ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬನ್ನಿ, ಗೌರೀ ಗಣೇಶ ಪೂಜೆಯ ಮಾಡೋಣ

Last Updated 1 ಸೆಪ್ಟೆಂಬರ್ 2019, 11:06 IST
ಅಕ್ಷರ ಗಾತ್ರ

ಗೌರೀಹಬ್ಬವು ಹಬ್ಬದ ಹಿಂದಿನ ದಿನವೇ ನಿಜವಾಗಿ ಆರಂಭವಾಗುತ್ತದೆ. ನಾಳೆ ವ್ರತವನ್ನು ಮಾಡುವೆ – ಎಂದು ಸಂಕಲ್ಪಿಸಿ ಉಪವಾಸ ಮಾಡಿ ದೇವರನ್ನು ಧ್ಯಾನಿಸುತ್ತಾ ನಿದ್ರಿಸಬೇಕು. ವ್ರತದ ದಿನ ನಸುಕಿನಲ್ಲೆದ್ದು, ಬಾಗಿಲನ್ನು ರಂಗವಲ್ಲಿಯಿಂದ ಸಿಂಗರಿಸಿ, ಮೈಗೆ ಎಣ್ಣೆ ಹಚ್ಚಿಕೊಂಡು ಮುಡಿಯಿಂದ ಅಡಿಯವರೆಗೂ ಮಿಂದು ಮಡಿಯ ಬಟ್ಟೆ ಉಟ್ಟುಕೊಂಡು ಹಣೆಗೆ ಲಾಂಛನವನ್ನು ಇಟ್ಟುಕೊಂಡು ಪೂಜಿಸಲು ಸಿದ್ಧರಾಗಬೇಕು.

ಮಂಟಪದಲ್ಲಿ ಕಲಶವನ್ನು ಅಥವಾ ಹೊಂಬಣ್ಣದ ಶ್ರೀಗೌರಿಯ ಮೂರ್ತಿಯನ್ನು ಇಡಬೇಕು. ಎಲೆಯಲ್ಲಿ ಅಕ್ಕಿಯ ಮೇಲೆ ಪಾತ್ರೆಯನ್ನು ಇಟ್ಟು ನೀರನ್ನು ತುಂಬಬೇಕು. ಅದರ ಮೇಲೆ ಐದು ಎಲೆಗಳಿರುವ ಮಾವಿನ ಚಿಗುರನ್ನು ಇಟ್ಟು, ಮೇಲಿನಿಂದ ತೆಂಗಿನಕಾಯಿ ವಸ್ತ್ರ ಬಳೆಗಳನ್ನಿಟ್ಟು ಅಲಂಕರಿಸಬೇಕು.

ಸ್ವರ್ಣ ಗೌರೀ ವ್ರತ
ಪೂಜೆಯನ್ನು ‘ಶ್ರೀಗೌರ್ಯೈ ನಮಃ’ ಎಂದೋ, ‘ಶ್ರೀಸ್ವರ್ಣಗೌರ್ಯೈ ನಮಃ’ ಎಂದೋ ಹೇಳುತ್ತಾ ಆವಾಹನ ಆಸನ ಪಾದ್ಯ ಅರ್ಘ್ಯ ಅಭಿಷೇಕ ಗಂಧ ಹೂ ಅಕ್ಷತೆ ಧೂಪ ದೀಪ ನೈವೇದ್ಯ ಆರತಿ ಪ್ರದಕ್ಷಿಣ ನಮಸ್ಕಾರ ಪ್ರಾರ್ಥನೆಗಳನ್ನು ಮಾಡಬಹುದು.

ಸರ್ವಮಂಗಲಮಾಂಗಲ್ಯೇ ಶಿವೇ ಸರ್ವಾರ್ಥಸಾಧಿಕೇ |
ಶರಣ್ಯೇ ತ್ರ್ಯಂಬಕೇ ಗೌರಿ ನಾರಾಯಣಿ ನಮೋಸ್ತುತೇ ||

– ಎಂಬ ಮಂತ್ರವನ್ನು ಹೇಳೊಕೊಂಡು ಕೂಡ ಪೂಜೆ ಮಾಡಬಹುದು.

