ಒಟ್ಟು ಹನ್ನೊಂದು ಅಧ್ಯಾಯಗಳಲ್ಲಿ ಚಿಗರೆ, ಜೇನು, ಕರಡಿ, ಹುಲಿ, ಹಸು, ಕರ, ಆನೆ ಜೊತೆಗೆ ಲೇಖಕಿಯ ಕುಟುಂಬದ ಬದುಕು, ಬವಣೆ ಎಲ್ಲವೂ ಬಿಚ್ಚಿಕೊಳ್ಳುತ್ತ ಹೋಗುತ್ತವೆ. ಕಾಡು ಆಕರ್ಷಿಸುತ್ತ ಹೋದರೂ ಮನದೊಳಗೆ ಆತಂಕವನ್ನೂ ಸೃಷ್ಟಿಸುತ್ತ ಹೋಗುತ್ತದೆ. ಹುಲಿಗೆ ಬಲಿಯಾಗುವ ಹಸುವಿನ ಸನ್ನಿವೇಶ ಓದುವಾಗಲಂತೂ ಭಾವುಕರಾಗುತ್ತೇವೆ. ನಮ್ಮ ಪರಿಸರ; ನಮ್ಮ ಊರು, ನಮ್ಮೊಳಗೆ ನೆನಪೂರಿ, ನೆನಪಿನ ಮರದ ಮೇಲಿನ ಮಳೆ ಹನಿ ಉದುರಿಸಿದಂತಿದೆ ಪುಸ್ತಕ. ಪ್ರತಿ ಅಧ್ಯಾಯದ ಕೊನೆಯಲ್ಲಿ ಬರುವ ಮಾತು ಚಿಂತನೆಗೆ ಹಚ್ಚುತ್ತವೆ. ಒಂದೆರಡು ಕ್ಷಣ ಪುಸ್ತಕ ಎದೆಮೇಲೆ ವಿರಮಿಸುವಂತೆ ಮಾಡುತ್ತವೆ. ಮತ್ತು ಆ ಮಾತುಗಳು ನಮ್ಮಲ್ಲಿ ಒಂದು ವಿಷಾದವನ್ನೂ, ಕೆಲವೊಮ್ಮೆ ಆಶಾಭಾವವನ್ನೂ ತುಂಬುತ್ತವೆ. ಜೊತೆಗೆ ಮುಂದಿನ ಅಧ್ಯಾಯ ಓದುವಂತೆ ಮಾಡುತ್ತದೆ.