ಪೇಪರ್ನಿಂದ ಕಣ್ ಹೊರಳಿಸಿ ಕಿಡಕ್ಯಾಗ್ ಹಣಿಕಿ ಹಾಕಿದಾಗ, ದೂರದಾಗ್ ಪ್ರಭ್ಯಾ ಕಳ್ಳ ಬೆಕ್ಕಿನ್ಹಂಗ್ ಆ ಕಡೆ, ಈ ಕಡೆ ನೋಡ್ಕೋತ್ ಬರುದು ಕಾಣುಸ್ತು. ಇಂವಾ ಹಿಂಗ್ಯಾಕ್ ಬರಾಕತ್ತಾನ್ ಅಂತ ಅನಕೋತಲೇ, ಬಾಗಿಲಿಗೆ ಹೋಗಿ ನಿಂತೆ.
‘ಯಾಕೊ ಏನಾತ್. ಸುತ್ತಮುತ್ತ ನೋಡ್ಕೋತ್ ಬರಾಕತ್ತಿಯಲ್ಲ ಏನ್ ಕತಿ. ದ್ಯಾವೇಗೌಡ್ರು, ಸಿದ್ರಾಮಣ್ಣ ಹಳೆಯದನ್ನೆಲ್ಲ ಮರತಂಗ್, ನಾನು ನೀನು ಬನ್ನಿ ತಗೊಂಡು ಬಂಗಾರದ್ಹಾಂಗ್ ಇರಬೇಕಂತ ಹೇಳಿ ಬನ್ನಿ ಕೊಡಬೇಕಂತ ಮಾಡಿದ್ರ ಕಾಣಸ್ಲೆ ಇಲ್ಲ. ಊರಾಗs ಇರ್ಲಿಲ್ಲೇನ್’ ಎಂದೆ.
ನನ್ನ ಮಾತಿಗೆ ಕಿವಿಗೊಡದ ಪ್ರಭ್ಯಾ, ‘ಗಿಳಿಯು ಪಂಜರದೊಳಿಲ್ಲ, ರಾಮ ರಾಮ ಬರಿದೆ ಪಂಜರವಾಯಿತಲ್ಲ’ ಅಂತ ಗೋಣು ಅಳ್ಳಾಡಿಸುತ್ತ ಪುರಂದರ ದಾಸರ ಹಾಡು ಹೇಳ್ತಾ ಮನಿ ಒಳಗ್ ಕಾಲಿಟ್ಟ.
‘ನೀ ಹೇಳೋದು ಖರೆ ಅದ. ಒಂದಲ್ಲ ಎರಡೂ ಗಿಳಿಗಳು ಪಂಜರದ ಒಳಗಿಲ್ಲ. ಕೇಂದ್ರ ಸರ್ಕಾರ ಸಾಕಿದ ಪಂಜರದ ಗಿಳಿ (ಕು)ಖ್ಯಾತಿಯ ಸಿಬಿಐ ಮುಖ್ಯಸ್ಥನ ವಿರುದ್ಧನs ಬೇಹುಗಾರಿಕೆ ನಡೆಸೊ ಅಚ್ಛೇ ದಿನ್ ಬಂದಾವ್. ನಿನ್ನನ್ನ ಐ.ಬಿ ಅಥ್ವಾ ಕಾಂಗ್ರೆಸ್ನವರೇನೂ
ಹಿಡಕೊಂಡು ಹೋಗುದಿಲ್ಲೇಲ್ ಹೆದರ್ಬ್ಯಾಡಾ. ಹಣಿಕಿ ಹಾಕೂದು ನಮ್ಮ ಹುಟ್ಟು(ಕೆಟ್ಟ) ಗುಣಾಲೆ. ಅದು ಸುಟ್ರು ಹೋಗುದಿಲ್ಲ. ಎಲ್ಲಿ ಹೋಗಿದ್ದೆ ಬಾಯಿ ಬಿಡು’ ಎಂದು ಜಬರಿಸಿದೆ.