ಅದಲ್ಲದಿದ್ದರೆ ಭಕ್ತಿಯಿಂದ ಹಾಡುಗಳನ್ನು ಹೇಳುತ್ತಾ ಪೂಜೆಯನ್ನು ನೆರವೇರಿಸಬಹುದು. ಒಂದು ಸುಪ್ರಸಿದ್ಧವಾದ ಹಾಡು ಹೀಗಿದೆ:
ಪೂಜಿಸಿದಳು ಗೌರಿಯ | ರುಕ್ಮಿಣಿ ದೇವಿ
ಪೂಜಿಸಿದಳು ಗೌರಿಯ...

ದೋರಗ್ರಂಥಿ: ಹದಿನಾರು ಗಂಟುಗಳಿರುವ ನೂಲನ್ನು ಪುಷ್ಪ ಪತ್ರ ಪೂಜೆಯಾದ ಮೇಲೆ ಪೂಜಿಸುತ್ತಾರೆ:

ಸ್ವರ್ಣಗೌರ್ಯೈ ನಮಃ | ಮಹಾಗೌರ್ಯೈ ನಮಃ | ಕಾತ್ಯಾಯನ್ಯೈ ನಮಃ | ಕೌಮಾರ್ಯೈ ನಮಃ | ಭದ್ರಾಯೈ ನಮಃ | ವಿಷ್ಣುಸುಂದರ್ಯೈ ನಮಃ | ಮಂಗಳದೇವತಾಯೈ ನಮಃ | ರಾಕೇಂದು ವದನಾಯೈ ನಮಃ | ಚಂದ್ರಶೇಖರಪತ್ನ್ಯೈ ನಮಃ | ವಿಶ್ವೇಶ್ವರಪ್ರಿಯಾಯೈ ನಮಃ | ದಾಕ್ಷಾಯಣ್ಯೈ ನಮಃ | ಕೃಷ್ಣವೇಣ್ಯೈ ನಮಃ | ಲೋಲಲೋಚನಾಯೈ ನಮಃ | ಭವಾನ್ಯೈ ನಮಃ | ಚಂಪಕಾತ್ಮಜಾಯೈ ನಮಃ | ಮಹಾಗೌರ್ಯೈ ನಮಃ

ಈ ನಾಮಗಳಿಂದ ಪೂಜಿಸಿದ ದೋರವನ್ನು ಧರಿಸಿದರೆ ಬಯಕೆಗಳೆಲ್ಲವೂ ದೊರೆಯುತ್ತವೆ. ಪೂಜೆಯನ್ನು ಮಾಡಿ ಕಥೆಯನ್ನು ಕೇಳಬೇಕೆಂದು ಹೇಳುತ್ತಾರೆ.

ಸ್ವರ್ಣಗೌರಿಯು ಮಹಿಳೆಯರ ಪ್ರಾರ್ಥನೆಯನ್ನು ಆಲಿಸುವುದಕ್ಕಾಗಿ ಭಾದ್ರಪದ ಶುಕ್ಲ ತದಿಗೆಯ ದಿನ ಕೈಲಾಸದಿಂದ ಹೊರಟು ಎಲ್ಲೆಡೆಯೂ ಸಂಚರಿಸುತ್ತಾಳೆ. ಅವಳನ್ನು ಹಿಂದಿರುಗಿ ಕರೆತರುವಂತೆ ಶಿವನು ಗಣೇಶನನ್ನು ಕಳುಹಿಸುತ್ತಾನೆ. ತಾಯಿಯ ಜೊತೆಗೂಡಿದ ಬೆನಕನು ಎಲ್ಲರ ಪೂಜೆ-ಪುನಸ್ಕಾರಗಳನ್ನು ಸ್ವೀಕರಿಸಿ ಕೈಲಾಸಕ್ಕೆ ಹಿಂದಿರುಗುತ್ತಾನೆ.

