ ಶಂಕರನ್ ಮುಂತಾದವರ ವ್ಯಕ್ತಿಚಿತ್ರಗಳಿವೆ.