ಸೋಫಾ ಮ್ಯಾಲಿ ಕುಂಡಿವೂರುತ್ತ, ‘ಬಳ್ಳಾರಿಗೆ’ ಅಂದ ತಣ್ಣಗೆ.
‘ಬಾಯಿಗೆ ಬಂದ್ಹಂಗ್ ಮಾತಾಡೊ ಬಳ್ಳಾರಿ ಚುನಾವಣಾ ಸುದ್ದಿಯನ್ನ ತಂಪೊತ್ನ್ಯಾಗ್ ಯಾಕ್ ನೆನಪ್ಸ್ತಿ. ಅಲ್ಲೆಲ್ಲ ಅಡ್ರೆಸ್s ಇಲ್ಲದೋರ್s ಎಲೆಕ್ಷನ್ನಿಗೆ ನಿಂತಾರ. ಅಲ್ಲಿ ಅಡ್ರೆಸು– ಪಡ್ರೆಸು ಇಲ್ಲದ ನಿನಗೇನ್ ಅಂಥಾ ಘನಂದಾರಿ ಕೆಲ್ಸಾ ಇತ್ತೋ’ ಎಂದು ಪ್ರಶ್ನಿಸಿದೆ.
‘ಇಂಥಾ ಪ್ರಶ್ನೆ ಕೇಳಾಕ್ ನೀನೊಬ್ಬ ಕಡಿಮಿ ಬಿದ್ದಿದ್ದಿ ನೋಡ್. ಅಲ್ಲಪ, ಕಾಂಗ್ರೆಸ್ನ ಇಡೀ ಪಟಾಲಂ ಬಳ್ಳಾರ್ಯಾಗ್ ಬೀಡು ಬಿಟ್ಟದ. ನಾ ಹೋಗಿದ್ದಕ್ಕ ನಿಂಗೇನ್ ಮೆಣಸಿನಕಾಯಿ ಮುರ್ದಂಗ್ ಆಗೇದ ಏನಪಾ’ ಅಂತ ಜವಾರಿ ಭಾಷೆದಾಗs ಬೈದ.
ಅವನ ಮಾತ್ನ ಕಿವಿ ಮ್ಯಾಗ್ ಹಾಕ್ಕೋಳ್ದ, ‘ಅಲ್ಲೇನ್ ಸಮಾಜ ಸೇವಾ ಮಾಡಾಕ್ ಹೋಗಿದ್ದಿ ಏನ್’ ಎಂದೆ.
‘ಇಲ್ಲೋ ಮಾರಾಯಾ. ರಾಜಕೀಯ ಮಾಡು ಉದ್ದೇಶಕ್ಕs ಉಗ್ರಪ್ಪ ವಿರುದ್ಧ ಶಾಂತ ರೀತಿಯಲ್ಲಿ ಪ್ರಚಾರ ಮಾಡಾಕ್ ಅಂತನ ಹೋಗಿದ್ದೆ. ಕನಕಪುರದ ಬಂಡೆಗೆ ಜೈಕಾರ – ಧಿಕ್ಕಾರ, 370ಜೆ, 420, ಹಲ್ಲಿಲ್ಲದ ಹಾವು, ಗೂಂಡಾ ಸಿ.ಎಂ., ಭಾವಿ ಶ್ರೀಮಾನ್ 420 ಸಿ.ಎಂ. ಪರ ಹೇಳಿಕೆ, ಅದಕ್ಕಿಷ್ಟು ಉಲ್ಟಾ ಹೇಳಿಕೆಯ ಗೊಂದಲಾ ನೋಡಿ ತಲಿ ಗಿರ್ ಅಂತು. ಬಳ್ಳಾರಿ ಬಿಸಿಲ್ ತಡ್ಕೊಬಹ್ದು. ಆದ್ರ ರಾಜಕಾರಣಿಗಳ ಹೊಲ್ಸ ಮಾತ್ ಕೇಳಾಕ್ ಮಾತ್ರ ಆಗುದಿಲ್ಲ. ಪ್ರಚಾರದ ಉಸಾಬರೀನ ಬ್ಯಾಡ್ ಅಂತ ಅರ್ಧಕ್ಕ ವಾಪಸ್ ಬಂದ್ಬಿಟ್ಟೆ’ ಎಂದ ಬೇಸರದಿಂದ.