ಈ ಪೂಜೆಯನ್ನು ಪಾಂಡವರಲ್ಲಿ ಅಗ್ರಜನಾದ ಧರ್ಮರಾಜನೂ ಶ್ರೀಕೃಷ್ಣನೂ ಆಚರಿಸಿದರೆಂದು ಹೇಳುತ್ತಾರೆ. ಒಂದು ಶ್ಲೋಕವನ್ನು ಈ ಸಂದರ್ಭದಲ್ಲಿ ಹೇಳುತ್ತಾರೆ:
ಸಿಂಹಃ ಪ್ರಸೇನಮವಧೀತ್ ಸಿಂಹೋ ಜಾಂಬವತಾ ಹತಃ |
ಸುಕುಮಾರಕ ಮಾ ರೋದೀಸ್ತವ ಹ್ಯೇಷ ಸ್ಯಮಂತಕಃ ||

(ಸಿಂಹವು ಪ್ರಸೇನನನ್ನು ಕೊಂದಿತು. ಸಿಂಹವು ಜಾಂಬವಂತನಿಂದ ಕೊಲ್ಲಲ್ಪಟ್ಟಿತು. ಮಗುವೇ, ಅಳಬೇಡ. ಈ ಸ್ಯಮಂತಕ ಮಣಿ ನಿನ್ನದೇ.)

ಈ ಪೂಜೆಯನ್ನು ಎಲ್ಲರೊಂದಿಗೆ ಆಚರಿಸಿ, ಕಥೆಯನ್ನು ಕೇಳುವುದು ಶ್ರೇಯಸ್ಕರವಾದುದು. ಅಂತಹ ಜನರು ಅಕಸ್ಮಾತ್ತಾಗಿ ಚಂದ್ರನನ್ನು ನೋಡಿದರೂ ದೋಷವಿಲ್ಲ.

ವರಸಿದ್ಧಿ ವಿನಾಯಕ ವ್ರತ
ಗೌರೀವ್ರತವನ್ನು ಆಚರಿಸಿದ ದಿನವೇ ಸಂಜೆ ಗಣೇಶನ ಪೂಜೆಯ ಸಿದ್ಧತೆಯನ್ನು ಆರಂಭಿಸಬೇಕು. (ಈ ವರ್ಷ ಗೌರೀವ್ರತ ಮತ್ತು ಗಣೇಶನ ಹಬ್ಬ ಎರಡೂ ಒಂದೇ ದಿನ ಬಂದಿದೆ.) ಮಣ್ಣಿನ ಮೂರ್ತಿಯನ್ನು ತಂದು ಪೂಜಾ ಸಾಮಗ್ರಿಗಳನ್ನು ಸಂಗ್ರಹಿಸಬೇಕು. ಬೆಳಿಗ್ಗೆ ಬೇಗನೆ ಎದ್ದು ಮಂಗಳ ಸ್ನಾನವನ್ನು ಮಾಡಿ, ಕಲಶ ಸ್ಥಾಪನೆಯೊಂದಿಗೆ ಪ್ರತಿಮೆಯನ್ನು ಸ್ಥಾಪಿಸಿ, ‘ಶ್ರೀಗಣೇಶಾಯ ನಮಃ’ ಎಂಬ ಮಂತ್ರವನ್ನು ಹೇಳುತ್ತಾ ಪೂಜೆಯನ್ನು ಮಾಡಬೇಕು.

1. ಧ್ಯಾನ:ಮಹಾಗಣಪತಿಯನ್ನು ಏಕದಂತ ಶೂರ್ಪಕರ್ಣ ಗಜವಕ್ತ್ರ ಚತುರ್ಭುಜ ಪಾಶಾಂಕುಶಧರ – ಎಂದು ಮುಂತಾಗಿ ಧ್ಯಾನ ಮಾಡಬೇಕು.

2. ಆವಾಹನ:ಧ್ಯಾನ ಮಾಡಿದಾಗ ಪರಮಾತ್ಮನು ಅಲ್ಲಿ ಆವಿರ್ಭಾವ ಹೊಂದುತ್ತಾನೆ. ಅವನನ್ನು ಪೂಜೆಗಾಗಿ ಸ್ವಾಗತಿಸುವುದು ಆವಾಹನ.

3. ಆಸನ:ಆವಾಹನವಾದ ಮೇಲೆ, ಭಗವಂತನನ್ನು ರತ್ನಮಯ/ಸುವರ್ಣಮಯ ಪೀಠದಲ್ಲಿ ಆಸೀನನಾಗುವಂತೆ ಪ್ರಾರ್ಥಿಸಬೇಕು. ಸಾಮಾನ್ಯವಾಗಿ ಪೀಠದ ಮೇಲೆ ಗಣಪನನ್ನು ಕುಳ್ಳಿರಿಸುತ್ತಾರೆ.

