ಲೇಖಕ ರಾಸಿತ್ ಅಶೋಕನ್ ಸ್ವತಃ ಗಿಲ್ಲನ್ ಬ್ಯಾರಿ ಸಿಂಡ್ರೋಮ್ಗೆ ಒಳಗಾಗಿ ನಾಲ್ಕು ತಿಂಗಳು ಐಸಿಯುವಿನಲ್ಲಿದ್ದು ಚಿಕಿತ್ಸೆ ಪಡೆದು ಸಾವು ಬದುಕಿನ ಮಧ್ಯೆ ಹೋರಾಡಿದ ಅನುಭವ ಈ ಹೊತ್ತಗೆಯಲ್ಲಿದೆ. ಕಾಯಿಲೆಗೆ ತುತ್ತಾಗಿ ಅದರಲ್ಲಿಯೇ ಬೇಯುತ್ತಿದ್ದರೂ ಓದುಗರಿಗೆ ರೋಚಕವಾಗಿ ತಮ್ಮ ಹೋರಾಟದ ಕಥೆಯನ್ನು ಕಟ್ಟಿಕೊಟ್ಟಿದ್ದಾರೆ. ಯಾವುದೇ ಭಯಾನಕ ಕಾಯಿಲೆ ಬಂದಾಗ ರೋಗಿ ಮೊದಲಿಗೆ ಮಾನಸಿಕವಾಗಿ ಕುಗ್ಗುತ್ತಾನೆ. ಖಿನ್ನತೆ, ಕೀಳರಿಮೆ ಮುಂತಾದ ಮಾನಸಿಕ ವೇದನೆಗೊಳಗಾಗುತ್ತಾನೆ. ಆದರೆ ಇಲ್ಲಿ ರಾಸಿತ್ ವ್ಯಕ್ತಿತ್ವ ಭಿನ್ನ. ಎಂತಹ ವಿಷಮ ಪರಿಸ್ಥಿತಿಯಲ್ಲೂ ಮನೋಸ್ಥೈರ್ಯ ಕಳೆದುಕೊಳ್ಳದೆ, ಆತ್ಮವಿಶ್ವಾಸ ಹೆಚ್ಚಿಸಿಕೊಳ್ಳುತ್ತಾ ಕಾಯಿಲೆಯನ್ನು ಧೈರ್ಯವಾಗಿ ಎದುರಿಸಿದ ‘ಗಟ್ಟಿಗ’.