ಲೇಖಕರ ಸಾಹಿತ್ಯ ಪ್ರೀತಿಯನ್ನು ಅವರ ಬರವಣಿಗೆಯಲ್ಲೇ ಕಾಣಬಹುದಾಗಿದೆ. ನಿವೃತ್ತಿ ನಂತರ ಲೇಖನಿ ಹಿಡಿದು ರಚಿಸಿರುವ ಈ ಕೃತಿ ಅವರ ಅನುಭವಗಳನ್ನು ರುಚಿಕಟ್ಟಾಗಿ ಕಟ್ಟಿಕೊಟ್ಟಿದೆ. ಬಳಸಿರುವ ಭಾಷೆ ಆಕರ್ಷಕವಾಗಿದೆ. ಮಲೆನಾಡು–ಬಯಲುಸೀಮೆ ಜೋಡಿಯ ಸ್ವಾರಸ್ಯಕರ ಘಟನೆಗಳಿಂದಲೇ ಕೃತಿ ಆರಂಭವಾಗುತ್ತದೆ. ಲೇಖಕರು ಬರವಣಿಗೆ ಒಂದು ರೀತಿಯಲ್ಲಿ ಅನನುಕ್ರಮಣಿಕೆಯ ಚಿತ್ರಕಥೆಯ ರೀತಿಯಂತಿದೆ. ಹಲವು ನೆನಪುಗಳನ್ನು ಮೆಲುಕು ಹಾಕುತ್ತಾ, ಅದರೊಳಗೆ ಹಿಂದಿನ ಘಟನೆಗಳನ್ನು ಉಲ್ಲೇಖಿಸುತ್ತಾ ಸಾಗುತ್ತಾರೆ ಪುರುಷೋತ್ತಮ ರಾವ್. ಉದಾಹರಣೆಗೆ ಹೆಂಡತಿ ನೀಡಿದ ಕಷಾಯವೊಂದನ್ನು ಎದುರಿಗಿಟ್ಟುಕೊಂಡು ಬಯಲುಸೀಮೆಯ ಎಮ್ಮೆಯ ವಿವರಣೆಯತ್ತ ಸಾಗುತ್ತಾರೆ. ಅವುಗಳು ಕಲಗಚ್ಚು ಕುಡಿಯುವ ರೀತಿಯನ್ನು ಇವರು ಅಕ್ಷರಗಳಲ್ಲಿ ವರ್ಣಿಸುವುದೇ ಚೆಂದ. ಸಂದರ್ಭಕ್ಕೆ ತಕ್ಕಂತೆ ಹಲವು ವಿಷಯಗಳ ಜೋಡಣೆಗಳನ್ನು ಇಲ್ಲಿ ಕಾಣಬಹುದು.