4. ಪಾದ್ಯ:ಮಾನಸ–ಕೈಲಾಸದಿಂದ ಭೂಮಿಗಿಳಿದು ಬಂದಿರುವ ಗಣಪತಿಗೆ ನೀರನ್ನು ಕೊಟ್ಟು ಸತ್ಕರಿಸಲಾಗುತ್ತದೆ.

5. ಅರ್ಘ್ಯ:ಕಾಲಿಗೆ ನೀರು ಕೊಟ್ಟು ಗೌರವಿಸಿದಂತೆ ಕೈಗೂ ನೀರನ್ನು ಕೊಡಬೇಕು.

6. ಅಭಿಷೇಕ:ತೈಲದಿಂದಲೂ ಪಂಚಾಮೃತದಿಂದಲೂ ಪುಣ್ಯಜಲದಿಂದಲೂ ಪ್ರತಿಮೆಯನ್ನು ಪ್ರೋಕ್ಷಿಸುವುದೇ ಅಭಿಷೇಕವಾಗಿರುತ್ತದೆ. ಕೆಲವರು ಈ ಉದ್ದೇಶಕ್ಕಾಗಿ ಸುವರ್ಣ-ರಜತಮಯಾದಿ ಪ್ರತಿಮೆಯನ್ನೇ ಇಟ್ಟುಕೊಳ್ಳುತ್ತಾರೆ.

7. ವಸ್ತ್ರ:ವಸ್ತ್ರವು ಕೆಂಪುಬಣ್ಣದ್ದಾದರೆ ಒಳ್ಳೆಯದು. ಎರಡು ವಸ್ತ್ರ ಇದ್ದರೆ ಇನ್ನೂ ಒಳ್ಳೆಯದು. ಒಂದು ಉಡುಗೆ. ಇನ್ನೊಂದು ತೊಡುಗೆ ಅಥವಾ ಮೇಲು ಹೊದಿಕೆ. ಪ್ರತಿಮೆಗೆ ಅಲ್ಲದಿದ್ದರೂ ಕಲಶದ ಮೇಲೆ ಅವುಗಳನ್ನು ಇಡಬೇಕು.

8. ಉಪವೀತ:ಮಂತ್ರಗಳಿಂದ ಆಭಿಮಂತ್ರಿಸಿದ ಉಪವೀತವನ್ನು ಗಣಪತಿಗೆ ತೊಡಿಸುತ್ತಾರೆ.

9. ಆಭರಣ:ಪೂಜೆಗಾಗಿ ಒಡವೆಗಳನ್ನು ಇಡುವ ರೂಢಿಯಿದೆ. ಒಡವೆಯ ಬದಲಾಗಿ ಒಂದು ನಾಣ್ಯವನ್ನು ಕೂಡ ಇಡಬಹುದು.

10. ಗಂಧ:ಸಿಂದೂರ ಅಷ್ಟಗಂಧ ಚಂದನ ರಕ್ತಚಂದನ ಅರಿಸಿನ ಕುಂಕುಮಗಳನ್ನು ಸಮರ್ಪಿಸುತ್ತಾರೆ.

11. ಅಕ್ಷತೆ:ಸಾಮಾನ್ಯವಾಗಿ ಕೆಂಪು ಅಕ್ಷತೆಯನ್ನು ಉಪಯೋಗಿಸುತ್ತಾರೆ.

12. ಪುಷ್ಪಪೂಜೆ:ಇದರಲ್ಲಿ ಬಗೆಬಗೆಯ ಹೂಗಳ ಉಲ್ಲೇಖವಿದೆಯಾದರೂ ಸುಲಭವಾಗಿ ದೊರೆಯುವ ಹೂಗಳನ್ನು ಸಂಗ್ರಹಿಸಿ ಏರಿಸುತ್ತಾರೆ. ಅದರಂತೆ ಬ್ರಾಹ್ಮೀ ಬದನೆ ಬಿಲ್ವ ಗರಿಕೆ ದುತ್ತೂರ ಬದರಿ ಉತ್ತರಣೆ ತುಳಸಿ ಮಾವು ಕರವೀರ ವಿಷ್ಣುಕ್ರಾಂತ ದಾಳಿಂಬೆ ದೇವದಾರು ಮರುವೆ ಸಿಂಧುವಾರ ಜಾಜಿ ಬಿಳೀಗರಿಕೆ ಶಮಿ ಆರಳಿ ಮುತ್ತುಗ ಎಕ್ಕೆ ಎಂಬ 21 ಬಗೆಯ ಪತ್ರೆಗಳನ್ನೂ ತಂದು ಪೂಜಿಸುತ್ತಾರೆ.ಈ ಸಂದರ್ಭದಲ್ಲಿ ಅಷ್ಟೋತ್ತರಶತನಾಮ, ಸಹಸ್ರನಾಮ, ದ್ವಾದಶನಾಮಗಳನ್ನು ಹೇಳಬಹುದು.

13. ಧೂಪ:ಅಗರುಬತ್ತಿಗಳನ್ನೂ ಸುವಾಸನೆ ಬೀರುವ ಗುಗ್ಗುಳವನ್ನೂ ಇಲ್ಲಿ ಬಳಸುತ್ತಾರೆ.

14. ದೀಪ:ಎಣ್ಣೆ/ತುಪ್ಪದ ದೀಪವನ್ನೂ ಬೆಳಗುತ್ತಾರೆ.

15. ನೈವೇದ್ಯ:ಸಾತ್ವಿಕ ಆಹಾರಗಳೆಲ್ಲವನ್ನೂ ದೇವರಿಗೆ ಅರ್ಪಿಸಬಹುದು. ಚಕ್ಕುಲಿ ಉಂಡೆ ಕಡಬು ಮುಂತಾದ ತಿನಿಸುಗಳು ಈ ಹಬ್ಬದಲ್ಲಿ ಹೆಚ್ಚಾಗಿಯೇ ಇರುತ್ತವೆ. ಅನೇಕ ಬಗೆಯ ಹಣ್ಣುಗಳನ್ನು ಸಮರ್ಪಿಸುತ್ತಾರೆ.

ಕರ್ಪೂರ, ಅಡಿಕೆ, ದಾಲಚಿನ್ನಿ, ಏಲಕ್ಕಿ ಮುಂತಾದ ಸುಗಂಧಿ ವಸ್ತುಗಳೊಂದಿಗೆ ವೀಳ್ಯದ ಎಲೆಗಳನ್ನು ಇಡುತ್ತಾರೆ. ಇದರ ಜೊತೆಗೆ ದಕ್ಷಿಣೆಯನ್ನೂ ಸೇರಿಸುತ್ತಾರೆ.

16. ನೀರಾಜನ:ಮಂತ್ರಗಳನ್ನೂ ಹಾಡುಗಳನ್ನೂ ಹೇಳುತ್ತಾ ಬಹಳ ಹೊತ್ತಿನ ವರೆಗೆ ಆರತಿ ಮಾಡುವ ರೂಢಿಯಿದೆ.ಮಂತ್ರಪುಷ್ಪ ಪ್ರದಕ್ಷಿಣೆಯಾದ ಮೇಲೆ ದೂರ್ವೆಯ ಸಮರ್ಪಣೆ.

ಗರಿಕೆಯ ಪೂಜೆ
ಇ‍ಪ್ಪತ್ತೊಂದು ಸಂಖ್ಯೆಯಲ್ಲಿ ಗರಿಕೆಯ ಜೋಡಿಗಳನ್ನು ಗಣೇಶನಿಗೆ ಸಮರ್ಪಿಸುವುದು ಪೂಜೆಯಲ್ಲಿ ಅತ್ಯಂತ ಮುಖ್ಯವಾದುದು. ಗಣಾಧಿಪ ಉಮಾಪುತ್ರ ಮುಂತಾದ ಹತ್ತು ನಾಮಗಳೂ ಇಲ್ಲಿವೆ:
ಓಂ ಗಣಾಧಿಪಾಯ ನಮಃ | ಉಮಾಪುತ್ರಾಯ ನಮಃ | ಅಘನಾಶನಾಯ ನಮಃ | ವಿನಾಯಕಾಯ ನಮಃ | ಈಶಪುತ್ರಾಯ ನಮಃ | ಸರ್ವಸಿದ್ಧಿಪ್ರದಾಯಕಾಯ ನಮಃ | ಏಕದಂತಾಯ ನಮಃ | ಇಭವಕ್ತ್ರಾಯ ನಮಃ | ಮೂಷಿಕವಾಹನಾಯ ನಮಃ | ಕುಮಾರಗುರವೇ ನಮಃ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT