ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಪುಸ್ತಕ ಪರಿಚಯ: ಭವಿಷ್ಯದ ಭಾರತಕ್ಕೆ ಪಥವಾಗಬಲ್ಲ ಕೃತಿ

Published 9 ಜೂನ್ 2024, 1:00 IST
Last Updated 9 ಜೂನ್ 2024, 1:00 IST
ಅಕ್ಷರ ಗಾತ್ರ

ಆವಧ್‌ ಸಂಸ್ಥಾನದ ಇಬ್ಬರು ಶ್ರೀಮಂತ ನವಾಬರು ಚದುರಂಗ ಆಡುತ್ತಾ ಕೂತಿರುವ ಹೊತ್ತಿಗೆ ಬ್ರಿಟಿಷರ ಈಸ್ಟ್‌ ಇಂಡಿಯಾ ಕಂಪನಿ ಈ ಇಡೀ ಸಂಸ್ಥಾನವನ್ನು ತನ್ನ ಹಿಡಿತಕ್ಕೆ ತೆಗೆದುಕೊಳ್ಳುತ್ತದೆ. ಇಂದಿನ ಸ್ಥಿತಿಯೂ ಹೀಗೇ ಇದೆ. ಪಕ್ಕದಲ್ಲಿರುವ ಚೀನಾ ಬೆಳವಣಿಗೆಯು ಭಾರತದ ಸ್ಪರ್ಧಾತ್ಮಕತೆಯನ್ನು ಹರಿತಗೊಳಿಸಿಕೊಳ್ಳಲು ಪ್ರೇರಣೆಯಂತೆ ಕೆಲಸ ಮಾಡಬೇಕು’ ಎನ್ನುವ ಮಾತಿನಿಂದ ಹಿಂದಿನ ಸರ್ಕಾರದಲ್ಲಿ ವಿದೇಶಾಂಗ ಸಚಿವರಾಗಿದ್ದ ಎಸ್.ಜೈಶಂಕರ್ ಅವರ ‘ದಿ ಇಂಡಿಯಾ ವೇ’: ಸ್ಟ್ರಾಟಜೀಸ್‌ ಫಾರ್‌ ಆ್ಯನ್‌ ಅನ್‌ಸರ್ಟೈನ್‌ ವರ್ಲ್ಡ್‌’ ಕೃತಿ ಆರಂಭವಾಗುತ್ತದೆ.

ರಾಜತಾಂತ್ರಿಕ ಕ್ಷೇತ್ರದಲ್ಲಿ ನಾಲ್ಕು ದಶಕಗಳ ಕಾಲ ಕೆಲಸ ಮಾಡಿದ ಅನುಭವ ಹೊಂದಿರುವ ಎಸ್.ಜೈಶಂಕರ್ ಅವರು ವಿದೇಶಾಂಗ ಸಚಿವರಾಗಿಯೂ ಸಾಕಷ್ಟು ಹೆಸರು ಮಾಡಿದವರು. ನಿವೃತ್ತರಾದ ನಂತರ ರಾಜಕೀಯ ಪ್ರವೇಶ ಹಾಗೂ ಸರ್ಕಾರದ ಭಾಗವಾದ ಬಳಿಕ ತಮ್ಮ ವೃತ್ತಿ ಬದುಕಿನ ಹಲವು ಸವಾಲು, ಅವುಗಳನ್ನು ಪರಿಹರಿಸಿದ ಪರಿ ಮತ್ತು ತಮ್ಮ ವಿದೇಶಾಂಗ ನೀತಿಗಳ ಕುರಿತು ಹಲವು ವೇದಿಕೆಗಳಲ್ಲಿ ಹಂಚಿಕೊಂಡ ವಿಚಾರಗಳೇ ಅಕ್ಷರರೂಪ ತಾಳಿವೆ. ಇವರ ಈ ಕೃತಿಯನ್ನು ಪತ್ರಕರ್ತ ಹಾಗೂ ಲೇಖಕ ಬಿ.ಎಸ್.ಜಯಪ್ರಕಾಶ ನಾರಾಯಣ ಅವರು ಅನುವಾದಿಸಿ ‘ಭಾರತ ಪಥ’ ಎಂಬ ಶೀರ್ಷಿಕೆಯನ್ನಿಟ್ಟಿದ್ದಾರೆ.

ಗತಿಸಿದ ಹಲವು ತಪ್ಪುಗಳ ಜತೆಗೆ, ಭವಿಷ್ಯದಲ್ಲಿ ಭಾರತವನ್ನು ಆವಧ್‌ ಸಂಸ್ಥಾನ ಕಬಳಿಸಿದ ಬ್ರಿಟಿಷರಂತೆ ಇತರರ ಅಪಾಯಗಳಿಗೆ ಸಿಲುಕದಂತೆ ಮುನ್ನಡೆಸುವ ಹಾಗೂ ಜಾಗತಿಕ ಮಟ್ಟದಲ್ಲಿ ದೇಶವನ್ನು ಸುಭದ್ರವನ್ನಾಗಿಸುವ ಕನಸುಗಳ ಕುರಿತು ಜೈಶಂಕರ್ ಹೇಳಿದ್ದಾರೆ.

ಆಯಾ ಕಾಲಘಟ್ಟಕ್ಕೆ ತಕ್ಕಂತೆ ಬದಲಾಗುತ್ತಿದ್ದ ವಿದೇಶಾಂಗ ನೀತಿಗಳನ್ನು ವಿವರವಾಗಿ ಈ ಕೃತಿಯಲ್ಲಿ ಹೇಳಲಾಗಿದೆ. ಬಾಂಗ್ಲಾದೇಶ ವಿಮೋಚನೆಯು ದೇಶದ ದಿಸೆಯನ್ನೇ ಬದಲಿಸಿದ ಕಾಲಘಟ್ಟ, ಶ್ರೀಲಂಕಾದಲ್ಲಿರುವ ತಮಿಳರಿಗೆ ನೆರವಾಗುವ ಭಾರತದ ಉದ್ದೇಶದಿಂದ 1200 ಯೋಧರು ಹುತಾತ್ಮರಾಗುವುದರ ಜತೆಗೆ ಮಾಜಿ ಪ್ರಧಾನಿ ರಾಜೀವ ಗಾಂಧಿ ಅವರ ಹತ್ಯೆಯೂ ನಡೆದ ಪರಿ,ಚೀನಾದೊಂದಿಗಿನ ರಾಜತಾಂತ್ರಿಕ ಸಂಬಂಧ ಇತ್ಯಾದಿಗಳು ವಿದೇಶಾಂಗ ನೀತಿ ಕುರಿತ ಮಾಹಿತಿ ನೀಡುತ್ತದೆ. ಈ ಕೃತಿ ಅಧ್ಯಯನಶೀಲರಿಗೆ ನೆರವಾಗಬಲ್ಲದು.

Cut-off box - ಭಾರತ ಪಥ ಇಂಗ್ಲಿಷ್ ಮೂಲ: ಎಸ್ ಜೈಶಂಕರ್ಕನ್ನಡಕ್ಕೆ: ಬಿ.ಎಸ್. ಜಯಪ್ರಕಾಶ ನಾರಾಯಣಪ್ರ: ಅರವಿಂದ ಇಂಡಿಯಾದೂ: 9902445501

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT