ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪುಸ್ತಕ ವಿಮರ್ಷೆ | ದರ್ಶನದೃಷ್ಟಿ

Last Updated 15 ಏಪ್ರಿಲ್ 2020, 19:30 IST
ಅಕ್ಷರ ಗಾತ್ರ

ದೃಷ್ಟಿದರ್ಶನಕ್ಕೂ ದರ್ಶನದೃಷ್ಟಿಗೂ ಭೇದವಿದೆ. ದೃಷ್ಟಿದರ್ಶನ ಬಾಹ್ಯದ್ದು; ದರ್ಶನದೃಷ್ಟಿ ಆಭ್ಯಂತರದ್ದು. ಒಂದು ಸ್ಥೂಲ; ಇನ್ನೊಂದು ಸೂಕ್ಷ್ಮ. ದೃಷ್ಟಿದರ್ಶನವು ಮುಖ್ಯವಾಗಿ ಪೃಥ್ವಿ ಅಪ್‌, ತೇಜಗಳ ರೂಪವನ್ನು ಗ್ರಹಿಸಬಲ್ಲದು. ದರ್ಶನದೃಷ್ಟಿಯು ಮುಖ್ಯವಾಗಿ ವಾಯು–ಆಕಾಶಾತ್ಮಗಳ ರೂಪಸ್ವರೂಪಗಳನ್ನು ಗ್ರಹಿಸಿ ಧರಿಸಬಲ್ಲದು. ಪಂಚಭೂತಗಳ ಗುಣರೂಪುಗಳು ಅನಿತ್ಯ; ಪರಮಾತ್ಮನ ಗುಣರೂಪಗಳು ನಿತ್ಯ. ಆ ನಿತ್ಯಸ್ವರೂಪವನ್ನು ಕಾಣಲು ದರ್ಶನದೃಷ್ಟಿ ಅಗತ್ಯ.

ಇಲ್ಲಿ ದರ್ಶನವೆಂದರೆ ತತ್ತ್ವಶಾಸ್ತ್ರ. ತತ್ತ್ವಶಾಸ್ತ್ರಾವಲೋಕನದಿಂದ ತಾತ್ತ್ವಿಕದೃಷ್ಟಿ ಅಳವಡುತ್ತದೆ.

ದೃಷ್ಟಿ ದ್ವಿವಿಧ. ಒಂದು ಕ್ರಿಯಾದೃಷ್ಟಿ; ಇನ್ನೊಂದು ಜ್ಞಾನದೃಷ್ಟಿ. ಕ್ರಿಯಾದೃಷ್ಟಿಯು ಕಾರ್ಯವನ್ನು ಕಾಣುತ್ತದೆ; ಜ್ಞಾನದೃಷ್ಟಿಯು ಕಾರಣವನ್ನು ಕಾಣುತ್ತದೆ. ಈ ಎರಡು ದೃಷ್ಟಿಗಳಲ್ಲಿದ ಅಂಧರು ಏನನ್ನೂ ಕಾಣರು.

ಕುರುಡರಲ್ಲಿ ಎರಡು ಬಗೆ, ಕಣ್ಣಿಲ್ಲದ ಕುರುಡರು; ಕಣ್ಣಿದ್ದು ಕುರುಡರು. ಕಣ್ಣಿದ್ದೂ ಕಣ್ಣಿಲ್ಲದಂತೆ ಇರುವರು ತೀರ ಕನಿಷ್ಠರು. ಇವರಿಗೆ ಉಭಯದೃಷ್ಟಿಗಳೂ ಇರುವುದಿಲ್ಲ. ಇನ್ನು ಬರೀ ಹೊರಗಣ್ಣಿದ್ದು ಒಳಗಣ್ಣಿಲ್ಲದವರು ಇರುತ್ತಾರೆ. ಇವರು ಒಕ್ಕಣ್ಣಿಗರು. ಹೊರಗಣ್ಣೆರಡರಲ್ಲಿ ಒಂದು ಕಣ್ಣಿಲ್ಲದವರು ಮಾತ್ರ ಒಕ್ಕಣ್ಣಿಗರಲ್ಲ; ಬರೀ ಬಾಹ್ಯದೃಷ್ಟಿಯುಳ್ಳವರಿಗೆ ಎರಡು ಕಣ್ಣಿದ್ದರೂ ಸಹ ಇವರು ಒಕ್ಕಣ್ಣಿಗರು; ಅಂತರದೃಷ್ಟಿರಹಿತರು. ಇವರು ಸಚ್ಚಿದಾನಂದ ನಿತ್ಯಪರಿಪೂರ್ಣ ಅಖಂಡರೂಪ ಪರಮಾತ್ಮತತ್ತ್ವವನ್ನು ಕಾಣರು. ಇವರಿಗೆ ದರ್ಶನದೃಷ್ಟಿ, ಅಂದರೆ ದಾರ್ಶನಿಕ ದೃಷ್ಟಿ ಬೇಕೇ ಬೇಕು.

ಮಾನವನಿಗೆ ಸಮ್ಯಕ್‌ ದೃಷ್ಟಿ–ಸಮದೃಷ್ಟಿಗಳೆರಡೂ ಬೇಕು. ಸರ್ವವನ್ನು, ಸರ್ವರನ್ನು ಆ ಎರಡು ದೃಷ್ಟಿಗಳಿಂದ ನೋಡಬೇಕು. ಅಂಥವನು ಆತ್ಮದ್ರಷ್ಟಾ ಎನಿಸುತ್ತಾನೆ; ಆತನೇ ಕವಿ. ತನ್ನ ಕಣ್ಣು ಚೆನ್ನಾದರೆ ತನಗೆ ಕಾಣುವ ಪ್ರಪಂಚವೆಲ್ಲ ಚೆನ್ನ. ತನ್ನ ದೃಷ್ಟಿಯಂತೆ ಈ ಸೃಷ್ಟಿ. ಸತ್ಯದೃಷ್ಟಿಗೆ ಸೃಷ್ಟಿಯೆಲ್ಲ ಸತ್ಯವಾಗಿ ತೋರುತ್ತದೆ. ಮಿಥ್ಯದೃಷ್ಟಿಗೆ ಮಿಥ್ಯವಾಗಿ ಕಾಣುತ್ತದೆ – ಪಿತ್ತವಾದವನಿಗೆ ಉಳಿದೆಲ್ಲವೂ ಹಳದಿಯಾಗಿ ತೋರುವಂತೆ!

ಕೇವಲ ಬಾಹ್ಯದೃಷ್ಟಿಯಿಂದ ಪ್ರಗತಿ ಸುಗತಿಗಳು ಪ್ರಾಪ್ತವಾಗವು. ಆತ್ಮದೃಷ್ಟಿ ಆವಶ್ಯಕವಾದುದು. ಆ ಆತ್ಮದೃಷ್ಟಿಯನ್ನು ತರುವ ಅಚ್ಚಗುಣ, ಸ್ವಚ್ಛಶಕ್ತಿ ಎಲ್ಲಿದ್ದರೂ ಕಣ್ಣಿಡಬೇಕು; ಕೈಗೂಡಿಸಿಕೊಳ್ಳಬೇಕು. ಇದುವೇ ನಿಜವಾದ ದರ್ಶನದೃಷ್ಟಿ.

(ಸಂಗ್ರಹ)

ಕೃತಿಕೃಪೆ: ಜ.ಚ.ನಿ. ಅವರ ‘ದೃಷ್ಟಿದರ್ಶನ’

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT