ಭಾವಗೀತಾತ್ಮಕ ಭಾಷೆಯ ಮೂಲಕ ಗಮನಸೆಳೆದಿರುವ ಕಥೆಗಾರ ಟಿ.ಎಸ್. ಗೊರವರ ಅವರ ಗದ್ಯ ಕವಿತೆಗಳ ಸಂಕಲನ ‘ಗಾಯಗೊಂಡಿವೆ ತುಟಿ ನಿನ್ನವೇ ಪದ ಹಾಡಿ’. ಮೂರು ಕಥಾ ಸಂಕಲನಗಳು ಹಾಗೂ ಒಂದು ಕಾದಂಬರಿ ಮೂಲಕ ಈಗಾಗಲೇ ಸಾಹಿತ್ಯದ ನೆಲದಲ್ಲಿ ಗಟ್ಟಿಯಾದ ಹೆಜ್ಜೆ ಗುರುತು ಮೂಡಿಸಿರುವ ಗೊರವರ, ಈಗ ರೂಪದಲ್ಲಿ (ಫಾರ್ಮ್) ಹೊಸಹಾದಿಯ ಹುಡುಕಾಟದಲ್ಲಿದ್ದಾರೆ. ಇಲ್ಲಿನ ಬರಹಗಳು ಒಮ್ಮೊಮ್ಮೆ ಗದ್ಯದ ನುಡಿಗಟ್ಟಿಗೆ ಪದ್ಯವನ್ನು ಅಳವಡಿಸಿಕೊಂಡರೆ, ಮತ್ತೆ ಕೆಲವೊಮ್ಮೆ ಪದ್ಯದ ನುಡಿಗಟ್ಟಿಗೆ ಗದ್ಯವನ್ನು ಅಳವಡಿಸಿಕೊಂಡಿರುವುದು ಕುತೂಹಲಕಾರಿ. ಲೇಖಕರೇ ಹೇಳುವಂತೆ ಕಾವ್ಯದ ಲಯ, ಕಲಾತ್ಮಕತೆ, ಅದರ ಚೆಲುವು ಮತ್ತು ಗದ್ಯದ ಕುಸುರಿತನ ಮಿಳಿತಗೊಂಡ ರಚನೆಗಳು ಇವಾಗಿವೆ.