‘ಬಳ್ಯಾರ್ಯಾಗ್ ಯಾರ್ ಜಾದೂ ನಡದೈತಪಾ’ ಎಂದು ಪ್ರಶ್ನಿಸಿದೆ. ‘ಫಲಿತಾಂಶ ಬಂದ್ ನಂತರ ಕುಮಾರಣ್ಣನ ಸರ್ಕಾರ, ಕನಕಪುರದ ಬಂಡೆಗಲ್ಲಿನಂತೆ ಗಟ್ಟಿಯಾಗಿ ನಿಲ್ತದೋ ಇಲ್ಲಾ ಬೀಳ್ತದೊ ಅನ್ನೋದು ನಿರ್ಧಾರ ಆಗ್ತೈತಿ ನೋಡ್’ ಅಂದ, ಗ್ವಾಡಿ ಮ್ಯಾಲ್ ದೀಪಾ ಇಟ್ಟಂಗ್.
‘ಗೂಂಡಾ ಸಿ.ಎಂ ಅಂತ ಬೈಸಿಕೊಂಡಿರುವ ಕುಮಾರಣ್ಣನ ಹಣೆಬರಹ ಏನರ ಇರ್ಲಿ. ಸಿದ್ದರಾಮಯ್ಯನವರು ಬಣ್ಣಿಸಿದಂತೆ ಸೆಕ್ಷನ್ 420 ಮಾತ್ರ ಗೊತ್ತಿರೋ ಶ್ರೀರಾಮುಲುನs ಮುಂದಿನ ಮುಖ್ಯಮಂತ್ರಿ ಅಂತ ಬಿಜೆಪಿಯವ್ರ ಸುದ್ದಿ ಹಬ್ಬಸ್ಯಾರಲ್ಲೋ. ‘ರಿಪಬ್ಲಿಕ್ ಆಫ್ ಬಳ್ಳಾರಿ’ಯ ಅನಭಿಷಕ್ತ ದೊರೆಯ ಖಾಸಾ ದೋಸ್ತ್ ಮತ್ತ ಭಾವಿ ಉಪ ಮುಖ್ಯಮಂತ್ರಿ ಬಿರುದಾಂಕಿತನಿಗೆ ಏಕದಂ ಬಡ್ತಿ ಸಿಕ್ರ ಯಡ್ಡಿ ಗತಿ ಏನೊ ಯಪ್ಪಾ’ ಎಂದೆ ಗಾಬರಿಯಿಂದ.
‘420, 307, 326, 323 ಸೆಕ್ಷನ್ಗಳು ಮಾತ್ರ ಗೊತ್ತಿರುವ, ಸುದ್ಧ ಕನ್ನಡ ಮಾತನಾಡಲು ಬಾರದ ಶ್ರೀಮಾನ್ ಶ್ರೀರಾಮುಲು, ರಾಜ್ಯದ ಭಾವಿ ‘ಮುಮ’ ಆದ್ರ ನವೆಂಬರ್ ಕನ್ನಡಿಗರೆಲ್ಲ ಹೆಮ್ಮೆಪಡುವಂತಹ ಸುದ್ದಿನs ಬಿಡು. ವ್ಯಾಕರಣ ಪಂಡಿತ ಸಿದ್ರಾಮಣ್ಣನಿಂದ ಕನ್ನಡಾ ಪಾಠಾ ಹೇಳಿಸಿದ್ರ ಆಯ್ತಪಾ. ಪರಿಸ್ಥಿತಿಯ ಶಿಶುವೇ ಸಿ.ಎಂ. ಆಗುವಾಗ, 420ಯವರೂ ಸಿ.ಎಂ ಆದ್ರ ನಿನ್ನ ಸೌಭಾಗ್ಯಕ್ಕೆ ಎಣೆ(ಣ್ಣೆ)ಯೇ ಇಲ್ಲ ಬಿಡು.
‘ರಾಜಕೀಯದಾಗ ಇದು ಹೀಂಗs ಅಂತ ಏನೂ ಹೇಳಾಕ್ ಬರುದಿಲ್ಲಪಾ. ರಾಮನಗರದಾಗ್ ಅನಿತಕ್ಕನ ಗೆಲ್ಸಾಕ್ ಕಾಂಗ್ರೆಸ್ನ ಘರ್ ವಾಪಸಿ ಆಪರೇಷನ್ ನೋಡಿ ಬಿಜೆಪಿಯ ನಕಲಿ ಸಾಮ್ರಾಟರೆಲ್ಲ ದಂಗಾಗಿ ಹೋಗ್ಯಾರ್. ಮೂರ್ಛೆ ಹೋಗುದೊಂದ ಬಾಕಿ ಅದ ನೋಡು’ ಎಂದ ಬೇಸರದಿಂದ.
‘ಆಪರೇಷನ್ ಕಮಲ್’ ಮಾಡಬಾರದು ಅಂತ ತೀರ್ಮಾನ್ ಆಗೇದಂತ ಶಾಂತಕ್ಕನ ಪರ ಪ್ರಚಾರ್ಕ ಹೋಗಿರೋ ಶೋಭಕ್ಕ ಹೇಳಿದ್ದಕ್ಕೂ, ಕಾಂಗ್ರೆಸ್ನ ಆಪರೇಷನ್ ಕಮಾಲ್ಕ್ಕೂ ಏನರ ಸಂಬಂಧ ಅದ ಏನ್ಮತ್ತ. ಶಾಸಕರನ್ನ ಖರೀದಿಸುವ ಆಪರೇಷನ್ ಮಾಡ
ದಿದ್ರ ಯಡಿಯೂರಪ್ಪ, ತಿರುಕನೊರ್ವನೂರ ಮುಂದೆ ಮುರುಕು ಧರ್ಮಶಾಲೆಯಲ್ಲಿ... ಅಂತ ಹಾಡು ಹೇಳ್ಕೋತ್ತ ತಿರುಕನ ಕನಸು ಕಾಣ್ಕೋತ್ ಕುಂದರ್ ಬೇಕಾದೀತು ನೋಡ್. ಶೋಭಕ್ಕನ ಮಾತು ಖರೇನ ಇದ್ರ, ಕಾರಣಿಕ ಹೇಳ್ದಂಗ್, ‘ಸರ್ವರೂ ತಂಪಲೆ, ನಾಡು ತಂಪಲೇ.. ಬಹುಪರಾಕ್, ಬಹುಪರಾಕ್’ ಅಂತ ಮಾತಿಗೆ ಮಂಗಳ ಹಾಡ್ದೆ.
ನನ್ನ ಮಾತಿಗೆ ಕಕ್ಕಾಬಿಕ್ಕಿಯಾದ ಪ್ರಭ್ಯಾ, ಶಿವಲಿಂಗದ ಮೇಲಿನ ಚೇಳು ಕುಟುಕಿಸಿಕೊಂಡ ನೋವಿನಂತೆ ಮುಖ ಮಾಡ್ದ. ಏನ್ ಹೇಳಬೇಕೆಂದು ಗೊತ್ತಾಗ್ದ, ಏಕಾಏಕಿ, ‘ನೀನೇ ಸಾಕಿದಾ ಗಿಣಿ, ನಿನ್ನಾ ಮುದ್ದಿನಾ ಗಿಣಿ, ಹದ್ದಾಗಿ ಕುಕ್ಕಿತಲ್ಲೋ...’ ಎಂದು ಹಾಡು ಗುನುಗುನಿಸುತ್ತ ಹೊಂಟ.
‘ಬಿಗ್ ಬಾಸ್ ಚಾಲು ಆಯ್ತು. ಜಲ್ದಿ ಬರ್ರೀ’ ಅಂತಕರೆದ ಹೆಂಡತಿಯ ಮಾತಿಗೆ ಓಗೊಟ್ಟು ಒಳನಡೆದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.