ಕೃತಿ ಹೆಚ್ಚು ಆಪ್ತ ಎನಿಸುವುದು ಬಿಳಿಗಿರಿರಂಗನಬೆಟ್ಟ, ಕಾಡು, ಪ್ರಾಣಿ, ಪಕ್ಷಿ, ಸೋಲಿಗರು ಅವರ ಆಚಾರ ವಿಚಾರ ಕುರಿತ ಬರಹಗಳಿಂದ. ಬಿಳಿಗಿರಿರಂಗನಬೆಟ್ಟದ ವಿಜಿಕೆಕೆಯಲ್ಲಿ ಕಾರ್ಯನಿರ್ವಹಿಸಿದ ಸಂದರ್ಭದ ಅನುಭವಗಳನ್ನು ಗುರುಕಿರಣ್ ಅವರು ಪುಸ್ತಕದಲ್ಲಿ ರಸವತ್ತಾಗಿ ಕಟ್ಟಿಕೊಟ್ಟಿದ್ದಾರೆ. ಹೋಮಿಯೋಪಥಿ ವೈದ್ಯರಾಗಿದ್ದರೂ ಗಿಡಮೂಲಿಕೆಗಳು, ಆಯುರ್ವೇದ ಚಿಕಿತ್ಸೆಯಲ್ಲಿ ಅವುಗಳ ಬಳಕೆ, ಸೋಲಿಗರ ನಾಟಿ ಚಿಕಿತ್ಸೆಯ ಜ್ಞಾನದ ಕುರಿತು ಪ್ರಸ್ತಾಪಿಸಿದ್ದಾರೆ. ಗಿರಿಜನರ ಜೀವನ, ಸಂಸ್ಕೃತಿ, ಅವರು ಆಚರಿಸುವ ಹಬ್ಬಗಳು, ಬಿಳಿಗಿರಿರಂಗನಬೆಟ್ಟದ ಸೌಂದರ್ಯ, ದೊಡ್ಡ ಸಂಪಿಗೆ ಸೇರಿದಂತೆ ಬಿಳಿಗಿರಿ ಕಾನನದಲ್ಲಿರುವ ಪ್ರಮುಖ ಸ್ಥಳಗಳು, ಪ್ರಾಣಿಗಳು, ಅವುಗಳಿಂದ ಎದುರಾದ ಅಪಾಯದ ಸನ್ನಿವೇಶಗಳು, ಕಂಡ ಪಕ್ಷಿಗಳ ವಿವರಗಳನ್ನೂ ಪುಸ್ತಕದಲ್ಲಿ ದಾಖಲಿಸುವ ಪ್ರಯತ್ನ ಮಾಡಿದ್ದಾರೆ.